ಇದೇ ಮೊದಲ ಬಾರಿಗೆ ಯಲಹಂಕದಲ್ಲಿ ಫೆಬ್ರವರಿ ೨೫ ರಂದು ಸಂಜೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದು ಟಿಟಿಡಿ ಸದಸ್ಯರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್ಆರ್ವಿಶ್ವನಾಥ್ ತಿಳಿಸಿದ್ದಾರೆ.
ಯಲಹಂಕದ ವ್ಹೀಲ್ ಅಂಡ್ ಆಯಕ್ಸಿಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಕಲ್ಯಾಣೋತ್ಸವದ ಪೂರ್ವಸಿದ್ಧತೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಈ ಕಲ್ಯಾಣೋತ್ಸವಕ್ಕೆ ೫೦ ಸಾವಿರಕ್ಕೂ ಅಧಿಕ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದರು.ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಯಲಹಂಕಕ್ಕೆ ತರಲಾಗುತ್ತಿದೆ. ತಿರುಮಲ ದೇವಾಲಯದ ಮುಖ್ಯ ಅರ್ಚಕರು ಸೇರಿದಂತೆ ೫೦ ಕ್ಕೂ ಹೆಚ್ಚು ಅರ್ಚಕರು ಉತ್ಸವಮೂರ್ತಿಯೊಂದಿಗೆ ಆಗಮಿಸುತ್ತಿದ್ದಾರೆ. ಶನಿವಾರ ಬೆಳಗ್ಗೆ ಯಲಹಂಕಕ್ಕೆ ಆಗಮಿಸಲಿರುವ ಉತ್ಸವ ಮೂರ್ತಿಯನ್ನು ಬಿಗಿ ಭದ್ರತೆ ಮತ್ತು ಬೈಕ್ ರ್ಯಾಲಿ ಮೂಲಕ ಸಮಾರಂಭ ಸ್ಥಳಕ್ಕೆ ತರಲಾಗುತ್ತದೆ. ಇಲ್ಲಿ ಸಾವಿರಕ್ಕೂ ಅಧಿಕ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತವನ್ನು ಕೋರಲಾಗುತ್ತದೆ ಎಂದರು.ಯಲಹಂಕ ಮತ್ತು ಕರ್ನಾಟಕ ರಾಜ್ಯದ ಜನರ ಕಲ್ಯಾಣಕ್ಕಾಗಿ ಈ ಕಲ್ಯಾಣೋತ್ಸವವನ್ನು ಆಯೋಜಿಸಲಾಗುತ್ತಿದೆ.
ತಿರುಮಲಕ್ಕೆ ಹೋಗಲು ಸಾಧ್ಯವಾಗದವರಿಗೆ ಅವರಿದ್ದಲ್ಲಿಯೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವುದು ಮತ್ತು ಶ್ರೀ ದೇವರ ಕೃಪೆಗೆ ಪಾತ್ರರಾಗುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಬಿಜೆಪಿ ಸ್ಥಳೀಯ ಮುಖಂಡರಾದ ಅಲೋಕ್ ವಿಶ್ವನಾಥ್, ಹನುಮಯ್ಯ, ದಿಬ್ಬೂರು ಜಯಣ್ಣ, ಸತೀಶ್, ಕೃಷ್ಣಮೂರ್ತಿ, ಚೊಕ್ಕನಹಳ್ಳಿ ವೆಂಕಟೇಶ್, ನಟರಾಜು ಅಟ್ಟೂರು ಮತ್ತಿತರರು ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada