ಬೆಂಗಳೂರು: ‘ನಾನು ಮತ್ತು ಸುಚೇಂದ್ರ ಪ್ರಸಾದ್ ಒಟ್ಟಿಗೆ ಹನ್ನೊಂದು ವರ್ಷ ಇದ್ದದ್ದು ನಿಜ. ಆದರೆ, ಅವರ ಜೊತೆ ನನ್ನ ಮದುವೆ ಆಗಿಲ್ಲ. ಮದುವೆ ಆಗದೇ ಯಾಕೆ 16 ವರ್ಷಗಳ ಕಾಲ ಜೊತೆಗೆ ಇದ್ದವು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು.
ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ. ಆದರೂ, ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯ’ ಎಂದು ಇತ್ತೀಚೆಗೆ ನಟಿ ಪವಿತ್ರಾ ಲೋಕೇಶ್ ಹೇಳಿದ್ದರು.
ನರೇಶ್ ಜತೆ ಮೂರನೆಯ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಈ ಮದುವೆಯನ್ನೂ ತಳ್ಳಿಹಾಕಿದ್ದ ಪವಿತ್ರಾ, ಸುಚೇಂದ್ರ ಪ್ರಸಾದ್ ಅವರ ಕುರಿತು ಹೇಳಿಕೊಂಡಿದ್ದರು. ತೆಲುಗು ನಟ ನರೇಶ್ ಅವರ ಜೊತೆ ಪವಿತ್ರಾ ಲೋಕೇಶ್ ವಾಸಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಸುಚೇಂದ್ರ ಪ್ರಸಾದ್ ಅವರನ್ನು ತೊರೆದಿದ್ದಾರೆ ಎಂದೂ ಹೇಳಲಾಗಿತ್ತು. ಈ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದ ಪವಿತ್ರಾ ಲೋಕೇಶ್, ತಾವು ಸುಚೇಂದ್ರ ಪ್ರಸಾದ್ ಜೊತೆ ಮದುವೆಯನ್ನೇ ಆಗಿರಲಿಲ್ಲ, ಇನ್ನು ಡಿವೋರ್ಸ್ ಮಾತೆಲ್ಲಿ ಎಂದು ಹೇಳಿದ್ದರು.
ಇಲ್ಲಿಯವರೆಗೆ ಈ ಮಾತಿಗೆ ಸುಮ್ಮನಿದ್ದು ಸುಚೇಂದ್ರ ಪ್ರಸಾದ್ ಅವರು ಇದೀಗ ಮೌನ ಮುರಿದಿದ್ದಾರೆ. ನಾವು ಹಿಂದೂ ವಿವಾಹದ ಸಂಪ್ರದಾಯದಂತೆ ಮದುವೆ ಆಗಿದ್ದೇವೆ. ನಾನೇ ಪವಿತ್ರಾ ಗಂಡ ಎನ್ನುವುದಕ್ಕೆ ಅವರ ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಮನಿಸಿ ನೋಡಿ. ನನ್ನ ಪಾಸ್ ಪೋರ್ಟ್ ಬೇಕಾದರೂ ಕೊಡುತ್ತೇನೆ. ಅದರಲ್ಲಿ ಹೆಂಡತಿ ಹೆಸರು ಜಾಗದಲ್ಲಿ ಪವಿತ್ರಾ ಹೆಸರೇ ಇದೆ. ನಾವಿಬ್ಬರೂ ಗಂಡ ಹೆಂಡತಿ ಅನ್ನುವ ಕಾರಣಕ್ಕಾಗಿಯೇ ಹಲವಾರು ಧಾರ್ಮಿಕ ಗುರುಗಳು ನಮ್ಮನ್ನು ಸನ್ಮಾನಿಸಿದ್ದಾರೆ. ನಾವೂ ಒಟ್ಟಿಗೆ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಗಂಡ ಹೆಂಡತಿ ಅನ್ನೋ ಕಾರಣಕ್ಕಾಗಿಯೇ ಹೋಗಿದ್ದೇವೆ. ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ ಎಂದಿದ್ದಾರೆ. ಆದರೆ, ಮದುವೆ ನೋಂದಣಿ ಪತ್ರ ಮಾತ್ರ ಮಾಡಿಸಿಲ್ಲ ಎಂದಿದ್ದಾರೆ.
ಮದುವೆ ನೋಂದಣಿ ಏಕೆ ಮಾಡಿಸಿಲ್ಲ ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ನೋಂದಣಿ ಮಾಡಿಸುವುದು ವಿದೇಶಿ ಸಂಸ್ಕೃತಿ. ಅದು ಭಾರತದಲ್ಲಿ ಕಡ್ಡಾಯವಲ್ಲ, ಬೇಕೇ ಬೇಕು ಎಂತಾದರೆ ನನ್ನ ಬಳಿ ಇರುವ ಈ ಎಲ್ಲಾ ದಾಖಲೆ ತೋರಿಸಿ ಈಗಲೂ ಮಾಡಿಸಬಹುದು ಎಂದಿದ್ದಾರೆ.
ಒಟ್ಟಿನಲ್ಲಿ ಪವಿತ್ರಾ ಹಾಗೂ ಸುಚೇಂದ್ರ ಪ್ರಸಾದ್ ಅವರ ವಿಷಯ ಮತ್ತಷ್ಟು ಕಗ್ಗಂಟಾಗುತ್ತಾ ಸಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann