ಪಂಡಿತ್ ಸಂಗಮೇಶ್ವರ ಗುರವ ಕಿರಾಣಾ ಘರಾಣೆಯ ಶ್ರೇಷ್ಠ ಗಾಯಕರಲ್ಲಿ ಒಬ್ಬರು.
ಸಂಗಮೇಶ್ವರ ಗುರವ 1931ರ ಡಿಸೆಂಬರ್ 7ರಂದು ಜನಿಸಿದರು. ಅವರು ಇನ್ನೂ ಒಂಬತ್ತನೇ ಕಿರಿಯ ವಯಸ್ಸಿನಲ್ಲಿಯೇ ಶಾಸ್ತ್ರೀಯ ಗಾಯನದತ್ತ ಆಕರ್ಷಿತರಾಗಿ ಕಿರಾಣ ಘರಾಣದ ಮಹತ್ವದ ಸಾಧಕರಾಗಿ ರೂಪುಗೊಂಡರು. ಸಂಗಮೇಶ್ವರ ಅವರ ತಂದೆ ಗಣಪತರಾವ್ ಗುರವ ಅವರು ಸಹಾ ಮಹಾನ್ ಸಂಗೀತಗಾರರಾಗಿದ್ದು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರಾಗಿದ್ದರು.
1947ರಲ್ಲಿ ಜಮಖಂಡಿಯ ರಾಜಮನೆತನ ದೇಶದ ಪ್ರಜಾಪ್ರಭುತ್ವಕ್ಕೆ ಒಂದುಗೂಡಿಕೊಂಡಾಗ, ಸಂಗೀತಕ್ಕೆ ರಾಜಾಶ್ರಯ ತಪ್ಪಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಗಣಪತರಾವ್ ಗುರವ ಅವರ ಕುಟುಂಬ ಬೆಳಗಾವಿಗೆ ವಲಸೆ ಬಂತು. ಅಲ್ಲಿ ಅವರು ಸಂಗೀತದ ತರಗತಿಗಳನ್ನು ನಡೆಸಲು ಆರಂಭಿಸಿದರು. ಮಗ ಸಂಗಮೇಶ್ವರನಿಗೂ ತಂದೆ ಮೊದಲ ಗುರುವಾದರು.
ಸಂಗಮೇಶ್ವರ ಗುರುವ ಅವರ ಚಿಕ್ಕಪ್ಪ ನಾರಾಯಣ್ ಅವರು ಅಂದಿನ ಕಾಲಕ್ಕೇ ಅಪರೂಪದ ಸಾರಂಗಿ ವಾದನವನ್ನು ಕಲಿತಿದ್ದರು. ಅದನ್ನು ಅಣ್ಣನ ಮಗ ಸಂಗಮೇಶ್ವರನಿಗೂ ಕಲಿಸುತ್ತಿದ್ದರು. ಒಂದು ದಿನ ಸಾರಂಗಿ ಬಾರಿಸುವುದನ್ನು ನೋಡಿದ ಗಣಪತರಾವ್, ‘ನಿನ್ನ ಕ್ಷೇತ್ರ ಇದಲ್ಲ. ಎಲ್ಲಿ, ಒಂದು ರಾಗ ಹೇಳು’ ಎಂದರಂತೆ. ಸಂಗಮೇಶ್ವರ ರಾಗ ಹಾಡುತ್ತಿದ್ದಂತೆಯೇ ಉಲ್ಲಸಿತಗೊಂಡ ತಂದೆ, ‘ಮುಂದೆ ಇದನ್ನೇ ರೂಢಿಸಿಕೊ’ ಎಂದು ಸಂಗೀತದ ದೀಕ್ಷೆ ನೀಡಿದರು. ಅಂದಿನಿಂದ ಕಠಿಣ ಅಭ್ಯಾಸದಲ್ಲಿ ನಿರತರಾದ ಸಂಗಮೇಶ್ವರ ಅವರು ಡಗ್ಗಾ ಹಿಡಿದುಕೊಂಡು ಬೆಳಿಗ್ಗೆ ತೋಡಿ, ಮಧ್ಯಾಹ್ನ ಭೀಮ್ಪಲಾಸಿ, ಸಂಜೆ ಬಾಗೇಶ್ರೀ ರಾಗಗಳನ್ನು ಹಾಡುವ ಕ್ರಮ ಅಳವಡಿಸಿಕೊಂಡರು. ಹಾಗೆ ಕಠಿಣ ಅಧ್ಯಯನ ಮಾಡಿದ ಪರಿಣಾಮವೇ ಸಂಗಮ, ರುದ್ರ, ಗರಗಜ, ಗೌರಿಧರ ಎಂಬ ರಾಗಗಳ ಹೊಸ ಪ್ರಯೋಗಕ್ಕೆ ಹಾದಿ ತೆರೆಯಿತು. ಮುಂದೆ ಸಂಗಮೇಶ್ವರ ಅವರು ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರ ಗರಡಿಯಲ್ಲಿ ಪಳಗಿದರು. ರಾಗಗಳ ಬಳಕೆಯಲ್ಲಿ ಶುದ್ಧತೆಯನ್ನು ಕಾಯ್ದುಕೊಂಡಿದ್ದರಿಂದ ಸಂಗಮೇಶ್ವರ ಅವರನ್ನು ‘ಸುಲೀಲಿ ಗಾಯಕ’ ಎಂದೇ ಕರೆಯಲಾಗುತ್ತಿತ್ತು.
ಖ್ಯಾಲ, ಠುಮ್ರಿ, ನಾಟ್ಯಗೀತ, ವಚನ, ದಾಸರ ಪದ, ಹಿಂದಿ ಭಜನ್ಗಳನ್ನು ನಿರರ್ಗಳವಾಗಿ ಪ್ರಸ್ತುತಪಡಿಸುತ್ತಿದ್ದ ಸಂಗಮೇಶ್ವರ ಗುರವ ಅವರ ಶೈಲಿ ಮೋಡಿ ಮಾಡುವಂತದಾಗಿತ್ತು. ಮುರ್ಖಿ, ವೇಗದ ತಾನ್ಗಳ ಪ್ರಸ್ತುತಿಯಲ್ಲಿಯೂ ಅವರನ್ನು ಮೀರಿಸುವವರಿರಲಿಲ್ಲ. ಅವರದು ರಂಗಸಂಗೀತ ಮತ್ತು ವಚನ ಗಾಯನ ಎರಡರಲ್ಲೂ ಪಳಗಿದ ಪ್ರತಿಭೆ.
Please follow and like us: