ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ‘ಪಟ್ಟಣದಿಂದ ವಾರಕ್ಕೆ ಎರಡು ಬಾರಿ ಗೋವುಗಳನ್ನು ಕಸಾಯಿ ಖಾನೆಗೆ ರವಾನಿಸಲಾಗುತ್ತಿದೆ. ಹೀಗಿದ್ದರೂ ಪೊಲೀಸರೇಕೇ ಸುಮ್ಮನಾಗಿದ್ದಾರೆ. ಪೊಲೀಸರು ಅದರ ಹಫ್ತಾ ವಸೂಲಿಗೆ ನಿಂತಿದ್ದಾರಾ? ಸೆಗಣಿ ತಿನ್ನುತ್ತಿದ್ದಾರಾ?
ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮಸೇನೆ ತಾಲ್ಲೂಕು ಘಟಕದಿಂದ ಗುರುಪೂರ್ಣಿಮೆ ಅಂಗವಾಗಿ ಬುಧವಾರ ಸಂಜೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತುಲಾಭಾರದಲ್ಲಿ ಭಾಗವಹಿಸಿ ಮಾತನಾಡಿದರು.
ಗೋಹತ್ಯೆ ಕಾನೂನು ಜಾರಿಗೆ ಬಂದಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಗೋಹತ್ಯೆ ನಿರ್ಭಯವಾಗಿ ನಡೆಯುತ್ತಿದೆ. ರಾಜ್ಯದಲ್ಲಿ 30 ಜನ ಹಿಂದೂಗಳ ಕೊಲೆಯಾಗಿದೆ. ಅದು ಪಟ್ಟಣಕ್ಕೆ ವ್ಯಾಪಿಸುತ್ತದೆ. ಮುಸ್ಲಿಮರ ಹಿಂಸೆಯ ಮಾನಸಿಕತೆ ವಿರುದ್ಧ ಹಿಂದೂ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದರು.
ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಜೈಲು ಕೇಸು ಅಂದರೆ ಅಡುಗೆ ಮನೆ, ಬಚ್ಚಲು ಮನೆ ಇದ್ದಂತೆ. ಒಂದು ಪ್ರಕರಣ ದಾಖಲಾದರೆ ಭುಜಕ್ಕೆ ಸ್ಟಾರ್ ಬಿದ್ದಂತೆ ಎಂದು ಹೇಳಿದರು.
ಹಿರೇಹಡಗಲಿಯ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಮಾತನಾಡಿ, ಶಾಸ್ತ್ರಕ್ಕೆ ಮಾತು ಕೇಳದಿದ್ದರೆ ಶಸ್ತ್ರ ಹಿಡಿಯುತ್ತೇವೆ ಎಂದರು. ಪಟ್ಟಣದ ಹಾಲಸಿದ್ದೇಶ್ವರ ಸ್ವಾಮೀಜಿ, ಹಂಪಸಾಗರದ ನವಲಿ ಹಿರೇಮಠದ ಸ್ವಾಮೀಜಿ, ಗಂಗಾಧರ ಕುಲಕರ್ಣಿ, ಮೈಲಾರದ ವೆಂಕಟಪ್ಪ ಒಡೆಯರ್, ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ, ರವಿ ಬಡಿಗೇರ, ರಾಜು ಖಾನಾಪುರ, ಚಂದ್ರಶೇಖರ್, ಸಂತೋಷ್ ಪೂಜಾರ್ ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: