ಮಳೆ ಬರದೇ ಎರಡು ಸೆಷೆನ್ಸ್ ಆಟ ನಡೆದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಸೌತ್ ಆಫ್ರಿಕಾ ಈಗಾಗಲೇ ಮೂರು ಪ್ರಮುಖ ಬ್ಯಾಟುಗಾರರನ್ನ ಕಳೆದುಕೊಂಡಿದೆ. ಏಡನ್ ಮರ್ಕ್ರಮ್, ಕೀಗನ್ ಪೀಟರ್ಸನ್ ಮತ್ತು ರಾಸೀ ವಾನ್ ಡರ್ ಡುಸೆನ್ ಅವರು ಪೆವಿಲಿಯನ್ಗೆ ಮರಳಿದ್ದಾರೆ. ಕೆಳಮಧ್ಯಮ ಕ್ರಮಾಂಕದಲ್ಲಿ ಆಡುವ ಕೇಶವ್ ಮಹಾರಾಜ್ ಕೂಡ ಔಟಾಗಿದ್ಧಾರೆ. ಈಗ ಅರ್ಧಶತಕ ಗಳಿಸಿ ಬಂಡೆಯಂತೆ ನಿಂತಿರುವ ಡೀನ್ ಎಲ್ಗಾರ್, ಟೆಂಬಾ ಬವುಮಾ ಮತ್ತು ಕ್ವಿಂಟನ್ ಡೀಕಾಕ್ ಅವರಷ್ಟೇ ಪ್ರಮುಖ ಬ್ಯಾಟುಗಾರರು ಉಳಿದಿರುವುದು. ಈ ಮೂವರಲ್ಲಿ ಒಂದೆರಡು ದೊಡ್ಡ ಜೊತೆಯಾಟ ಬಂದರೆ ಮಾತ್ರ ಸೌತ್ ಆಫ್ರಿಕಾ ಗೆಲ್ಲಲು ಸಾಧ್ಯ. ಆದರೆ, ಗೆಲ್ಲಲು ಗಳಿಸಬೇಕಿರುವ 211 ರನ್ಗಳ ಹಾದಿ ಸೌತ್ ಆಫ್ರಿಕಾಗೆ ಬಹಳ ಕಠಿಣ ಆಗಲಿದೆ.
ಮುನ್ನೂರಕ್ಕೂ ಹೆಚ್ಚು ರನ್ ಗುರಿ ಕೊಟ್ಟು ಭಾರತ ಸೋತದ್ದಿಲ್ಲ:ಒಂದು ಕುತೂಹಲಕಾರಿ ಅಂಕಿಅಂಶ ಇದೆ. ಭಾರತ ತನ್ನ ಎದುರಾಳಿಗಳಿಗೆ ಇದೂವರೆಗೆ 10 ಬಾರಿ 300ಕ್ಕೂ ಹೆಚ್ಚು ರನ್ಗಳ ಗುರಿ ಕೊಟ್ಟಿದೆ. ಇದರಲ್ಲಿ ಒಂಬತ್ತು ಬಾರಿ ಗೆಲುವು ಸಾಧಿಸಿದೆ. ಒಮ್ಮೆ ಮಾತ್ರ ಪಂದ್ಯ ಡ್ರಾ ಆಗಿದೆ. ಸೌತ್ ಆಫ್ರಿಕಾಗೆ ಗೆಲ್ಲಲು 305 ರನ್ ಗುರಿ ಕೊಟ್ಟಿರುವ ಭಾರತ ಈ ಪಂದ್ಯ ಗೆಲ್ಲುವ ಸಾಧ್ಯತೆಯಂತೂ ಸದ್ಯ ದಟ್ಟವಾಗಿದೆ.
ಮಳೆ ಬರುತ್ತಾ?
ಹವಾಮಾನ ವರದಿ ಪ್ರಕಾರ ಸೆಂಚೂರಿಯನ್ನಲ್ಲಿ ಮಧ್ಯಾಹ್ನದ ವೇಳೆ ಮಳೆ ಬರುವ ಸಾಧ್ಯತೆ ಶೇ. 65ರಷ್ಟು ಇದೆ. ಒಂದು ವೇಳೆ ಮಳೆ ಬಂದರೆ ಸಂಜೆಯ ವೇಳೆಗೆ ಕಡಿಮೆ ಆಗುತ್ತದೆ. ಆದರೆ, ಮಧ್ಯಾಹ್ನದವರೆಗೂ ಮಳೆ ಬರದೇ ಹೋದಲ್ಲಿ ಇಂದು ಬೆಳಗಿನ ಮೊದಲ ಸೆಷೆನ್ ಆಟ ನಡೆಯಲು ಅಡ್ಡಿ ಇರುವುದಿಲ್ಲ.
ಈ ಮೊದಲ ಸೆಷನ್ನಲ್ಲಿ ಮಾಡಲಾಗುವ 30 ಓವರ್ಗಳಲ್ಲಿ ಭಾರತದ ಬೌಲರ್ಗಳು ಸೌತ್ ಆಫ್ರಿಕಾದ ಉಳಿದಿರುವ ಆರು ವಿಕೆಟ್ಗಳನ್ನ ಪಡೆಯಬಲ್ಲರಾ ಕಾದು ನೋಡಬೇಕು.
ಆದರೆ, ಡೀನ್ ಎಲ್ಗಾರ್, ಟೆಂಬಾ ಬವುಮಾ ಮತ್ತು ಕ್ವಿಂಟಾನ್ ಡೀಕಾಕ್ ಅವರು ವರ್ಲ್ಡ್ ಕ್ಲಾಸ್ ಬ್ಯಾಟುಗಾರರಾಗಿದ್ದು, ಇವರು ಕಚ್ಚಿ ನಿಂತು ಆಡಿದರೆ ಭಾರತದ 305 ರನ್ ಗುರಿಯನ್ನ ಮುಟ್ಟಲು ಸೌತ್ ಆಫ್ರಿಕಾಗೆ ಸಾಧ್ಯ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: