ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಜನವರಿ 19ರಂದು ನಾರಾಯಣಪುರಕ್ಕೆ ಆಗಮಿಸಿ ಎನ್ ಎಲ್ ಬಿಸಿ ಆಧುನೀಕರಣ ಯೋಜನೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಈ ಕಾರ್ಯಕ್ರಮವನ್ನು ಭಾಗವಹಿಸಿ ಹಿಂದಿರುಗಲಿದ್ದಾರೆ ಎಂದರು.ಜನವರಿ 19 ರಂದು ಪ್ರಧಾನಿ ಮೋದಿಯವರು ನಾರಾಯಣಪುರಕ್ಕೆ ಆಗಮಿಸಲಿದ್ದು ,ಕೇಂದ್ರ ಹಾಗೂ ರಾಜ್ಯ ಅನುದಾನಿತ ನಾರಾಯಣಪುರ ಎಡದಂಡೆ ಕಾಲುವೆ (ಎನ್ ಎಲ್ ಬಿ ಸಿ) ಆಧುನೀಕರಣದ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಬುರಗಿಯಲ್ಲಿ ಬಂಜಾರ ಸಮಾವೇಶ ನಡೆಸುವ ಯೋಜನೆಯಿದ್ದು, ಪ್ರಧಾನಿ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ನಿಶ್ಚಯವಾಗಿಲ್ಲ ಎಂದು ತಿಳಿಸಿದರು.ಹುಬ್ಬಳ್ಳಿಯಲ್ಲಿ ನಡೆಯಲಿರುವ ಯುವಜನೋತ್ಸವದಲ್ಲಿ ದೇಶದ ವಿವಿಧೆಡೆಯಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ಯುವಕರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಹಲವಾರು ವಿವಿಧ ಕಾರ್ಯಕ್ರಮಗಳನ್ನು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸಕಲ ರೀತಿಯಲ್ಲಿ ತಯಾರಿ ನಡೆಸಲಾಗುತ್ತಿದೆ.ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯೇ ಉದ್ಘಾಟನೆ ಮಾಡಲಿರುವುದರಿಂದ ಧಾರವಾಡದ ಕರ್ನಾಟಕ ಕಾಲೇಜು, ಕರ್ನಾಟಕ ವಿವಿ, ಕೃಷಿ ವಿವಿಗೆ ಸಂಪರ್ಕ ಕಲ್ಪಿಸುವ ಒಟ್ಟು 12 ರಸ್ತೆಗಳ ಕಾಮಗಾರಿ ಕಾರ್ಯ ಬರದಿಂದ ನಡೆದಿದೆ. ಜತೆಗೆ ಗಟಾರುಗಳ ಸ್ವಚ್ಛತೆ, ಕಸ ನಿರ್ವಹಣೆ ಕಾರ್ಯ ಶುರು ಮಾಡಲಾಗಿದೆ. ಮಹಾನಗರ ಪಾಲಿಕೆಯ 100 ಸಿಬ್ಬಂದಿ ಬಳಸಿಕೊಂಡು ಕಸ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ.ಇಷ್ಟೇ ಅಲ್ಲದೆ ಯುವ ಸಮ್ಮೇಳನದ ಹಿನ್ನೆಲೆಯಲ್ಲಿ ಧಾರವಾಡ-ಹುಬ್ಬಳ್ಳಿ ನಗರಗಳ ಸಂಪೂರ್ಣ ಚಿತ್ರಣವನ್ನೇ ಬದಲಿಸುವ ಕಾರ್ಯ ಮಾಡಲಾಗುತ್ತಿದೆ. ಮುಖ್ಯ ರಸ್ತೆ, ಪ್ರವಾಸಿ ಸ್ಥಳಗಳ ವೈಭವೀಕರಣ, ರಸ್ತೆ, ಉದ್ಯಾನವನ, ಕೆರೆ ಹಾಗೂ ಸಾಂಸ್ಕೃತಿಕ ಸ್ಥಳಗಳನ್ನು ಶೃಂಗರಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಒಂದು ವಾರ ಹಬ್ಬದ ವಾತಾವರಣ ಮೂಡುವಂತೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಯೋಗಾ ಮ್ಯಾಟ್, ಧಾರವಾಡ ಪೇಡ, ರಾಷ್ಟ್ರ ಧ್ವಜವಿರುವ ಫ್ರೇಮ್ ಕೊಡುವ ಮೂಲಕ ಧಾರವಾಡದ ಯುವ ಸಮ್ಮೇಳನದ ನೆನಪು ಸದಾ ಇರುವಂತೆ ಮಾಡೋದಕ್ಕೆ ಮುಂದಾಗಿದ್ದಾರೆ.
https://play.google.com/store/apps/details?id=com.speed.newskannada