ನಟ ನಿಖಿಲ್ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಕ್ರಿಯರಾಗಿದ್ದಾರೆ ನಿಖಿಲ್, ಈಗಾಗಲೇ ಜೆಡಿಎಸ್ ಪಕ್ಷದಲ್ಲಿ ಅವರು ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ.
ಅದರ ಜೊತೆಗೆ ಸಿನಿಮಾರಂಗದಲ್ಲಿ ಅವರು ಈಗ ಹೊಸ ಸುದ್ದಿ ನೀಡಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾವನ್ನು ನಿಖಿಲ್ ಅನೌನ್ಸ್ ಮಾಡಿದ್ದಾರೆ.
‘ಟಗರು’ ಮತ್ತು ‘ಸಲಗ’ ಸಿನಿಮಾಗಳಿಂದ ನಿರ್ಮಾಪಕರಾಗಿ ಸಕ್ಸಸ್ಫುಲ್ ಆಗಿರುವವರು ಕೆ ಪಿ ಶ್ರೀಕಾಂತ್. ಇದೀಗ ಶ್ರೀಕಾಂತ್ ಮತ್ತು ಲಹರಿ ಸಂಸ್ಥೆಯ ಜಿ. ಮನೋಹರನ್ ಅವರು ನಿಖಿಲ್ ನಟನೆಯ ಈ ಹೊಸ ಸಿನಿಮಾವವನ್ನು ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾಗೆ ಸಹ ನಿರ್ಮಾಪಕರಾಗಿ ನವೀನ್ ಮನೋಹರನ್, ಸುನಿಲ್ ಗೌಡ, ಚಂದ್ರು ಮನೋಹರನ್ ಹಣ ಹಾಕಲಿದ್ದಾರೆ. ಈ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಜಿ. ತುಳಸಿ ರಾಂ (ಲಹರಿ ವೇಲು), ಜಿ ರಮೇಶ್, ಜಿ ಆನಂದ್, ಚಂದ್ರು ಮನೋಹರನ್, ನಾಗೇಂದ್ರ ಕೆಲಸ ಮಾಡಲಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.
ಈ ಸಿನಿಮಾವನ್ನು ಹೊಸ ಪ್ರತಿಭೆ ಮನೋಹರ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್ ಲುಕ್ ಗಮನಿಸುತ್ತಿದ್ದರೆ, ಇದೊಂದು ಸ್ಪೋರ್ಟ್ಸ್ ಕುರಿತ ಸಿನಿಮಾ ಇರಬಹುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ? ಇದರ ನಾಯಕಿ ಯಾರು? ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಕೆಲಸ ಮಾಡಲಿದ್ದಾರೆ ಎಂಬುದು ಇನ್ನೂ ಕೂಡ ಗೊತ್ತಾಗಿಲ್ಲ. ಶೂಟಿಂಗ್ ಯಾವಾಗ ಶುರುವಾಗಲಿದೆ ಎಂಬುದು ಕೂಡ ಇನ್ನಷ್ಟೇ ಗೊತ್ತಾಗಬೇಕಿದೆ.
https://play.google.com/store/apps/details?id=com.speed.newskannada