ಶಿವಮೊಗ್ಗದಲ್ಲಿ ಯುವಕನೊಬ್ಬನ ಹತ್ಯೆಯಾದ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೆ ಹರಕು ಬಾಯಿ ಬಿಚ್ಚಿದ್ದು, ಕೋಮು ದ್ವೇಷದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.’ಭಜರಂಗದಳದ ಕಾರ್ಯಕರ್ತ ಎಂದು ಹೇಳಲಾಗುತ್ತಿರುವ ಹರ್ಷ ಹತ್ಯೆಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಅರೋಪಿಗಳು ಯಾರು ಎಂದು ಗೊತ್ತಾಗಿದೆ.ಯಾರು ಆರೋಪಿಗಳು ಎಂಬುದನ್ನು ಸದ್ಯ ಹೇಳಲು ಸಾಧ್ಯವಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೆಂದ್ರ ಹೇಳಿಕೆ ನೀಡಿದ್ದಾರೆ.ಈ ಮಧ್ಯೆ ಸಚಿವ ಈಶ್ವರಪ್ಪ, ‘ಮುಸ್ಲಿಂ ಗೂಂಡಾಗಳೇ ಈ ಹತ್ಯೆ ನಡೆಸಿದ್ದಾರೆ’ ಎಂದು ಖಚಿತವಾಗಿ ಹೇಳುವ ಮೂಲಕ ಗೊಂದಲಕಾರಿ ಮಾತನಾಡಿದ್ದಾರೆ. ಅಲ್ಲದೆ, ಸರ್ಕಾರದ ಸಚಿವರಾಗಿ ಈ ರೀತಿ ಒಂದು ಕೋಮಿನವರ ಬಗ್ಗೆ ಹೇಳಿಕೆ ನೀಡುವುದರ ಉದ್ದೇಶ ಏನು ಎಂಬುದರ ಬಗ್ಗೆ ಪ್ರಶ್ನೆ ಎದ್ದಿದೆ. ತನಿಖೆಯ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ನನಗೆ ಗೊತ್ತಿಲ್ಲ ಎಂಬ ಬೇಜವಾಬ್ದಾರಿ ಹೇಳಿಯನ್ನೂ ಸಹ ಈಶ್ವರಪ್ಪ ನೀಡಿದ್ದಾರೆ.’ಕೊಲೆಯಾದ ಹರ್ಷ ಬಹಳ ಪ್ರಾಮಾಣಿಕ ಯುವಕ, 22 ವರ್ಷದ ಹರ್ಷ ಇನ್ನು ಮದುವೆ ಆಗಿರಲಿಲ್ಲ. ಸಂಘಟನೆಯಲ್ಲಿಯೂ ಗುರುತಿಸಿಕೊಂಡಿದ್ದ. ಮುಸಲ್ಮಾನ ಗೂಂಡಾಗಳೇ ಈ ಕೊಲೆ ಮಾಡಿದ್ದಾರೆ. ಇಷ್ಟು ಧೈರ್ಯ ಮುಸಲ್ಮಾನ್ ಗೂಂಡಾಗಳಿಗೆ ಹೇಗೆ ಬಂತು? ಈ ಬಗ್ಗೆ ತನಿಖೆ ಆಗಬೇಕು. ಇದು ಶಿವಮೊಗ್ಗ ಮುಸಲ್ಮಾನರೇ, ಹೊರಗಿನವರೇ ಎಂಬುದು ತನಿಖೆ ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಮನವಿ ಮಾಡುತ್ತೇನೆ’ ಎಂದು ಈಶ್ವರಪ್ಪ ಹೇಳಿದ್ದಾರೆ.ಇತ್ತಿಚೆಗೆ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರಧ್ವಜ ಇಳಿಸಿ, ಕೇಸರಿ ಧ್ವಜ ಹಾರಿಸಿದ್ದಾರೆ, 50 ಲಕ್ಷ ಕೇಸರಿ ಶಾಲುಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಪ್ರಚೋಧನಕಾರಿ ಹೇಳಿಕೆಗಳೇ ಇಂತಹ ಘಟನೆಗಳಿಗೆ ಕಾರಣ. ಮುಸ್ಲಿಂ ಗೂಂಡಾಗಳಿಗೆ ಇದರಿಂದ ಕುಮ್ಮಕ್ಕು ಸಿಕ್ಕಂತಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ ಇಂತಹ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಈಗ ಪ್ರಾರಂಭ ಮಾಡಿದ್ದಾರೆ. ಇದೆಲ್ಲದಕ್ಕೂ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಗೃಹ ಸಚಿವರು ಯಾರು?
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಶಿವಮೊಗ್ಗದ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವರು ಸಚಿವರು ಹೇಳಿದರೆ, ಸಚಿವ ಕೆ.ಎಸ್. ಈಶ್ವರಪ್ಪ ಕೊಲೆ ಯಾರು ಮಾಡಿದ್ದಾರೆ ಎಂಬ ಸರ್ಟಿಫಿಕೇಟ್ ನೀಡುತ್ತಾರೆ. ಹಾಗಾದರೆ ರಾಜ್ಯದಲ್ಲಿ ಗೃಹ ಸಚಿವರು ಯಾರು? ಈಶ್ವರಪ್ಪ ಅವರಿಗೆ ಈ ರೀತಿ ಮಾತನಾಡುವ ಅಧಿಕಾರ ಏನಿದೆ? ಗೃಹ ಸಚಿವರ ಕೆಲಸವನ್ನು ಈಶ್ವರಪ್ಪ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.ರಾಜ್ಯದಲ್ಲಿ ಸದ್ಯ ಸೂಕ್ಷ್ಮ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯ ಹೇಳಿಕೆ ನೀಡಬೆಕು ಎಂಬುದು ತಿಳಿದಿರಬೇಕಿತ್ತು. ಆದರೆ, ಅವರು ಸರ್ಕಾರದ ಒಬ್ಬ ಸಚಿವರಾಗಿ ಈ ರೀತಿ ಅಸೂಕ್ಷ್ಮವಾಗಿ ಮಾತನಾಡುವುದು ನೋಡಿದಾಗ ಅವರ ಉದ್ದೇಶ ಏನು ಎಂಬುದನ್ನು ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯವಾಗಬೇಕು ಎಂದರು.
ಆರು ತಿಂಗಳ ಹಿಂದೆ ಗಲಾಟೆ ನಡೆದಿತ್ತು:
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ‘ಆರು ತಿಂಗಳ ಹಿಂದೆ ಗಲಾಟೆ ನಡೆದಿತ್ತು. ಇದು ಕೊಲೆಗೆ ಕಾರಣ ಇದು ಇರಬಹುದೇ ಎಂಬ ಊಹೆ ಅಷ್ಟೇ. ಆದರೆ, ನಿಖರ ಕಾರಣ ಏನು, ಯಾರು ಈ ಕೊಲೆ ಮಾಡಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.’ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ. ತನಿಖೆ ಅಗಲಿ. ಮಧ್ಯಾಹ್ನದ ಒಳಗೆ ಮಾಹಿತಿ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಇಂದಿನ ಅಧಿವೇಶನ ಪೂರ್ಣಗೊಳಿಸಿ ಶಿವಮೊಗ್ಗಕ್ಕೆ ಪ್ರಯಾಣ ಮಾಡುತ್ತೇನೆ. ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ’ ಎಂದು ನಾರಾಯಣಗೌಡ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada