ಬೆಂಗಳೂರು, ಫೆಬ್ರವರಿ 8: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.ಈ ಸಂಬಂಧ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಅವರು ರಾಜ್ಯದ ಹಿರಿಯ ಅಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸಿದ್ದಾರೆ.545 ಪಿಎಸ್ಐ ಹುದ್ದೆಗಳ ನೇಮಕಕ್ಕೆ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ಆದರೆ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 371 (ಜೆ) ಮೀಸಲಾತಿಯಲ್ಲಿ ಅನ್ಯಾಯ ಮತ್ತು ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕೆಲ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.ಸಿವಿಲ್ ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡು ಅರ್ಹ ಅಭ್ಯರ್ಥಿಗಳ ಘಟಕವಾರು ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಕೈಗೊಳ್ಳುವಂತೆ ಜನವರಿ 21ರಂದು ಬರೆದಿದ್ದ ಪತ್ರದಲ್ಲಿ ಸೂಚಿಸಲಾಗಿತ್ತು. ಇದೀಗ ಆಡಳಿತಾತ್ಮಕ ಕಾರಣದಿಂದ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ಆದೇಶದವರಗೆ ಸ್ಥಗತಗೊಳಿಸಬೇಕು ಎಂದು ತಿಳಿಸಲಾಗಿದೆ.ಪರೀಕ್ಷೆ ಹಾಗೂ ಆಯ್ಕೆ ಪಟ್ಟಿಯಲ್ಲಿ ಅಕ್ರಮ545 ಪಿಎಸ್ಐ-ಸಿವಿಲ್ ನೇಮಕಾತಿ ಪರೀಕ್ಷೆ ಹಾಗೂ ಆಯ್ಕೆ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತ ಹಗರಣದ ಆರೋಪಗಳು ಒಂದೊಂದಾಗಿ ಬಯಲಿಗೆ ಬಂದಿದ್ದವು. ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನೊಂದ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸಿದ್ದರು. ಇದೇ ವೇಳೆ ಅಕ್ರಮದ ಕುರಿತ ಅನುಮಾನಸ್ಪದ ಅಂಶಗಳುಳ್ಳ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.ಜ.19ರಂದು ಆಯ್ಕೆ ಪಟ್ಟಿ ಪ್ರಕಟವಾದ ನಂತರ, ತಮ್ಮ ಹೆಸರಿಗಾಗಿ ಹುಡುಕಾಡಿದ ಪ್ರತಿಭಾವಂತರ ಪಡೆ ಕಂಗಾಲಾಗಿದೆ. ಅತೀ ಕ್ಲಿಷ್ಟಕರವಾದ ಎಂದೇ ವಿಶ್ಲೇಷಿಸಲ್ಪಟ್ಟ ಪರೀಕ್ಷೆಯಲ್ಲಿ ಅರ್ಹತೆಗೆ ತಕ್ಕಂತೆ ಬರೆದ ಪ್ರತಿಭಾವಂತರು, ಪಿಎಸ್ಐ ಹುದ್ದೆಗೆ ಆಯ್ಕೆಯಾಗುವುದು ಖಚಿತವೆಂದು ನಂಬಿದ್ದರು. ಆದರೆ, ರ್ಯಾಂಕ್ ಪಟ್ಟಿ ಕಂಡು ಅನೇಕರು ಆಶ್ಚರ್ಯ ಚಕಿತರಾಗಿದ್ದಾರೆ.ತಮ್ಮ ಹೆಸರುಗಳನ್ನೇ ಬರೆಯಲಿಕ್ಕೆ ಆಗದ ಕೆಲವರು ಪಟ್ಟಿಯ ಟಾಪ್ ಕ್ರಮಗಳಲ್ಲಿ ಹೆಸರು ಬಂದಿರುವುದು ಪ್ರತಿಭಾವಂತರಿಗೆ ಅಚ್ಚರಿ ಮೂಡಿಸಿದೆ. ಪರೀಕ್ಷೆ-1 ಹಾಗೂ ಪರೀಕ್ಷೆ-2 ರಲ್ಲಿ ಕೆಲವರ ಅಂಕಗಳು ಭಾರಿ ಸಂಶಯಕ್ಕೀಡಾಗಿಸಿದೆ.ಪೊಲೀಸ್ ಇಲಾಖೆಯಲ್ಲೇ ಕಳ್ಳಾಟ ನಡೆದಿರಬಹುದು ಎಂಬ ಬಲವಾದ ಶಂಕೆ ಮೂಡಿಸಿದ್ದರಿಂದ ಅನೇಕರು ತನಿಖೆಗೆ ಆಗ್ರಹಿಸುತ್ತಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ದಾಖಲೆಗಳ ಸಮೇತ ಅನರ್ಹರ ಕುರಿತ ಚರ್ಚೆಗಳು ನಡೆಯುತ್ತಿವೆ. ಗೃಹ ಸಚಿವರು ಹಾಗೂ ಇಲಾಖೆಯ ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.ತನಿಖೆಗೆ ಆಗ್ರಹಿಸಿ ಸಿಎಂ, ಗೃಹ ಸಚಿವರಿಗೆ ದೂರುಪಿಎಸ್ಐ ನೇಮಕಾತಿ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ (ಕಲಂ 371 ಜೆ) ಅಭ್ಯರ್ಥಿಗಳಿಗೆ ಮೀಸಲಾತಿ ವಿಚಾರದಲ್ಲಿ ಅನ್ಯಾಯ ಮಾಡಲಾಗಿದೆ. ಅಲ್ಲದೇ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ನೊಂದ ಅಭ್ಯರ್ಥಿಯೊಬ್ಬರು ಯಾದಗಿರಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ.ದೂರು ಪತ್ರದಲ್ಲಿ ಅಫ್ಜಲ್ಪುರ ಮೂಲದ, ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಬಗ್ಗೆ ಉಲ್ಲೇಖಿಸಿ, ಅವರ ಮುಂತಾದ ವಿವರಗಳನ್ನು ನೀಡಿದ್ದಾರೆ. ಸದರಿ ವ್ಯಕ್ತಿಯ ಅನುಮಾನಾಸ್ಪದ ನಡೆಗಳ ಬಗ್ಗೆಯೂ ಈ ದೂರು ಪತ್ರದಲ್ಲಿ ತಿಳಿಸಲಾಗಿದ್ದು, ಬ್ಲೂಟೂತ್ ಅಥವಾ ಮತ್ತಿತರ ಅಕ್ರಮಗಳ ಮೂಲಕ ನಕಲು ಮಾಡಿ, ವಂಚಿಸಿರಬಹುದು ಎಂದು ಶಂಕಿಸಲಾಗಿದೆ. ಹಣ ಇದ್ದವರಿಗೆ ಮಾತ್ರ ಪಿಎಸ್ಐ ಹುದ್ದೆ ಎನ್ನುವುದಾದರೆ, ಬಡ-ಪ್ರತಿಭಾವಂತರ ಗತಿಯೇನು ಎಂದು ದೂರಿನಲ್ಲಿ ಅಳಲು ತೋಡಿಕೊಂಡ ನೊಂದ ಅಭ್ಯರ್ಥಿಯು, ಈ ಕುರಿತು ತನಿಖೆ ನಡೆಸಿ ನ್ಯಾಯಕ್ಕೆ ಮನವಿ ಮಾಡಿದ್ದಾರೆ.ಪಿಎಸ್ಐ ಪರೀಕ್ಷೆ ಅಕ್ರಮ ಶಂಕೆ, ಯಾರು ಸೂತ್ರಧಾರಿ?ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಜ.19 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಯಾದ ನಂತರ ಇಂತಹ ಅನುಮಾನಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ರಾಜ್ಯದಾದ್ಯಂತ 545 ಹುದ್ದೆಗಳಿಗಾಗಿ ಕಳೆದ ವರ್ಷ (2021) ಅಕ್ಟೋಬರ್ 4ರಂದು ಪರೀಕ್ಷೆಯಲ್ಲಿ ಅಕ್ರಮದ ಶಂಕೆ ಮೂಡಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆ ವ್ಯಕ್ತಿ ಭಾಗಿಯಾಗಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.ಆಯ್ಕೆ ಪಟ್ಟಿ ಬಿಡುಗಡೆ ನಂತರ ಪರೀಕ್ಷೆ-1 ಮತ್ತು ಪರೀಕ್ಷೆ-2 ರಲ್ಲಿ ಕೆಲವೆಡೆಯ ಅಭ್ಯರ್ಥಿಗಳು ಪಡೆದುಕೊಂಡ ಅಂಕಗಳು ಅಕ್ರಮದ ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ, ಕಲಬುರಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕುವೊಂದರಲ್ಲೇ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಅನುಮಾನ ಮೂಡಿಸಿದೆ ಎಂದು ನೊಂದ ಅಭ್ಯರ್ಥಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada