ವಿಜಯನಗರ, ಫೆಬ್ರವರಿ 10; ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಸುಂಕಮ್ಮ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ನಟ ದಿ. ಪುನೀತ್ ರಾಜ್ಕುಮಾರ್ ಹೆಸರಿಡಲು ಒಪ್ಪಿಗೆ ನೀಡಲಾಯಿತು.ಸಭೆಯಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ನಟ ದಿ. ಪುನೀತ್ ರಾಜ್ಕುಮಾರ್ ಹೆಸರಿಡಲು ಒಪ್ಪಿಗೆ ನೀಡಲಾಯಿತು.ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷರು ಮತ್ತು ಪೌರಯುಕ್ತ ಮನ್ಸೂರ್ ಅಲಿ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಹಲವಾರು ಪ್ರಸ್ತಾವನೆಗಳನ್ನು ಮಂಡಿಸಿ ತೀರ್ಮಾನ ಕೈಗೊಳ್ಳಲಾಯಿತು.ನಗರದ ತಹಶೀಲ್ದಾರ್ ಕಚೇರಿ ಬಳಿಯ 4 ಕೂಡು ರಸ್ತೆಯ ವೃತ್ತಕ್ಕೆ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ದಿವಂಗತ ನಟ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡುವುದಕ್ಕೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಹೊಸಪೇಟೆ ನಗರಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಸಹ ನಾಮ ನಿರ್ದೇಶನ ಮಾಡಲಾಯಿತು. ಹೊಸಪೇಟೆ ನಗರಸಭೆ ಚುನಾವಣೆ ನಡೆದ ಬಳಿಕ ನಡೆದ ಮೊದಲ ಸಾಮಾನ್ಯ ಸಭೆ ಇದಾಗಿತ್ತು.ಸಭೆಯಲ್ಲಿ ಹೊಸಪೇಟೆ ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಪ್ಲಾಟ್ ಫಾರಂ ನಿರ್ಮಾಣ ಮಾಡಲು ಅನುಮೋದನೆ ನೀಡಲಾಯಿತು.ನಗರದ ಯುಜಿಡಿ ಮತ್ತು ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗಳ ಕುರಿತು ಆದಷ್ಟು ಬೇಗನೆ ಕಾಮಗಾರಿ ಮುಗಿಸಲು ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೂಚನೆ ನೀಡಿದರು. ಪ್ರತಿಯೊಂದು ವಾರ್ಡ್ಗಳ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲು ಅಧ್ಯಕ್ಷರಿಗೆ ಸದ್ಯಸರುಗಳು ಮನವಿಯನ್ನು ಇದೇ ಸಂದರ್ಭದಲ್ಲಿ ಸಲ್ಲಿಸಿದರು.ಸಾಮಾನ್ಯ ಸಭೆಯಲ್ಲಿ ಯುಜಿಡಿ, ಸ್ವಚ್ಛತೆ, ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ವಿವರವಾದ ಚರ್ಚೆ ನಡೆಯಿತು. ವಿವಿಧ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದು, ತೀರ್ಮಾನ ಕೈಗೊಳ್ಳಲಾಯಿತು.2021ರ ಅಕ್ಟೋಬರ್ 29ರಂದು ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದಾಗಿ ಮೃತಪಟ್ಟಿದ್ದರು. ನೆಚ್ಚಿನ ನಟನ ಸಾವು ಅಭಿಮಾನಿಗಳಿಗೆ ಅರಗಿಸಿಕೊಳ್ಳದ ಸುದ್ದಿಯಾಗಿತ್ತು. ಇಂದಿಗೂ ಹಲವಾರು ರಸ್ತೆ, ಸರ್ಕಲ್, ಅಂಗಡಿಗಳಿಗೆ ಪುನೀತ್ ರಾಜ್ಕುಮಾರ್ ಹೆಸರು ಇಟ್ಟು ನೆಚ್ಚಿನ ನಟನ ನೆನಪು ಸದಾ ಉಳಿಯುವಂತೆ ಅಭಿಮಾನಿಗಳು ನೋಡಿಕೊಳ್ಳುತ್ತಿದ್ದಾರೆ.ಬಳ್ಳಾರಿಗೆ ಪುನೀತ್ ಭೇಟಿ; ಬಳ್ಳಾರಿ ಮತ್ತು ವಿಜಯನಗರ ಈಗ ಬೇರೆ ಬೇರೆ ಜಿಲ್ಲೆಗಳಾಗಿವೆ. ಬಳ್ಳಾರಿ ಜಿಲ್ಲೆಯ ಬಗ್ಗೆ ನಟ ಪುನೀತ್ ರಾಜ್ಕುಮಾರ್ಗೆ ಅಪಾರ ಅಭಿಮಾನವಿತ್ತು. ಜಿಲ್ಲೆಯಲ್ಲಿಯೂ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದರು, ನೆಚ್ಚಿನ ನಟನ ಸಿನಿಮಾ ಬಿಡುಗಡೆಗೊಂಡರೆ ಮುಂಜಾನೆಯೇ ಥಿಯೇಟರ್ ಹೊರಗೆ ಕಾದು ಸಿನಿಯಾ ನೋಡುತ್ತಿದ್ದರು.ಯುವರತ್ನ ಸಿನಿಮಾದ ಪ್ರಚಾರಕ್ಕೆ ಮಾರ್ಚ್ 22ರಂದು ಬಳ್ಳಾರಿಗೆ ಪುನೀತ್ ರಾಜ್ಕುಮಾರ್ ಭೇಟಿ ನೀಡಿದ್ದರು. ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದಿದ್ದರು.ಈ ವೇಳೆ ಮಾತನಾಡಿದ್ದ ಅವರು, “ಬಳ್ಳಾರಿ ಜೊತೆಗೆ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆ ಡಾ. ರಾಜ್ಕುಮಾರ್ ಕಾಲದಿಂದಲೂ ಬಳ್ಳಾರಿಗೂ ನಮಗೂ ಅವಿನಾಭವ ಸಂಬಂಧವಿದೆ” ಎಂದು ಹೇಳಿದ್ದರು.”ಅಪ್ಪಾಜಿ ಹೆಸರಿನಲ್ಲಿ ಇಲ್ಲಿ ಪಾರ್ಕ್ ಕೂಡಾ ಇದೆ. ಅಪ್ಪಾಜಿ ಹೆಸರಿನಲ್ಲಿ ಇಲ್ಲಿನ ಜನರು ಸಾಕಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ದೊಡ್ಮನೆ ಹುಡ್ಗ ಸೇರಿದಂತೆ ಹಲವಾರು ಚಿತ್ರಗಳ ಚಿತ್ರೀಕರಣವನ್ನು ಇಲ್ಲಿ ಮಾಡಲಾಗಿದೆ” ಎಂದು ತಿಳಿಸಿದ್ದರು.ಪುನೀತ್ ರಾಜ್ಕುಮಾರ್ ನಟನೆಯ ಅರಸು ಮತ್ತು ಪವರ್ ಸಿನಿಮಾಗಳ ಆಡಿಯೋ ಬಿಡುಗಡೆ ಸಮಾರಂಭ ಬಳ್ಳಾರಿಯಲ್ಲಿಯೇ ನಡೆದಿತ್ತು.ಈಗ ಬಳ್ಳಾರಿ, ವಿಜಯನಗರ ಬೇರೆ-ಬೇರೆ ಜಿಲ್ಲೆಯಾಗಿದೆ. ವಿಜಯನಗರ ಜಿಲ್ಲೆಗೆ ಹೊಸಪೇಟೆ ಕೇಂದ್ರ ಸ್ಥಾನವಾಗಿದೆ. ಇಲ್ಲಿನ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ರಾಜ್ಕುಮಾರ್ ಹೆಸರು ಇಡಲು ಒಪ್ಪಿಗೆ ನೀಡಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada