ಸುಧಾಕರ ಚತುರ್ವೇದಿ ಅವರು ವೇದತಜ್ಞರಾಗಿ, ಗಾಂಧೀಜಿಯವರ ಒಡನಾಡಿಯಾಗಿ, ಜಲಿಯನ್ ವಾಲಾಬಾಗ್ ದುರಂತದ ಪ್ರತ್ಯಕ್ಷದರ್ಶಿಗಳಾಗಿ 123 ವರ್ಷ ಜೀವಿಸಿದ್ದ ಕನ್ನಡಿಗರೆಂದು ಹೇಳಲಾಗಿದೆ. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.ಸುಧಾಕರ ಚತುರ್ವೇದಿ ಅವರು 1897ರ ಏಪ್ರಿಲ್ 20ರಂದು ಜನಿಸಿದರೆಂದು ಹೇಳಲಾಗಿದೆ. ಸುಧಾಕರ ತನ್ನ ಎಂಟನೇ ವಯಸ್ಸಿನಲ್ಲೇ ಅಕ್ಕ ಪದ್ಮಾವತಿ ಬಾಯಿಯವರಿಂದ ವ್ಯಾಕರಣ, ಪ್ರಾಚೀನ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡಿದ್ದರು. ದಯಾನಂದ ಸರಸ್ವತಿಯವರ ಜೀವನ ಚರಿತ್ರೆ ಬಾಲ್ಯದಲ್ಲಿಯೇ ಅವರ ಮೆಚ್ಚಿನ ಓದಾಗಿತ್ತು. ಇವರ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಪುಟ್ಟಮ್ಮ ಅವರ ಪಾತ್ರವೂ ಪ್ರಮುಖವಾಗಿತ್ತು.
ಸುಧಾಕರ ಚತುರ್ವೇದಿ ಬೆಂಗಳೂರು ಚಾಮರಾಜಪೇಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಮಾಧ್ವ ಬ್ರಾಹ್ಮಣ ಸಂಪ್ರದಾಯದ ಮನೆಯಲ್ಲಿ ಬೆಳೆದ ಇವರಿಗೆ ಇಬ್ಬರು ಮುಸಲ್ಮಾನ ಸ್ನೇಹಿತರಿದ್ದರು. ಒಮ್ಮೆ ಇವರ ನಡುವೆ ಜಾತಿ, ಧರ್ಮಗಳ ಪ್ರಶ್ನೆ ಬಂದಾಗ, ಸುಧಾಕರ ಆ ಸ್ನೇಹಿತರಿಗೆ ಕಚ್ಚೆ ಉಡಿಸಿ, ಜನಿವಾರ ಹಾಕಿಸಿ ಮನೆಗೆ ಕರೆಸಿ, ತನ್ನ ತಂದೆಯೊಂದಿಗೆ ಕೂರಿಸಿ ಊಟ ಬಡಿಸಿದರು. ಆದರೆ, ಎಲೆಗೆ ಉಪ್ಪಿನಕಾಯಿ ಬೀಳುತ್ತಿದ್ದಂತೆ ಅವರಲ್ಲೊಬ್ಬ ಬೆರಳಿಂದ ಅದನ್ನು ಎತ್ತಿ ನಾಲಿಗೆ ಮೇಲಿಟ್ಟು ಚಪ್ಪರಿಸಿದ. ಇದರಿಂದ ಅನುಮಾನಗೊಂಡ ತಂದೆ ಟಿ.ವಿ.ಕೃಷ್ಣರಾವ್ ಎಲ್ಲರನ್ನು ಓಡಿಸಿ ಮನೆಗೆಲ್ಲ ಗಂಜಲ ಸಿಂಪಡಿಸಿ ಶುದ್ಧಿ ಮಾಡಿದ್ದರಂತೆ.
ಸ್ವಾಮಿ ದಯಾನಂದರ ಶಿಷ್ಯ ಶ್ರದ್ಧಾನಂದರು ಹರಿದ್ವಾರದಲ್ಲಿ ಸ್ಥಾಪಿಸಿದ್ದ ‘ಗುರುಕುಲ ಕಾಂಗಡಿ’ ವಿಶ್ವವಿದ್ಯಾಲಯದಲ್ಲಿ ಸತತ ಆರು ವರ್ಷ ಅಭ್ಯಾಸ ಮಾಡಿ ‘ವೇದಾಲಂಕಾರ’ ಪದವಿ ಪಡೆದರು. ನಂತರ ಉತ್ತರ ಭಾರತದಲ್ಲಿ ಸಂಚರಿಸುತ್ತ ಸ್ವತಃ ವೇದಾಭ್ಯಾಸ ಮಾಡಿ ಎರಡೇ ವರ್ಷದಲ್ಲಿ ‘ವೇದ ವಾಚಸ್ಪತಿ’ ಆದರು. ಜ್ಞಾನ ಸಂಪಾದನೆ ಹೆಚ್ಚುತ್ತಿದ್ದಂತೆ ಪದವಿಗಳ ಬಗೆಗೆ ವ್ಯಾಮೋಹ ಇಲ್ಲವಾಗಿ, ಆಳ ಅಧ್ಯಯನದಲ್ಲಿ ನಿರತರಾದರು. ನಾಲ್ಕು ವೇದಗಳಲ್ಲೂ ಪರಿಣತಿ ಪಡೆದು ‘ಚತುರ್ವೇದಿ’ ಎಂದು ಹೆಸರಾದರು. ಹಲವು ವರ್ಷಗಳ ಸಂಚಾರದ ಬಳಿಕ ಬೆಂಗಳೂರಿಗೆ ವಾಪಸ್ಸಾದರು. ಮಠವೊಂದರಲ್ಲಿ ಗುರುಗಳ ಭೇಟಿಗೆಂದು ಹೋಗಿದ್ದಾಗ, ವಿಧವೆಯೊಬ್ಬಳು ಗುರುಗಳ ಕಾಲಿಗೆ ನಮಸ್ಕರಿಸುವಷ್ಟರಲ್ಲಿ, ಆ ಗುರು ‘ಥೂ ಮುಂಡೆ ಅನಿಷ್ಟ ಹೋಗು ಆಕಡೆ ಎಂದು ಗದರುತ್ತಿದ್ದರು. ಆ ಘಟನೆ ಸುಧಾಕರ ಅವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತು. ವಿಧವೆಯರು ಮಾತ್ರ ಏಕೆ ದರಿದ್ರರು..? ಗಂಡಸರು ಎಷ್ಟು ಮದುವೆ ಬೇಕಾದರು ಮಾಡಿಕೊಳ್ಳಬಹುದು, ಸ್ತ್ರೀಯರಿಗೆ ಏಕೆ ಆ ಹಕ್ಕಿಲ್ಲ..? ಎಂಬ ಪ್ರಶ್ನೆಗಳನ್ನು ಗುರುಗಳಲ್ಲಿ ಕೇಳಿದ್ದರಂತೆ. ಇದರಿಂದ ಕೋಪಗೊಂಡ ಗುರು, ನಿಷ್ಠಾವಂತ ಬ್ರಾಹ್ಮಣರ ಮನೆಯಲ್ಲಿ ಇಂತಹ ಅಧಿಕ ಪ್ರಸಂಗಿ ಎಂದು ಟೀಕಿಸಿ; ಸಭೆ ಕರೆಸಿ ಬಹಿಷ್ಕಾರ ಹಾಕಿದರಂತೆ. ‘ಯಾವತ್ತೋ ನಿಮ್ಮನ್ನು ನನ್ನೆದೆಯಿಂದ ಬಹಿಷ್ಕರಿಸಿದ್ದೇನೆ’ ಎಂದು ಸುಧಾಕರ್ ಹೊರನಡೆದರಂತೆ.ಈ ಘಟನೆಯ ನಂತರ ಸುಧಾಕರ ಚತುರ್ವೇದಿ ಅವರು ಬೀದಿ-ಬೀದಿಗಳಲ್ಲಿ ತಿರುಗಿ ಜೀವನ ಸಾಗಿಸಬೇಕಾಗಿ ಬಂತು. ಸಂಬಂಧಿಗಳು ಮನೆಗೆ ಸೇರಿಸಲು ಹೆದರಿದರು. ಅಲೆದಾಟ ಇನ್ನಷ್ಟು ಗಟ್ಟಿಯಾಗಿಸಿತು. ಮತ್ತೆ ಉತ್ತರ ಭಾರತದ ಕಡೆಗೆ ತೆರಳಿದರು. ಜೀವನೋಪಾಯಕ್ಕಾಗಿ ಭಾಷಣಗಳನ್ನು ಮಾಡಿದರು. ಅದರಿಂದ ರೂಪಾಯಿ 100ರಿಂದ 2,000ದ ವರೆಗೂ ಸಂಭಾವನೆ ಸಿಗುತ್ತಿದ್ದು ಆರ್ಥಿಕ ಸಮಸ್ಯೆ ದೂರವಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: