ನವದೆಹಲಿ, ಏ.3- ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ನೆರವು ನೀಡಲು ಭಾರತ ಮುಂದಾಗಿದ್ದು, ಈಗಾಗಲೇ ಜನವರಿಯಿಂದ 2.5 ಶತಕೋಟಿ ಡಾಲರ್ಗೂ ಅಧಿಕ ನೆರವು ನೀಡಲಾಗಿದೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್ ಗೋಪಾಲ್ ತಿಳಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ದ್ವೀಪ ರಾಷ್ಟ್ರವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಭಾರತ ಮುಂದಾಗಿದ್ದು, ಶ್ರೀಲಂಕಾದ ತುರ್ತು ಮನವಿಗಳಿಗೆ ಭಾರತ ತ್ವರಿತವಾಗಿ ಸ್ಪಂದಿಸಿದೆ ಎಂದು ಹೇಳಿದೆ.
ಈ ವರ್ಷದ ಜನವರಿಯಿಂದ, ಶ್ರೀಲಂಕಾಕ್ಕೆ ಬೆಂಬಲ 2.5 ಶತಕೋಟಿ ಡಾಲರ್ ಮೀರಿದೆ. 500 ದಶಲಕ್ಷದ ಇಂಧನ ಸಾಲದ ಒಪ್ಪಂದಕ್ಕೆ ಫೆಬ್ರವರಿಯಲ್ಲಿ ಸಹಿ ಮಾಡಲಾಗಿದೆ. 150,000 ಟನ್ಗಳಷ್ಟು ಜೆಟ್ ವಿಮಾನ ಇಂಧನ, ಡೀಸೆಲ್ ಮತ್ತು ಪೆಟ್ರೋಲ್ ಒಟ್ಟು ನಾಲ್ಕು ಸರಕುಗಳ ರವಾನೆ ಆರಂಭಗೊಂಡಿವೆ. ಮಾರ್ಚ್, ಮೇ ತಿಂಗಳವರೆಗೆ ಇನ್ನೂ ಹೆಚ್ಚು ರವಾನೆಯಾಗಲಿದೆ ಎಂದಿದ್ದಾರೆ.
ಆಹಾರ, ಔಷಧ ಮತ್ತು ಅಗತ್ಯ ವಸ್ತುಗಳಿಗೆ 1 ಶತಕೋಟಿ ಡಾಲರ್ ಸಾಲದ ನೆರವಿಗೆ ಕಳೆದ ತಿಂಗಳು ಸಹಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಾಲ ಸೌಲಭ್ಯದಡಿ ಭಾರತದಿಂದ ಅಕ್ಕಿ ರವಾನೆಯಾಗಿದ್ದು, ಶೀಘ್ರದಲ್ಲೇ ಶ್ರೀಲಂಕಾ ತಲುಪುವ ನಿರೀಕ್ಷೆಯಿದೆ.ಇದಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ 400 ಮಿಲಿಯನ್ ಡಾಲರ್ ಕರೆನ್ಸಿ ಸ್ವಾಪ್ನ್ನು ವಿಸ್ತರಿಸಿದೆ ಮತ್ತು ನೂರು ಮಿಲಿಯನ್ ಡಾಲರ್ ಮೌಲ್ಯದ ಏಷ್ಯನ್ ಕ್ಲಿಯರೆನ್ಸ್ ಯೂನಿಯನ್ನಡಿ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಬಾಕಿಯಿರುವ ಪಾವತಿಗಳನ್ನು ಮುಂದೂಡಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾದ ಆಮದುಗಳಿಗೆ ಹಣಕಾಸು ಒದಗಿಸುವುದು ಕಷ್ಟಕರವಾದ ಸಮಯದಲ್ಲಿ ಭಾರತ ಲಂಕಾಗೆ ಜೀವನಾಡಿಯಾಗಿ ಕೆಲಸ ಮಾಡಿದೆ. ತೀವ್ರ ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗಿರುವ ದ್ವೀಪ ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟನ್ನು ನಿವಾರಿಸಲು ಭಾರತವು ನಿನ್ನೆ 40,000 ಎಂಟಿ ಡೀಸೆಲ್ನ್ನು ಶ್ರೀಲಂಕಾಕ್ಕೆ ತಲುಪಿಸಿದೆ.
ಭಾರತವು ಶ್ರೀಲಂಕಾಕ್ಕೆ ವಿಸ್ತರಿಸಿದ 500 ಮಿಲಿಯನ್ ಡಾಲರ್ ತೈಲ ಸಾಲದ (ಎಲ್ಒಸಿ) ಒಂದು ಭಾಗವಾಗಿದೆ. ಇದು ಎಲ್ಒಸಿ ಅಡಿ ಭಾರತದಿಂದ ಶ್ರೀಲಂಕಾಕ್ಕೆ 4ನೇ ಬಾರಿಗೆ ವಿತರಿಸಲಾದ ಇಂಧನದ ರವಾನೆಯಾಗಿದೆ. ಇದಲ್ಲದೆ ಕಳೆದ 50 ದಿನಗಳಲ್ಲಿ ಭಾರತವು ದ್ವೀಪ ರಾಷ್ಟ್ರಕ್ಕೆ ಸುಮಾರು 200,000 ಮೆಟ್ರಿಕ್ ಟನ್(ಎಂಟಿ) ಇಂಧನವನ್ನು ಪೂರೈಸಿದೆ ಎಂದು ಅವರು ವಿವರಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada