ರಾಯ್ಪುರ್ (ಛತ್ತೀಸ್ಗಢ): ಭಾರತ ದೇಶವನ್ನು ಹಾಳು ಮಾಡಿದವರೇ ಗಾಂಧಿ. 1947ರಲ್ಲಿ ದೇಶ ವಿಭಜನೆಯಾಗಲು ಅವರೇ ಕಾರಣ, ಇಲ್ಲದಿದ್ದರೆ ದೇಶ ಸುಭೀಕ್ಷವಾಗಿರುತ್ತಿತ್ತು ಎನ್ನುವ ಮೂಲಕ ಗಾಂಧಿಯನ್ನು ನಿಂದಿಸಿ, ಅವರ ಹಂತಕ ನಾಥೂರಾಮ್ ಗೊಡ್ಸೆಯನ್ನು ಮಹಾರಾಷ್ಟ್ರದ ಸಂತ ಕಾಲಿಚರಣ್ ಹಾಡಿ ಹೊಗಳಿರುವ ಘಟನೆ ರಾಯ್ಪುರದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ನಡೆದಿದೆ.
ಗಾಂಧಿ ದೇಶವನ್ನು ಸತ್ಯನಾಶ ಮಾಡಿದರು. ಅವರನ್ನು ಕೊಂದ ಗೋಡ್ಸೆಗೆ ನಾನು ದೊಡ್ಡ ನಮಸ್ಕಾರ ಮಾಡುತ್ತೇನೆ ಎಂದರು. ಇದರ ಜತೆಗೆ, ‘ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಕಟ್ಟಾ ಹಿಂದೂ ಧರ್ಮೀಯನೇ ಆಗಿರಬೇಕು, ಶಾಸಕ, ಸಂಸದ ಎಲ್ಲರೂ ಹಿಂದೂ ಧರ್ಮಿಯಾಗಿರಬೇಕು. ದೇಶದಲ್ಲಿ ಯಾರು ಮತ ಚಲಾಯಿಸುವುದಿಲ್ಲವೋ ಅಂಥವರು ಪರೋಕ್ಷವಾಗಿ ಇಸ್ಲಾಂಗೆ ಬೆಂಬಲ ನೀಡಿದ ಹಾಗೆಯೇ ಆಗುತ್ತದೆ. ಈ ಮೂಲಕ ಇಸ್ಲಾಂ ಪ್ರಬಲಗೊಳ್ಳಲು ದಾರಿ ಮಾಡಿ ಕೊಡುತ್ತೀರಿ ಎಂದು ಹೇಳಿದರು.
ಈ ಮಾತು ಇಡೀ ಸಭೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿ, ಭಾರಿ ವಿವಾದದ ಅಲೆಯನ್ನೂ ಹುಟ್ಟುಹಾಕಿದೆ. ಈ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಗೋಸೇವಾ ಆಯೋಗದ ಅಧ್ಯಕ್ಷರಾದ ಮಹಾಂತ್ ರಾಮಸುಂದರ್ ದಾಸ್ ವೇದಿಕೆ ಬಿಟ್ಟು ಹೋದ ಘಟನೆಯೂ ನಡೆಯಿತು.
ನಂತರ ಈ ಬಗ್ಗೆ ಮಾತನಾಡಿದ ಮಹಾಂತ್ ರಾಮಸುಂದರ್ ದಾಸ್, ಧರ್ಮ ಸಂಸತ್ತಿನ ಉದ್ದೇಶವೇ ಬೇರೆ. ಆದರೆ ಇಲ್ಲಿ ರಾಜಕೀಯ ವಿಚಾರಗಳನ್ನು ಎಳೆದು ತಂದಿರುವುದು ದುರದೃಷ್ಟಕರ’ ಎಂದರು. ರಾಷ್ಟ್ರಪಿತನನ್ನು ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ. ಅವರೊಬ್ಬ ಶ್ರೇಷ್ಠ ವ್ಯಕ್ತಿ. ಶ್ರೇಷ್ಠ ಸನ್ನಡತೆಯನ್ನು ಅವರು ಹೊಂದಿದ್ದರು. ದೇಶವನ್ನು ದಾಸ್ಯದ ಸಂಕೋಲೆಗಳಿಂದ ಮುಕ್ತಗೊಳಿಸಲು ಅವರು ತಮ್ಮ ಜೀವನವನ್ನೇ ಮುಡುಪಿಟ್ಟರು. ಅವರ ಬಗ್ಗೆ ಇಂಥ ಮಾತು ಖಂಡನೀಯ ಹಾಗೂ ನಾಚಿಕೆಗೇಡು ಎಂದರು.
ಸಂತ ಕಾಲಿಚರಣ್ ಈ ರೀತಿ ಮಾತನಾಡುತ್ತಿದ್ದರೂ ಪತ್ರಕರ್ತರು ಕೂಡ ಇದನ್ನು ಪ್ರಶ್ನೆ ಮಾಡಿಲ್ಲ. ಇಂಥ ನೋವನ್ನು ನಾನು ಸಹಿಸಲಾರೆ, ಮುಂದಿನ ಧರ್ಮ ಸಂಸದ್ನಲ್ಲಿ ಪಾಲ್ಗೊಳ್ಳಲಾರೆ’ ಎಂದು ಹೇಳಿ ಮಹಾಂತ್ ರಾಮಸುಂದರ್ ದಾಸ್ ಹೊರನಡೆದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: