ಬೆಂಗಳೂರು,ಏ.24- ವರನಟ ಡಾ.ರಾಜ್ಕುಮಾರ್ ಅವರ 93ನೇ ಜನ್ಮ ಮಹೋತ್ಸವದ ಶುಭಾಷಯಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋರಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಗೌಡರು, ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಮತ್ತು ಸದ್ಭಾವನೆಯನ್ನು ಹರಡಬಲ್ಲವರು ರಾಜ್ಕುಮಾರ್ ಒಬ್ಬರೇ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು.
ಅಭಿಮಾನಿಗಳನ್ನು ದೇವರು ಎಂದು ಕರೆದು ಕನ್ನಡಿಗರ ಕಣ್ಮಣಿಯಾದ ಮೇರು ನಟ, ಶ್ರೇಷ್ಠ ಗಾಯಕ ಮತ್ತು ಯೋಗ ಸಾಧಕರೂ ಆದ ಡಾ.ರಾಜ್ ಕುಮಾರ್ ಅವರ 93ನೇ ಜನ್ಮಮಹೋತ್ಸವದಂದು ಅವರಿಗೆ ನನ್ನ ಆದರ ಮತ್ತು ಗೌರವಪೂರಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್ ತಾರೆ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಜಯಂತಿಯಂದು ಆ ಮೇರುನಟರಿಗೆ ನನ್ನ ಭಾವಪೂರ್ಣ ನಮನಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಿನಿಮಾ ಎಂದರೆ ಮನರಂಜನೆಯಷ್ಟೇ ಅಲ್ಲ, ಸಮಾಜದ ಪಾಲಿನ ಚಿಕಿತ್ಸಕ ಮಾರ್ಗ ಎಂದು ನಂಬಿ ನಡೆದ ಭಾರತೀಯ ಚಿತ್ರರಂಗದ ಏಕೈಕ ಕಲಾಸಂತರು ಅವರು. ಈ ಕಾರಣಕ್ಕಾಗಿಯೇ ಅಣ್ಣಾವ್ರು ಅಜರಾಮರ. ಅವರ ಚಿತ್ರಗಳನ್ನೇ ನೋಡಿಕೊಂಡು ಬೆಳೆದ ನನ್ನ ಮೇಲೆ ಅವರ ಪ್ರಭಾವ ಹೆಚ್ಚು. ಬಂಗಾರದ ಮನುಷ್ಯ ಚಿತ್ರವೇ ನಾನಿಂದು ಕೃಷಿಕನಾಗಲು ಪ್ರೇರಣೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕನ್ನಡಿಗರ ಸಾಕ್ಷಿಪ್ರಜ್ಞ,ಆಸ್ಮಿತೆ, ಶಕ್ತಿ, ಸೂರ್ತಿಯ ಸೆಲೆಯೂ ಆಗಿರುವ ಡಾ.ರಾಜ್ ಕುಮಾರ್ ಅವರನ್ನು ಸದಾ ಸ್ಮರಿಸುತ್ತಾ ಅವರ ಆದರ್ಶ ಹೆಜ್ಜೆಗಳಲ್ಲಿ ಶ್ರದ್ಧೆಯಿಂದ ನಡೆಯೋಣ. ನಾಡು, ನುಡಿ, ನೆಲ, ಜಲ ವಿಚಾರಗಳಲ್ಲಿ ಅಣ್ಣಾವ್ರು ಹೊಂದಿದ್ದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: