ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯೇನು ಆಗುತ್ತಿಲ್ಲ. ಆದರೆ ಮೂರನೇ ಅಲೆ ಜನರಿಗೆ ಮಾರಕ ಎನ್ನುವ ಆತಂಕದಿಂದ ಸದ್ಯಕ್ಕಂತೂ ಹೊರಬಂದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ತೆಗೆದುಹಾಕಿದೆ. ಇನ್ನು ಕೆಲವೇ ದಿನಗಳಲ್ಲಿ ನೈಟ್ ಕರ್ಫ್ಯೂವನ್ನೂ ತೆಗೆದು ಹಾಕಲು ಮುಂದಾಗಿದೆ ಎನ್ನಲಾಗಿದೆ.
ಈ ಮಧ್ಯೆ 50:50 ನೀತಿಯನ್ನು ಜಾರಿ ಮಾಡಿದ್ದ ಬಹುತೇಕ ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ.
ರಾಜ್ಯ ಸರ್ಕಾರ ನೀಡಿರುವ ಈ ವಿನಾಯಿತಿಯಿಂದ ಥಿಯೇಟರ್ಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಹೀಗಾಗಿ ಕನ್ನಡ ಚಿತ್ರರಂಗದ ತಾರೆಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ(ಜನವರಿ 29) ನಟ ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದ್ದರು. ಇಂದು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ, ಚಿತ್ರಮಂದಿರಗಳ ಶೇ.100 ಸೀಟು ಭರ್ತಿ ವಿನಾಯಿತಿ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಿದ್ದಾರೆ.
ಸಿಎಂ ಭೇಟಿಗೆ ಶಿವಣ್ಣ ನಿರ್ಧಾರ
ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ ಭೇಟಿಯಾಗಿದ್ದರು. ಈ ವೇಳೆ ರಾಜ್ಯದ ಸಿನಿಮಾ ಮಂದಿರಗಳಲ್ಲಿ 50:50 ರಿಯಾಯಿತಿ ನೀಡದಿರುವ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದರು. ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತಾಡುತ್ತಾ ಶಿವಣ್ಣ ಚಿತ್ರಮಂದಿರಕ್ಕೆ 100 ಪರ್ಸೆಂಟ್ ರಿಲ್ಯಾಕ್ಸ್ ನೀಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಥಿಯೇಟರ್ಗೆ ರಿಲ್ಯಾಕ್ಸ್ ಕೊಟ್ಟಿಲ್ಲ ಯಾಕೆ?
“ನಾವು ಕೊರೊನದ ಜೊತೆ ಜೊತೆಗೆ ಬದುಕಬೇಕಿದ್ದು, ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಎಲ್ಲಾ ಕ್ಷೇತ್ರಗಳಿಗೂ 50:50 ರೂಲ್ಸ್ನಿಂದ ರಿಲ್ಯಾಕ್ಸ್ ಕೊಡಲಾಗಿದೆ. ಆದರೆ ಸಿನಿಮಾ ಮಂದಿರಗಳಿಗೆ ಮಾತ್ರ 50:50 ರೂಲ್ಸ್ ಮುಂದುವರಿಸಲಾಗಿದ್ದು, ನಿನ್ನೆಯಷ್ಟೇ ಕೂಡ ನಾನು ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ಆದರೆ ಸಿನಿಮಾ ಮಂದಿರಗಳಿಗೆ ಯಾಕೆ ರಿಲ್ಯಾಕ್ಸ್ ಕೊಟ್ಟಿಲ್ಲ ಎಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ನಮಗೆ ಸಾಕಷ್ಟು ಬಾರಿ ಅನುಕೂಲ ಮಾಡಿಕೊಟ್ಟಿದ್ದು, ಈಗಲೂ ನಮಗೆ ಅನುಕೂಲ ಮಾಡಿಕೊಡುವ ಭರವಸೆ ಇದೆ.” ಎಂದು ಹೇಳಿದರು.
ಅಪ್ಪು ನೆನೆದಾಗಲೆಲ್ಲಾ ಧ್ವನಿ ಬದಲಾಗುತ್ತೆ
ಈ ಕಾರ್ಯಕ್ರಮದಲ್ಲಿಯೇ ಅಪ್ಪು ಅಗಲಿಕೆ ನೆನೆದು ಶಿವಣ್ಣ ಭಾವುಕರಾಗಿದ್ದರು. “ಅಪ್ಪು ನಿಧನ ನೆನಸಿಕೊಂಡಾಗೆಲ್ಲ, ನಮ್ಮ ಧ್ವನಿಯೇ ಬದಲಾಗುತ್ತದೆ. ಆ ನೋವನ್ನು ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಆ ನೋವಿನ ಜೊತೆಗೆ ಬದುಕುತ್ತಿದ್ದೇವೆ ಮತ್ತು ಮುಂದೆಯು ನೋವಿನ ಜೊತೆಗೆ ಬದುಕುತ್ತೇವೆ. ಅಪ್ಪು ಅವರದ್ಧು ಅದ್ಭುತವಾದ ಆತ್ಮ ಹೀಗಾಗಿ ಅಪ್ಪುವನ್ನ ಜನ ಈಗಲು ನೆನಪಿಸಿಕೊಂಡು ಇಷ್ಟಪಡುತ್ತಾರೆ. ಅಪ್ಪು ಗಳಿಸಿರುವ ಈ ಪ್ರೀತಿ ಕಂಡು ನನಗೆ ಹೆಮ್ಮೆ ಆಗುತ್ತಿದೆ.” ಎಂದು ಶಿವಣ್ಣ ಮೈಸೂರಿನಲ್ಲಿ ಹೇಳಿದ್ದಾರೆ.
ಶಕ್ತಿಧಾಮದಲ್ಲಿ ಶಾಲೆ ಕೆಲಸ ಆರಂಭ
ಕಳೆದ ಕೆಲವು ದಿನಗಳಿಂದ ಶಿವರಾಜ್ಕುಮಾರ್ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಶಾಲೆಯನ್ನು ತೆರೆಯುವ ಆಲೋಚನೆ ಕೂಡ ಹಾಕಿಕೊಂಡಿದ್ದಾರೆ. “ಶಕ್ತಿಧಾಮಕ್ಕೆ ಇತ್ತೀಚೆಗೆ ನಾನು ಹೆಚ್ಚಾಗಿ ಬರುತ್ತಿದ್ದೇನೆ. ನಮ್ಮ ಮನಸ್ಸುಗಳಿಗೂ ಒಂದು ಬದಲಾವಣೆ ಆಗುತ್ತದೆ. ಮಕ್ಕಳಿಗೂ ಹೊಸ ಅನುಭವ ಆಗುತ್ತದೆ. ಗೀತಾ ಈಗ ಅದರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಅದರ ದೊಡ್ಡ ಜವಾಬ್ದಾರಿ ಈಗ ನಮ್ಮ ಮೇಲಿದೆ. ಮೊನ್ನೆ ಶಕ್ತಿಧಾಮದ ಮಕ್ಕಳು ಇಷ್ಟಪಟ್ಟರು ಎಂದು ನಾನೇ ಡ್ರೈವ್ ಮಾಡಿಕೊಂಡು ಶೂಟಿಂಗ್ ಸ್ಪಾಟ್ಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಸ್ಕೂಲ್ ತೆರೆಯುವುದಕ್ಕೆ ನಮಗೆ ಅನುಮತಿ ಸಿಗುತ್ತಿದೆ. ಆ ಕೆಲಸವು ಬೇಗ ಆಗುತ್ತದೆ.” ಎಂದು ಶಿವರಾಜ್ಕುಮಾರ್ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada