2021ರ ಕೊನೆಯ ದಿನ ಬಿಡುಗಡೆಯಾಗುತ್ತಿರುವ ಮೂರು ಸಿನಿಮಾಗಳಲ್ಲಿ ಒಂದು ‘ಅರ್ಜುನ್ ಗೌಡ’. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸಿದ ಈ ಸಿನಿಮಾ ರಾಮು ಬ್ಯಾನರ್ನಲ್ಲಿ ನಿರ್ಮಾಣಗೊಂಡಿರುವ 39ನೇ ಸಿನಿಮಾ. ರಾಮು ಬಹಳ ಇಷ್ಟ ಪಟ್ಟು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.
ಆದರೆ, ಇನ್ನೇನು ಸಿನಿಮಾ ಬಿಡುಗಡೆ ಮಾಡಬೇಕು ಅನ್ನುವಷ್ಟರಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದರು.
ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವ ಪಡೆದ ಡಿ.ಕೆ.ಶಿವಕುಮಾರ್.
ರಾಮು ತಮ್ಮ ನಿರ್ಮಾಣ ಸಂಸ್ಥೆಯಲ್ಲಿ 39 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ನಟಿಸಿದ ಸಿನಿಮಾಗಳೂ ಸೇರಿವೆ. ಇಬ್ಬರು ಸೂಪರ್ಸ್ಟಾರ್ಗಳಿಗೂ ರಾಮು ಸಂಸ್ಥೆ ಒಂದೊಂದು ತಿರುವು ನೀಡಿದೆ. ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ‘ಅರ್ಜುನ್ ಗೌಡ’ ಚಿತ್ರದ ಜಯಣ್ಣ, ಭೋಗೇಂದ್ರ ಹಾಡನ್ನು ಬಿಡುಗಡೆ ಮಾಡಿ, ರಾಮು ಬಗ್ಗೆ ಮಾತಾಡಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕಲಾಸಿಪಾಳ್ಯ’ ಸಿನಿಮಾಗಾಗೂ ರಾಮು ನಿರ್ಮಾಣ ಸಂಸ್ಥೆ ಬಗ್ಗೆ ಮಾತಾಡಿದ್ದಾರೆ.
‘ಕಲಾಸಿಪಾಳ್ಯ’ ದರ್ಶನ್ಗೆ ಬ್ರೇಕ್ ಕೊಟ್ಟ ಚಿತ್ರ
ಚಾಲೆಂಜಿಂಗ್ ಸ್ಟಾರ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾ ‘ಕಲಾಸಿಪಾಳ್ಯ’. ಈ ಸಿನಿಮಾ ಆ ಕಾಲಕ್ಕೆ ಬಾಕ್ಸಾಫೀಸ್ ಅನ್ನು ಚಿಂದಿ ಉಡಾಯಿಸಿತ್ತು. ಹೀಗಾಗಿ ರಾಮು ನಿರ್ಮಿಸಿದ ಕೊನೆಯ ಸಿನಿಮಾದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. “ರಾಮು ಬ್ಯಾನರ್ನಲ್ಲಿ ಸುಮಾರು ಸಿನಿಮಾ ಬಂದಿದೆ. ಅವರ ಬ್ಯಾನರ್ನಲ್ಲಿ ನಾವು ಸುಮಾರು ಸಿನಿಮಾ ಮಾಡಿದ್ದೇವೆ. ಕಲಾಸಿಪಾಳ್ಯ ನೀವು ನೋಡಬಹುದು. ಆವತ್ತಿನ ಸಮಯಕ್ಕೆ ನನ್ನ ವೃತ್ತಿ ಬದುಕಿಗೆ ಹೊಸ ಬ್ರೇಕ್ ಕೊಟ್ಟ ಸಿನಿಮಾ ಆಗಿತ್ತು. ಆ ತರಹದ ಒಂದು ಸಿನಿಮಾ ರಾಮು ಅವರು ಮಾಡಿದ್ದರು. ಎಲ್ಲಾ ಒಂದು ಟೀಮ್ ವರ್ಕ್. ಆವಾಗ ಓಂ ಪ್ರಕಾಶ್, ರಾಮು, ಮಾಲಾಶ್ರೀ ಎಲ್ಲಾ ಸೇರಿ ಒಂದೊಳ್ಳೆ ಶೇಪ್ ಕೊಟ್ಟರು. ತುಂಬಾ ಫ್ಯಾಷನ್ ಇರುವಂತಹ ಒಂದು ಬ್ಯಾನರ್.” ಎಂದು ರಾಮು ಹೇಳಿದ್ದಾರೆ.
‘ಅರ್ಜುನ್ ಗೌಡ’ ಸಿನಿಮಾಗೆ ಒಳ್ಳೆಯದಾಗಲಿ
ದರ್ಶನ್ಗೆ ‘ಅರ್ಜುನ್ ಗೌಡ’ ಎರಡು ಕಾರಣಕ್ಕೆ ಸ್ಪೆಷಲ್. ರಾಮು ನಿರ್ಮಾಣದ ಸಿನಿಮಾ ಅನ್ನೋದು ಒಂದು ಕಾರಣವಾಗಿದ್ದರೆ, ಇನ್ನೊಂದು ಪ್ರಜ್ವಲ್ ದೇವರಾಜ್ ನಟಿಸಿದ ಸಿನಿಮಾ. ಹೀಗಾಗಿ ದರ್ಶನ್ ಈ ಸಿನಿಮಾತಂಡಕ್ಕೆ ಶುಭ ಕೋರಿದ್ದಾರೆ. “ಇದೇ ಡಿಸೆಂಬರ್ 31ನೇ ತಾರೀಕು, ಅರ್ಜುನ್ ಗೌಡ ಅಂತ ಪ್ರಜ್ವಲ್ ನಟಿಸಿದ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಇನ್ನೊಂದು ಸ್ಪೆಷಾಲಿಟಿ ಏನಂದ್ರೆ, ಇದು ರಾಮು ಅವರ 39ನೇ ಸಿನಿಮಾ. ಇವತ್ತು ಅವರು ಇಲ್ಲ. ಆದರೂ, ಇದೇ ತರಹ ಒಳ್ಳೊಳ್ಳೆ ಸಿನಿಮಾ ಮಾಡುತ್ತಿರಲಿ. ಮಾಲಾಶ್ರೀ ಅವರೇ ಜವಾಬ್ದಾರಿ ತೆಗೆದುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಅರ್ಜುನ್ ಗೌಡಗೆ, ಇಡೀ ಟೀಂ ಒಳ್ಳೆಯದಾಗಲಿ.” ಎಂದಿದ್ದಾರೆ ದರ್ಶನ್.
ಎರಡು ಸಿನಿಮಾ ಮಾಡಿದ್ದೇನೆ ಎಂದ ಕಿಚ್ಚ
“ನಮ್ಮ ಚಿತ್ರರಂಗಕ್ಕೆ ಬಹಳ ದೊಡ್ಡ ಸಿನಿಮಾಗಳನ್ನು ಕೊಟ್ಟ ಸಂಸ್ಥೆ . ನನಗೆ ಆ ಸಂಸ್ಥೆಯಲ್ಲಿ ಎರಡು ಸಿನಿಮಾಗಳನ್ನು ಮಾಡುವಂತಹ ಅವಕಾಶ ಸಿಕ್ಕಿದೆ. ಈ ಅವಕಾಶ ಕೊಟ್ಟಿದ್ದಕ್ಕೆ ಮಾಲಾಶ್ರೀಯವರಿಗೆ ಧನ್ಯವಾದಗಳು. ಹೀಗಾಗಿ ಅರ್ಜುನ್ ಗೌಡ ತಂಡಕ್ಕೆ ಶುಭಾಶಯಗಳನ್ನು ಹೇಳುತ್ತೇನೆ. ಈ ಸಿನಿಮಾದಿಂದ ರಾಮು ಎಂಟರ್ಪ್ರೈಸಸ್ ಸಂಸ್ಥೆ ಇನ್ನಷ್ಟು ಸಿನಿಮಾಗಳನ್ನು ಮಾಡಲಿ.” ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada