ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಈವರೆಗೆ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿರುವ ಭಾರತೀಯ ತಂಡ ಈ ಬಾರಿ ಆ ಕೆಟ್ಟ ದಾಖಲೆಯನ್ನು ಅಳಿಸಿಹಾಕುವ ಆತ್ಮವಿಶ್ವಾಸದಲ್ಲಿದೆ.
ಹೀಗಾಗಿ ಆಡುವ ಬಳಗದ ಸಂಯೋಜನೆ ಸಾಕಷ್ಟು ಕುತೂಹಲಕಾರಿಯಾಗಿದೆ. 18 ಮಂದಿ ಆಟಗಾರರ ಸ್ಕ್ವಾಡ್ನಲ್ಲಿ ಅಂತಿಮ 11ರ ಬಳಗದ ಆಯ್ಕೆ ಮ್ಯಾನೇಜ್ಮೆಂಟ್ ಪಾಲಿಗೆ ಸವಾಲಾಗಿದ್ದರೂ ಪ್ರತಿಭಾನ್ವಿತ ಆಟಗಾರರೇ ತುಂಬಿರುವುದರಿಂದಾಗಿ ದಕ್ಷಿಣ ಆಫ್ರಿಕಾದ ಸವಾಲನ್ನು ಭಾರತ ದಿಟ್ಟವಾಗಿ ಎದುರಿಸುವ ವಿಶ್ವಾಸದಲ್ಲಿದೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಈ ಆಟಗಾರ ಖಂಡಿತವಾಗಿಯೂ ಸ್ಥಾನವನ್ನು ಪಡೆಯುತ್ತಾರೆ ಎಂಬ ವಿಶ್ವಾಸವನ್ನು ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ವ್ಯಕ್ತಪಡಿಸಿದ್ದಾರೆ. ಸಂಜಯ್ ಬಂಗಾರ್ ಹೀಗೆ ಆತ್ಮ ವಿಶ್ವಾಸದಿಂದ ಮಾತನಾಡಿದ್ದು ಶಾರ್ದೂಲ್ ಠಾಕೂರ್ ಬಗ್ಗೆ.
ದಕ್ಷಿಣ ಆಫ್ರಿಕಾಗೆ ಟೆಸ್ಟ್ ಸರಣಿಗಾಗಿ ಪ್ರವಾಸಕೈಗೊಂಡಿರುವ ಭಾರತೀಯ ತಂಡದಲ್ಲಿರುವ 18 ಸದಸ್ಯರ ಪೈಕಿ ಆರು ವೇಗಿಗಳಿದ್ದಾರೆ. ಅದರೆ ಬ್ಯಾಟಿಂಗ್ನಲ್ಲಿಯೂ ಕೊಡುಗೆ ನೀಡಬಲ್ಲ ವೇಗಿ ಅಂದರೆ ಅದು ಶಾರ್ದೂಲ್ ಠಾಕೂರ್ ಮಾತ್ರ ಎಂಬುದು ಗಮನಾರ್ಹ ಸಂಗತಿ.