ಇದೀಗ ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ದಂಪತಿ ಕೂಡ ಇದೇ ಹಾದಿಯನ್ನೇ ಅನುಸರಿಸಿದ್ದು ಕಾರ್ಪೊರೇಟ್ ಉದ್ಯಮಕ್ಕೆ ತಿಲಾಂಜಲಿ ಇಟ್ಟು ಮಾದರಿ ರೈತರಾಗುವ ಕನಸು ಹೊತ್ತು ತಮ್ಮ ಕೃಷಿ ಪ್ರಯಾಣವನ್ನು ಆರಂಭಿಸಿದ್ದಾರೆ.
ಪೈಲಟ್ ಯೋಜನೆಗೆ ದಂಪತಿಗಳ ಆಯ್ಕೆ
ಮಾಜಿ ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್ ಮತ್ತು ಪುಣೆಯ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅವರ ಪತ್ನಿ ರಾಧಿಕಾ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿ ಅದರಂತೆ ಸಾಧಿಸಿರುವ ದಂಪತಿ.
ಇವರ ನಿರ್ಧಾರ ಹಾಗೂ ಹೊಸ ಸಾಧನೆಗೆ ಬೆಂಬಲ ನೀಡಿರುವ ನಬಾರ್ಡ್ ಮತ್ತು ಇಫ್ಕೋ ಕಿಸಾನ್ನಂತಹ ಸಂಸ್ಥೆಗಳು ಜಾರ್ಖಂಡ್ನಲ್ಲಿ ಸ್ವಯಂಚಾಲಿತ ನೀರಾವರಿ ವ್ಯವಸ್ಥೆಯ (ಎಐಎಸ್) ಪೈಲಟ್ ಯೋಜನೆಗೆ ದಂಪತಿಯನ್ನು ಆಯ್ಕೆ ಮಾಡಿದೆ.
ಅದಲ್ಲದೆ ಮೊಬೈಲ್ ಆಯಪ್ ಮೂಲಕ ಹೊಲಗಳಿಗೆ ನೀರುಣಿಸುವ ರಾಜ್ಯದ ಏಕೈಕ ರೈತರು ಎಂಬ ಹೆಗ್ಗಳಿಕೆಗೂ ದಂಪತಿಗಳು ಪಾತ್ರರಾಗಿದ್ದಾರೆ. ದಂಪತಿಗಳು ತಮ್ಮ ಹೊಲದಲ್ಲಿ ತರೇಹವಾರಿ ಕೃಷಿಗಳನ್ನು ಬೆಳೆಯುತ್ತಿದ್ದು ಅದರಲ್ಲಿ ಮುಖ್ಯವಾಗಿ ಕಲ್ಲಂಗಡಿ, ಸೌತೆಕಾಯಿ, ಹಾಗಲಕಾಯಿಯನ್ನು ಬೆಳೆಯುತ್ತಾರೆ.
ಇವರು ಬೆಳೆದ ಟನ್ಗಟ್ಟಲೆ ತರಕಾರಿಗಳು ದೇಶದ ಮೂಲೆ ಮೂಲೆಯನ್ನು ತಲುಪುವುದು ಮಾತ್ರವಲ್ಲದೆ ಹೊರದೇಶಗಳಿಗೆ, ಬಾಂಗ್ಲಾದೇಶಕ್ಕೂ ರಫ್ತಾಗುತ್ತವೆ ಎಂಬುದು ಸಾಧನೆಯ ವಿಷಯವಾಗಿದೆ.
ಕೃಷಿಯಲ್ಲಿ ಸಾಧನೆ ಮಾಡಿದ ದಂಪತಿ
2020 ರ ಕೋವಿಡ್ ಸಮಯದಲ್ಲೇ ದಂಪತಿ ಪಟ್ಟಣವನ್ನು ತೊರೆದು ತಮ್ಮ ಹಳ್ಳಿಗೆ ಮರಳಲು ನಿರ್ಧರಿಸುತ್ತಾರೆ. ತಮ್ಮ ಊರಿನವರಿಗಾಗಿ ಏನಾದರೂ ಮಾಡಬೇಕೆಂಬ ಅದಮ್ಯ ಬಯಕೆಯಿಂದ ದಂಪತಿಗಳು ಪುಣೆಯನ್ನು ತೊರೆದರು ಹಾಗೂ ಕೃಷಿಗೆ ಮುಂದಾದರು.
ಬರೇ 2.5 ವರ್ಷಗಳಲ್ಲಿ ಸಾಧನೆ ಮಾಡಿರುವ ದಂಪತಿ ಇತರರಿಗೆ ಮಾದರಿ ಎಂದೆನಿಸಿದ್ದಾರೆ. ವ್ಯವಸಾಯವನ್ನು ಚೆನ್ನಾಗಿ ಅರಿತುಕೊಳ್ಳಲು ಮೊದಲಿಗೆ ವಿನೋದ್ 10 ಎಕರೆ ಭೂಮಿಯನ್ನು ಭೋಗ್ಯಕ್ಕೆ ತೆಗೆದುಕೊಳ್ಳುತ್ತಾರೆ.
ಕಲ್ಲಂಗಡಿ ಕೃಷಿ
ಹಳ್ಳಿಗರು ವಿನೋದ್ ಭೋಗ್ಯಕ್ಕೆ ತೆಗೆದುಕೊಂಡಿದ್ದ ಭೂಮಿಯನ್ನು ಬಂಜರು ಎಂದು ಲೇವಡಿ ಮಾಡಿದ್ದರು ಆದರೆ ಸೋಲೊಪ್ಪಿಕೊಳ್ಳಲು ತಯಾರಿಲ್ಲದ ವಿನೋದ್, ಅನೇಕ ಸಂಶೋಧನೆ ಹಾಗೂ ಕೃಷಿ ವಿಜ್ಞಾನಿಗಳ ಜತೆಗಿನ ಚರ್ಚೆಗಳ ನೆರವಿನಿಂದ ಕಲ್ಲಂಗಡಿ ಕೃಷಿಯನ್ನು ಆರಂಭಿಸುತ್ತಾರೆ.
ನೀರಾವರಿಗಾಗಿ ಹನಿ ವಿಧಾನವನ್ನು ಅಳವಡಿಸಿಕೊಂಡು, 2021 ರಲ್ಲಿ ಮೊದಲ ವರ್ಷದಲ್ಲಿ, ಅವರು 150 ಟನ್ ಕಲ್ಲಂಗಡಿ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದರು.
ಒಟ್ಟು 10 ಲಕ್ಷ ಆದಾಯ
2022 ರಲ್ಲಿ ಎರಡನೇ ವರ್ಷದಲ್ಲಿ ಈ ಉತ್ಪಾದನೆಯು 210 ಟನ್ಗೆ ತಲುಪಿತು ಮತ್ತು ಒಟ್ಟು ವ್ಯವಹಾರವು ಸುಮಾರು 10 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸಿತು.
ಕಲ್ಲಂಗಡಿ ಕೃಷಿಯೊಂದಿಗೆ ಋತುಗಳಿಗನುಗುಣವಾದ ಬೆಳೆಗಳನ್ನು ವಿನೋದ್ ಆರಂಭಿಸಿದರು. ವಿನೋದ್ ಅವರ ಕೃಷಿ ಭೂಮಿಯಲ್ಲಿ ಕಳೆದ ವರ್ಷ ಸುಮಾರು 150 ಕ್ವಿಂಟಾಲ್ ಸೌತೆಕಾಯಿ, 100 ಕ್ವಿಂಟಾಲ್ ಹಾಗಲಕಾಯಿ ಮತ್ತು 100 ಕ್ವಿಂಟಾಲ್ ನನುವಾ ಉತ್ಪಾದನೆಯಾಗಿತ್ತು ಎಂಬುದು ಸಾಧನೆಯಾಗಿದೆ.
ರಿಮೋಟ್ ನೀರಾವರಿ ಆಯಪ್ ಹೇಗೆ ಸಹಕಾರಿಯಾಗಿದೆ?
ದೂರದಲ್ಲಿದ್ದುಕೊಂಡೇ ಆಯಪ್ ಮೂಲಕ ಕೃಷಿ ಭೂಮಿಗೆ ನೀರಾವರಿ ಮಾಡುವ ಯೋಜನೆಯನ್ನು ವಿನೋದ್ ದಂಪತಿಗಳು ಜಾರಿಗೆ ತಂದರು. ಇದಕ್ಕಾಗಿ ಜಮೀನಿನಲ್ಲಿ ಟವರ್ ಅನ್ನು ಸ್ಥಾಪಿಸಿದರು.
ಆಯಪ್ ಮೂಲಕ ನೀರಾವರಿ
ಹೀಗೆ ಮೊಬೈಲ್ ಚಾಲಿತ ಆಯಪ್ ಮೂಲಕ ಎಲ್ಲಿಂದ ಬೇಕಾದರೂ ನೀರಾವರಿ ಮಾಡಬಹುದು. ಐದು ಎಕರೆ ಜಮೀನಿನಲ್ಲಿ ವಿನೋದ್ ಈ ತಂತ್ರ ಬಳಸುತ್ತಿದ್ದಾರೆ.
ತಮ್ಮ ಐದು ಎಕರೆ ಜಮೀನನ್ನು ನಾಲ್ಕು ಭಾಗ ಮಾಡಿ 1.25 ಎಕರೆಗೆ ಆಯಪ್ ಮೂಲಕ ನೀರು ಹರಿಸಿದ್ದಾರೆ. ರಾಜ್ಯದಲ್ಲಿಯೇ ಇದು ಮೊದಲ ಯೋಜನೆಯಾಗಿದೆ.
ಇದರ ಯಶಸ್ಸಿನ ನಂತರ, ರಾಜ್ಯದ ಇತರ ರೈತರೂ ಈ ತಂತ್ರವನ್ನು ಬಳಸಲು ಸಾಧ್ಯವಾಗುತ್ತದೆ ಎಂಬುದು ವಿನೋದ್ ದಂಪತಿಗಳ ಅಭಿಪ್ರಾಯವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada