ಬಾಲಿವುಡ್ನಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಲವು ಸಾಧಕರ ಜೀವನವನ್ನು ಸಿನಿಮಾ ಮಾಡಲಾಗಿದೆ. ಕ್ರೀಡೆ, ರಾಜಕಾರಣ ಕ್ಷೇತ್ರದ ಸಾಧಕರು ಅಥವಾ ಭೂಗತ ಜಗತ್ತಿನ ಡಾನ್ಗಳು ಇಂಥವರ ಜೀವನವನ್ನೇ ಹೆಚ್ಚಾಗಿ ತೆರೆಗೆ ತರಲಾಗಿದೆ.
ಆದರೆ ಇತ್ತೀಚೆಗೆ ಇದು ಬದಲಾವಣೆ ಆಗಿದ್ದು ಬೇರೆ ರಂಗಗಳ ಸಾಧಕರ ಕತೆಗಳನ್ನು ಸಿನಿಮಾ ಮಾಡುವ ಪರಿಪಾಟ ಹೆಚ್ಚಾಗುತ್ತಿರುವುದು ಸ್ವಾಗತಾರ್ಹ.
ದೇಶದ ಅತ್ಯುತ್ತಮ ಗಣಿತಜ್ಞೆ, ಬೆಂಗಳೂರಿನ ಶಕುಂತಲಾ ದೇವಿ, ಬಡವರ ಮಕ್ಕಳು ಐಐಟಿ ಸೇರಿದಂತೆ ಮಾಡಿದ ಶಿಕ್ಷಕ ಆನಂದ್ ಜೀವನ ಆಧರಿಸಿದ ‘ಸೂಪರ್ 30’, ಅಣು ವಿಜ್ಞಾನಿ ನಂಬಿಯಾರ್ ಜೀವನ ಆಧರಿಸಿದ ‘ನಂಬಿಯಾರ್ ಎಫೆಕ್ಟ್’, ಸ್ವಾತಂತ್ರ್ಯ ಹೋರಾಟಗಾರ ಸರ್ಧಾರ್ ಉದ್ಧಮ್ ಸಿಂಗ್, ಕಾರ್ಗಿಲ್ ವೀರ ವಿಕ್ರಂ ಬಾತ್ರಾ ಜೀವನ ಆಧರಿಸಿದ ‘ಶೇರ್ಷಾ’ ಇವುಗಳಲ್ಲಿ ಕೆಲವು. ಇದೀಗ ಭಾರತದ ಮೊದಲ ಅಂತರಿಕ್ಷಯಾನಿಯ ಜೀವನ ತೆರೆಗೆ ಬರಲು ಸಜ್ಜಾಗುತ್ತಿದೆ.
ಭಾರತದ ಮೊದಲ ಅಂತರಿಕ್ಷಯಾನಿ ರಾಕೇಶ್ ಶರ್ಮಾ ಜೀವನವನ್ನು ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಘೋಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿತ್ತು, ಆದರೆ ಇದೀಗ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್, ರಾಕೇಶ್ ಶರ್ಮಾ ಜೀವನ ಆಧರಿಸಿದ ಸಿನಿಮಾ ನಿಂತಿಲ್ಲವೆಂದು ಹೇಳುವ ಜೊತೆಗೆ ಸಿನಿಮಾದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ರಾಕೇಶ್ ಶರ್ಮಾ ಜೀವನವನ್ನು ಸಿನಿಮಾ ಮಾಡುವ ಯೋಜನೆಯನ್ನು ಕೈಬಿಡಲಾಗಿಲ್ಲ. ಕೆಲವು ಕಾರಣಗಳಿಂದ ಸಿನಿಮಾ ನಿರ್ಮಾಣ ತಡವಾಗಿದೆ ಅಷ್ಟೆ. ”ಯಾವುದೇ ಸಿನಿಮಾದ ನಿರ್ಮಾಣ ಅಷ್ಟು ಸುಲಭವಲ್ಲ. ಕತೆಯ ಮೇಲೆ, ತಂತ್ರಜ್ಞರ ಮೇಲೆ ನಂಬಿಕೆ ಇರಬೇಕು ಆಗಷ್ಟೆ ಒಂದೊಳ್ಳೆ ಸಿನಿಮಾ ಆಗಲು ಸಾಧ್ಯ” ಎಂದಿದ್ದಾರೆ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್.
ರಾಕೇಶ್ ಶರ್ಮಾ ಪಾತ್ರಕ್ಕೆ ಶಾರುಖ್ ಖಾನ್ ಅನ್ನು ಸಂಪರ್ಕಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅಂತರಿಕ್ಷದ ಕತೆಯನ್ನು ಹೊಂದಿದ್ದ ಶಾರುಖ್ ನಟನೆಯ ‘ಜೀರೋ’ ಸಿನಿಮಾ ಫ್ಲಾಪ್ ಆದ ಕಾರಣ ರಾಕೇಶ್ ಶರ್ಮಾ ಜೀವನ ಕತೆಯನ್ನು ಶಾರುಖ್ ಒಪ್ಪಲಿಲ್ಲ ಎನ್ನಲಾಗುತ್ತಿದೆ. ಬಳಿಕ ರಾಕೇಶ್ ಶರ್ಮಾ ಪಾತ್ರಕ್ಕೆ ಫರ್ಹಾನ್ ಅಖ್ತರ್ ಅನ್ನು ಒಪ್ಪಿಸಲಾಗಿದೆ ಎಂಬ ಮಾತುಗಳು ಸಹ ಕೇಳಿ ಬಂತು.
ಇದೆಲ್ಲವನ್ನೂ ಅಲ್ಲಗಳೆದಿರುವ ನಿರ್ಮಾಪಕ ಸಿದ್ಧಾರ್ಥ್, ಯಾವ ನಟರನ್ನೂ ಇನ್ನೂ ಸಂಪರ್ಕ ಮಾಡಲಾಗಿಲ್ಲ. ಸಿನಿಮಾದ ನಕ್ಷೆ ಇನ್ನೂ ಪೂರ್ಣವಾಗಿಲ್ಲ. ಅಂತರಿಕ್ಷಯಾನದ ಕತೆಯನ್ನು ಹೊಂದಿರುವ ಕಾರಣ ಸಾಕಷ್ಟು ತಯಾರಿ ಆಗಬೇಕಿದೆ, ಪ್ರೊಡಕ್ಷನ್ ಡಿಸೈನ್ ಆಗಬೇಕಿದೆ ಬಂಡವಾಳ ಇನ್ನಿತರೆ ವಿಷಯಗಳ ಲೆಕ್ಕಾಚಾರದ ಬಳಿಕ ನಟರು ಯಾರೆಂಬುದು ನಿರ್ಣಯವಾಗಲಿದೆ” ಎಂದಿದ್ದಾರೆ ಅವರು.
ರಾಕೇಶ್ ಶರ್ಮಾ 1984ರಲ್ಲಿ ಅಂತರಿಕ್ಷಯಾನ ಮಾಡಿದ್ದರು. ಆ ಮೂಲಕ ಅಂತರಿಕ್ಷ ಯಾನ ಮಾಡಿದ ಮೊತ್ತ ಮೊದಲ ಭಾರತೀಯ ಎನಿಸಿಕೊಂಡರು. ಸುಯೋಜ್ ಟಿ 11 ಮೂಲಕ ಅವರು ಅಂತರಿಕ್ಷ ಯಾನ ಮಾಡಿದ್ದರು. ಶರ್ಮಾ 7 ದಿನ 21 ಗಂಟೆ ಅಂತರಿಕ್ಷದಲ್ಲಿ ಕಳೆದಿದ್ದರು. ಶರ್ಮಾ ಅವರಿಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಕರೆ ಮಾಡಿ ಮಾತನಾಡಿದ್ದರು. ”ಅಂತರಿಕ್ಷದಿಂದ ಭಾರತ ಹೇಗೆ ಕಾಣುತ್ತಿದೆ?” ಎಂದು ಇಂದಿರಾ ಗಾಂಧಿ ಕೇಳಿದಾಗ, ”ಸಾರೆ ಜಹಾನ್ಸೆ ಅಚ್ಛಾ” ಎಂದು ರಾಕೇಶ್ ಶರ್ಮಾ ಉತ್ತರಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: