ನವದೆಹಲಿ, ಫೆ.4 – ಕೇಂದ್ರ ಸರ್ಕಾರ ಎಲ್ಲರ ಜೊತೆ ಜಗಳವಾಡುತ್ತಲೇ ಇದೆ. ಮತ್ತೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡದೇ ತಮ್ಮ ಕೆಲಸವನ್ನು ತಾವು ಮಾಡಬೇಕು ಮತ್ತು ಇತರರಿಗೂ ಕೆಲಸ ಮಾಡಲು ಬಿಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಎಲ್ಲರ ಜೊತೆ ಜಗಳವಾಡುತ್ತಿದೆ. ನ್ಯಾಯೀಧಿಶರು, ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ, ರೈತರು, ವರ್ತಕರು ಸೇರಿದಂತೆ ಎಲ್ಲರೊಂದಿಗೂ ಗಲಾಟೆ ಮಾಡಿಕೊಳ್ಳುತ್ತಲಿದೆ. ಜಗಳವಾಡದೇ ಅಭಿವೃದ್ಧಿ ಕೆಲಸ ಮಾಡಲು ಸಾದ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೊಬ್ಬರ ಕೆಲಸದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು. ತಮ್ಮ ಕೆಲಸವನ್ನು ತಾವು ಮಾಡುವ ಮೂಲಕ ಬೇರೆಯವರು ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ದೆಹಲಿಯ ಲೆ.ಗವರ್ನರ್ ನೇಮಕಾತಿಯಲ್ಲಿ ಕೇಜ್ರಿವಾಲ್ ಸರ್ಕಾರದೊಂದಿಗೆ ವಿವಾದ ಹೊಂದಿದೆ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಧಿಕಾರ ವ್ಯಾಪ್ತಿಯ ಬಗ್ಗೆ ತಗಾದೆ ಇದೆ. ಕಳೆದ ತಿಂಗಳು ಕೇಜ್ರಿವಾಲ್ ನೇತೃತ್ವದಲ್ಲಿ ರಾಜಭವನ್ ಚಲೋ ನಡೆಸಿ, ಶಾಲಾ ಶಿಕ್ಷಕರನ್ನು ತರಬೇತಿಗಾಗಿ ಫಿನ್ಲಾಂಡ್ಗೆ ಕಳುಹಿಸುವ ಪ್ರಸ್ತಾವನೆಗೆ ಅನುಮತಿ ನೀಡಲು ವಿಳಂಬ ಮಾಡಿರುವುದನ್ನು ಪ್ರಶ್ನಿಸಲಾಯಿತು.
ಜೊತೆಗೆ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಅಬಕಾರಿ ಪ್ರಕರಣದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸುವ ಮೂಲಕ ಆಪ್ ಶಾಸಕರನ್ನು ಖರೀದಿಸುವ ಮತ್ತು ಸರ್ಕಾರವನ್ನು ಕೆಡವುವ ಯತ್ನ ಮಾಡಿತ್ತು ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಲೆ.ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರ ನೀಡಲು ರೂಪಿಸಲಾಗಿರುವ ಜಿಎನ್ಸಿಟಿಡಿ ತಿದ್ದುಪಡಿ ಕಾಯ್ದೆಯನ್ನು ಕೇಜ್ರಿವಾಲ್ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದೆ. ಈ ಬಗ್ಗೆ ತೀರ್ಪು ಬರಬೇಕಿದೆ. ಕೇಜ್ರಿವಾಲ್ ಅವರು ನ್ಯಾಯಾಲಯದ ತೀರ್ಪು ತಮ್ಮ ಪರವಾಗಿ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada