ಗಂಡ-ಹೆಂಡತಿ ಜಗಳಕ್ಕೆ ಕೂಸು ಬಡವಾಯಿತು ಎಂಬ ಗಾದೆ ಮಾತೇ ಇದೆ. ಎಷ್ಟೋ ಸಂಸಾರಗಳಲ್ಲಿ ಗಂಡ ಹೆಂಡತಿ ನಡುವೆ ಸಂಬಂಧ ಸರಿಯಿಲ್ಲದಿದ್ದರೆ ಅದರ ನೇರ ಪರಿಣಾಮ ಬೀರುವುದು ಮಕ್ಕಳ ಮೇಲೆ. ತಮ್ಮಲ್ಲಿರುವ ಅಸಮಧಾನ, ಕೋಪ ಎಲ್ಲವನ್ನೂ ಮಕ್ಕಳ ಮೇಲೆ ತೀರಿಸುತ್ತಾರೆ.
ಇನ್ನು ಕೆಲವರು ತಮ್ಮ ಮಕ್ಕಳೆಂದರೆ ನಾವು ಹೇಳಿದಂತೆ ಕೇಳಬೇಕು, ಸಡಿಲಬಿಟ್ಟರೆ ಹಾಳಾಗಿ ಬಿಡುತ್ತಾರೆ ಎಂದು ತುಂಬಾ ಸ್ಟ್ರಿಕ್ಟ್ ಆಗಿರುತ್ತಾರೆ.
ಒಂದು ಚಿಕ್ಕ ತಪ್ಪಾದರೂ ತುಂಬಾನೇ ಒಡೆಯುವುದು, ಬಡೆಯುವುದು ಮಾಡುತ್ತಾರೆ.
5 ವರ್ಷದ 15 ವರ್ಷದ ಮಕ್ಕಳಿಗೆ ತಪ್ಪು ಮಾಡಿದರೆ ಒಡೆದು ಬುದ್ಧಿ ಹೇಳಬೇಕೆಂದು ಮಹಾನ್ ಮೇಧಾವಿ ಚಾಣಕ್ಯ ಹೇಳಿದ್ದಾರೆ. ಹೌದು ಮಕ್ಕಳಿಗೆ ಕೆಲವೊಮ್ಮೆ ಎರಡು ಬಿಗಿದು ಬುದ್ಧಿ ಹೇಳಬೇಕಾಗುತ್ತದೆ. ಆದರೆ ಎಲ್ಲಾ ಕಾರಣಕ್ಕೆ ಒಡೆಯುವುದು ಒಳ್ಳೆಯ ಪೋಷಕರ ಲಕ್ಷಣವಲ್ಲ.
ಅದರಲ್ಲೂ ಪೋಷಕರು ಈ ರೀತಿ ಇದ್ದರೆ ಅದಕ್ಕೆ ಟಾಕ್ಸಿಕ್ ಪೇರೆಂಟಿಂಗ್ ಅಂತಾರೆ, ಮನೆಯಲ್ಲಿ ಈ ರೀತಿಯ ಪರಿಸ್ಥಿತಿ ಇದ್ದರೆ ಅವರು ಒಳ್ಳೆಯ ಪೋಷಕರಂತೂ ಅಲ್ವೇ ಅಲ್ಲ:
ಮನೆಯಲ್ಲಿ ಜಗಳ, ಮಕ್ಕಳ ಮೇಲೆ ಸಿಟ್ಟು ತೋರ್ಪಡಿಸುವುದು
ಎಷ್ಟೋ ಕುಟುಂಬದಲ್ಲಿ ಗಂಡ-ಹೆಂಡತಿ ನಡುವೆ ದಿನಾ ಜಗಳ, ಅವರ ಜಗಳದಲ್ಲಿ ಮಕ್ಕಳ ಕಡೆ ಗಮನವೇ ಕೊಡಲ್ಲ, ಅಲ್ಲದೆ ಗಂಡನ ಮೇಲೆ ಸಿಟ್ಟಿದ್ದರೆ ಮಗು ಏನಾದರೂ ಚಿಕ್ಕ ತಪ್ಪು ಮಾಡಿದರೂ ಅದಕ್ಕೆ ಹಿಡಿದು ತುಂಬಾ ಹೊಡೆಯುವುದು ಈ ರೀತಿಯೆಲ್ಲಾ ಮಾಡುತ್ತಾರೆ. ಅಲ್ಲದೆ ಮಕ್ಕಳ ಬೇಕು, ಬೇಡಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇವರ ಸಮಸ್ಯೆಯೇ ಇವರಿಗೆ ದೊಡ್ಡದ್ದು ಆಗಿರುತ್ತದೆ, ಮಕ್ಕಳ ಅವಶ್ಯಕತೆಗಿಂತ ಅವರ ಅವಶ್ಯಕತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಅಂದರೆ ಅವರಿಗೆ ಬೇರೆ ಸಂಬಂಧವಿದ್ದರೆ ಹೆಂಡತಿ -ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಾರೆ, ಹೆಂಡತಿಗೆ ಅನೈತಿಕ ಸಂಬಂಧವಿದ್ದರೆ ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಾಳೆ. ಆವಾಗ ಮಕ್ಕಳಿಗೆ ಬೇಕಾದ ಪ್ರೀತಿ ಸಿಗಲ್ಲ. ಇಂಥ ವಾತಾವರಣದಲ್ಲಿ ಬೆಳೆಯುವ ಮಕ್ಕಳಿಗೆ ಪ್ರೀತಿ, ಅಕ್ಕರೆ ಸಿಗದೆ ಬೇಗನೆ ಅಡ್ಡದಾರಿ ಹಿಡಿಯುತ್ತಾರೆ.
ಬೈಗುಳ
ಕೆಲ ಪೋಷಕರು ಬಾಯಿ ತೆರೆದರೆ ಬರೀ ಬೈಗುಳದ ಸುರಿಮಳೆ, ತುಂಬಾ ಕೆಟ್ಟ ಕೆಟ್ಟಾಗಿ ಬೈಯ್ಯುತ್ತಾರೆ, ಹೀಗೆ ಬೈಯುವುದರಿಂದ ಮಕ್ಕಳು ತಪ್ಪು ಮಾಡುವುದಿಲ್ಲ ಎಂಬ ಭ್ರಮೆ, ಆದರೆ ಹೀಗೆ ಬೈಯ್ಯುವುದರಿಂದ ಅದನ್ನು ಕೇಳುತ್ತಾ ಬೆಳೆಯುವ ಮಕ್ಕಳಿಗೆ ಪೋಷಕರ ಮೇಲೆ ಗೌರವ, ಪ್ರೀತಿ ಕಡಿಮೆಯಾಗುವುದು, ಅಲ್ಲದೆ ಮನೆಯಲ್ಲಿ ಪ್ರೀತಿ ಸಿಗದೆ ಇರುವ ಕಾರಣ ಪ್ರೀತಿ-ಪ್ರೇಮ ಅಂತ ಜೀವನ ಹಾಳು ಮಾಡಿಕೊಳ್ಳುತ್ತಾರೆ. ತುಂಬಾ ಸ್ಟ್ರಿಕ್ಟ್
ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಬೆಳೆಸಬೇಕು, ಹಾಗಂತ ಹಿಟ್ಲರ್ ರೀತಿಯಲ್ಲ. ನಾನು ಹೇಳಿದ್ದೇ ಸರಿ, ನಾನು ಹೇಳಿದ್ದನ್ನು ನೀವು ಕೇಳಬೇಕು ತಿರುಗು ಒಂದು ಮಾತು ಕೂಡ ಹೇಳಬಾರದು ಎಂದು ಹೇಳುವ ಪೋಷಕರು ಅನೇಕರಿದ್ದಾರೆ. ತಮ್ಮ ಮಕ್ಕಳ ಕುರಿತ ಎಲ್ಲಾ ನಿರ್ದಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ. ನಾನು ಮಾಡುತ್ತಿರುವುದೆಲ್ಲಾ ಮಕ್ಕಳ ಒಳ್ಳೆಯದ್ದಕ್ಕೇ ಎಂದನಿಸಬಹುದು, ಆದರೆ ಅತಿಯಾದ ಸ್ಟ್ರಿಕ್ಟ್ನಿಂದಾಗಿ ಮಕ್ಕಳಿಗೆ ಉಸಿರುಕಟ್ಟಿದ್ದಾಂತಾಗುವುದು, ಅವರ ಆಲೋಚನಾ ಸಾಮರ್ಥ್ಯದ ಮೇಲೂ ಕೂಡ ಕೆಟ್ಟ ಪರಿಣಾಮ ಬೀರುವುದು. ಆದ್ದರಿಂದ ಸ್ಟ್ರಿಕ್ಟ್ ಆಗಿರಿ ಆದರೆ ತುಂಬಾ ಸ್ಟ್ರಿಕ್ಟ್ ಬೇಡ್ವೆ ಬೇಡ.
ತುಂಬಾನೇ ಮುದ್ದು
ತುಂಬಾ ಮುದ್ದು ಮಾಡಿದರೆ ಮಕ್ಕಳು ಹಾಳಾಗುತ್ತಾರೆ ಎಂದು ಹೇಳುತ್ತಾರೆ ಅದು ನಿಜ ಕೂಡ. ಮಕ್ಕಳ ಸರಿ-ತಪ್ಪು ತಿದ್ದುವ ಕೆಲಸವನ್ನು ಪೋಷಕರು ಮಾಡಬೇಕು. ಆದರೆ ಕೆಲವರಿಗೆ ತಮ್ಮ ಮಕ್ಕಳು ಏನು ಮಾಡಿದರು ಸರಿ, ಅವರು ಕೆಟ್ಟದ್ದು ಮಾಡಿದರೂ ಬುದ್ಧಿ ಹೇಳುವ ಬದಲಿಗೆ ಸುಮ್ಮನಾಗುತ್ತಾರೆ. ಯಾರಾದರೂ ನಿಮ್ಮ ಮಕ್ಕಳ ನಡವಳಿಕೆ ಸರಿಯಿಲ್ಲ ಎಂಬ ಮಾಹಿತಿ ನೀಡಿದರೆ ಅವರ ಜೊತೆಯೇ ಜಗಳಕ್ಕೆ ಹೋಗುತ್ತಾರೆ. ಮಕ್ಕಳನ್ನು ಮುದ್ದು ಮಾಡಿ ಹಾಳು ಮಾಡಿರುತ್ತಾರೆ. ಈ ರೀತಿಯ ಪೇರೆಂಟಿಂಗ್ ಕೂಡ ಒಳ್ಳೆಯದಲ್ಲ.
ಬೇರೆಯವರಿಗೆ ಬೈಯ್ಯುವುದು
ಟಾಕ್ಸಿಕ್ ಪೇರೆಂಟಿಂಗ್ ಅಂದರೆ ಅವರ ಬದುಕಿನಲ್ಲಿ ಏನೇ ಆದರೂ ಅದಕ್ಕೆ ಬೇರೆಯವರನ್ನು ಹೊಣೆ ಮಾಡುತ್ತಾರೆ. ಸದಾ ಬೈಯ್ಯುತ್ತಿರುತ್ತಾರೆ, ಜೊತೆಗೆ ಕೆಲವೊಂದು ವ್ಯಸನಕ್ಕೆ ದಾಸರಾಗುತ್ತಾರೆ, ಇವೆಲ್ಲಾ ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada