ಬೆಂಗಳೂರು: ಕೇರಳಕ್ಕೆ ಭಾನುವಾರ (ಮೇ 29) ಪ್ರವೇಶಿಸಿರುವ ನೈಋತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ಮಂಗಳವಾರ ಆಗಮಿಸಿವೆ. ಮುಂದಿನ 3-4 ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಿಸಲಿದೆ.
2020 ಮತ್ತು 2021ರಲ್ಲಿ ವಾಡಿಕೆಯಂತೆ ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿದರೆ ಈ ಬಾರಿ ವಾಡಿಕೆಗಿಂತ ಮುನ್ನವೇ ಆಗಮಿಸಿದೆ.
ವಾಡಿಕೆಗಿಂತ ಮುನ್ನವೇ ಮಾರುತಗಳು ಎಂಟ್ರಿ ಕೊಟ್ಟರೂ ಜೂನ್ನಲ್ಲಿ ಮಳೆ ಕುಂಠಿತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದ್ದು, ರೈತರು ಕಂಗಾಲಾಗಿದ್ದಾರೆ. ಜೂನ್ನಲ್ಲಿ ರಾಜ್ಯಾದ್ಯಂತ ವಾಡಿಕೆಯಂತೆ ಒಟ್ಟಾರೆ 199 ಮಿಮೀ ಮಳೆಯಾಗಬೇಕು. ಆದರೆ, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ.
ಜೂನ್ನಲ್ಲಿ ಮಳೆ ಕೊರತೆಯಾದರೆ ಜುಲೈನಲ್ಲಿ ವಾಡಿಕೆಯಷ್ಟೇ, ಆಗಸ್ಟ್ನಲ್ಲಿ ವಾಡಿಕೆಗಿಂತ ಹೆಚ್ಚು ಮತ್ತು ಸೆಪ್ಟೆಂಬರ್ನಲ್ಲಿ ವಾಡಿಕೆಯಷ್ಟೇ ಮಳೆ ಬೀಳಲಿದೆ. ಅಸಾನಿ ಚಂಡಮಾರುತಗಳು ತೇವಾಂಶ ಭರಿತ ಮೋಡಗಳನ್ನು ಸೆಳೆದ ಪರಿಣಾಮ ಜೂನ್ನಲ್ಲಿ ಮುಂಗಾರು ಕುಂಠಿತವಾಗಲು ಕಾರಣವಾಗಿದೆ. ಶೇ.90ಕ್ಕಿಂತ ಕಡಿಮೆಗಿಂತ ಮಳೆ ಬಿದ್ದರೆ ಕೊರತೆ, ಶೇ.90-96ವರೆಗೆ ಸುರಿದರೆ ವಾಡಿಕೆಗಿಂತ ಕಡಿಮೆ, ಶೇ.96-104ವರೆಗೆ ಬಿದ್ದರೆ ವಾಡಿಕೆಯಷ್ಟೆ, ಶೇ.104-110ವರೆಗೆ ಸುರಿದರೆ ವಾಡಿಕೆಗಿಂತ ಹೆಚ್ಚು ಹಾಗೂ ಶೇ.110ಗಿಂತ ಹೆಚ್ಚು ಸುರಿದರೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ ಎನ್ನಲಾಗುತ್ತದೆ.
2021ರ ಜೂ.1ರಿಂದ ಜು.4ರವರೆಗೆ ರಾಜ್ಯಾದ್ಯಂತ ಒಟ್ಟಾರೆ 233 ಮಿಮೀ ಮಳೆಯಾಗುವ ಬದಲು 206 ಮಿಮೀ ಸುರಿದಿತ್ತು. ಶೇ.11 ಮಳೆ ಕುಂಠಿತವಾಗಿತ್ತು. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸರಾಸರಿ ಶೇ.30 ಮಳೆ ಕೊರತೆ ಉಂಟಾಗಿತ್ತು. ಆದರೆ, ಉತ್ತರ ಒಳನಾಡಿನಲ್ಲಿ ಭರ್ಜರಿ ವರ್ಷಧಾರೆಯಾಗಿತ್ತು. ಈ ಬಾರಿ ಜೂನ್ನಲ್ಲಿಯೂ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬೀಳಲಿದೆ. ಆದ್ದರಿಂದ, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಕೇರಳದಲ್ಲಿ ಮಾರುತಗಳು ಶಕ್ತಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕಾಗಲಿದೆ. ಮೋಡಗಳು ಇದ್ದರೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುವುದಿಲ್ಲ.
ಸಾಧಾರಣ ಮಳೆ: ರಾಜ್ಯದಲ್ಲಿ ಮುಂದಿನ 3-4 ದಿನ ಸಾಧಾರಣ ಮಳೆ ಬೀಳಲಿದೆ. ಮಂಗಳವಾರ ಚಾಮರಾಜನಗರದ ಹರದನಹಳ್ಳಿಯಲ್ಲಿ 46 ಮಿಮೀ, ದಕ್ಷಿಣ ಕನ್ನಡದ ಸುಳ್ಯದಲ್ಲಿ 41 ಮಿಮೀ, ಮೈಸೂರಿನ ಹುಣಸೂರಿನಲ್ಲಿ 32 ಮಿಮೀ ಮತ್ತು ಮಂಡ್ಯದ ಕೆ.ಆರ್.ಪೇಟೆಯಲ್ಲಿ 22 ಮಿಮೀ ಮಳೆ ಸುರಿದಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada