ಬಳ್ಳಾರಿ, ಫೆಬ್ರವರಿ, 10: ಮನೆಗೆ ಎನ್ಓಸಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ ಬಿದ್ದಿದ್ದಾರೆ. ಬಳ್ಳಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.
ಪ್ರಶಾಂತ್ ರೆಡ್ಡಿ, ಯೋಗೀಶ್, ಮೊಹಮದ್ ಗೌಸ್ ಬಂಧಿತ ಅಧಿಕಾರಿಗಳಾಗಿದ್ದಾರೆ.
ಮನೆ ಕಟ್ಟಲು ಪುರಾತತ್ವ ಇಲಾಖೆಯಿಂದ ಎನ್ಓಸಿ ನೀಡಲು ಹಣ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಅವರು ಸಿಬಿಐಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಖಾಸಗಿ ಹೋಟೆಲ್ನಲ್ಲಿ ಲಂಚದ ಹಣವನ್ನು ಮುಂಗಡವಾಗಿ ಪಡೆಯುವಾಗ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಮೂವರು ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಒಂದೂವರೆ ಲಕ್ಷ ರೂ. ನೀಡುವಂತೆ ಬೇಡಿಕೆ
ರಾಜಶೇಖರ್ ಮುಲಾಲಿ ಎಂಬವವರು ನಗರದ ಕೋಟೆ ಪ್ರದೇಶದಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಪುರಾತತ್ವ ಇಲಾಖೆಯಿಂದ ಎನ್ಓಸಿ ನೀಡಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಒಂದೂವರೆ ಲಕ್ಷ ನೀಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ರಾಜಶೇಖರ್ ಮುಲಾಲಿ ಅವರು ಸಿಬಿಐಗೆ ದೂರು ನೀಡಿದ್ದರು. ಅದರಂತೆಯೇ ಖಾಸಗಿ ಹೋಟೆಲ್ನಲ್ಲಿ ಮುಂಗಡ 50 ಸಾವಿರ ರೂಪಾಯಿ ಹಣ ಪಡೆಯಲು ಬಂದಾಗ ಸಿಬಿಐನ ಪವನ್ ಮತ್ತು ರಾಕೇಶ್ ತಂಡ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ನಂತರ ತನಿಖೆ ವೇಳೆ ಪ್ರಶಾಂತ್ ರೆಡ್ಡಿ ಅವರು ಆಂಧ್ರಪ್ರದೇಶದ ಶಾಸಕರೊಬ್ಬರ ಸಂಬಂಧಿ ಎಂದು ತಿಳಿದುಬಂದಿದೆ.
ಕಂಪ್ಲಿಯಲ್ಲಿ ಲೋಕಾಯುಕ್ತ ದಾಳಿ
ಇತ್ತೀಚೆಗಷ್ಟೇ ಜಮೀನಿನ ಸರ್ವೇ ಮಾಡಿ ನಕಾಶೆಯನ್ನು ತಯಾರಿಸಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ಲಂಚದ ಹಣದ ಸಮೇತ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಕಂಪ್ಲಿ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿತ್ತು. ಬಳ್ಳಾರಿ ಸರ್ವೇ ಕಚೇರಿಯ ಸಿಬ್ಬಂದಿಯಾದ ಕರಿಬಸಪ್ಪ ಮತ್ತು ವೀರೇಶ್ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು ಎಂದು ತಿಳಿದು ಬಳ್ಳಾರಿ ಜಿಲ್ಲೆಯ ವ್ಯಕ್ತಿಯೊಬ್ಬರು ಪಟ್ಟಣದಲ್ಲಿನ ತನ್ನ 1-76 ಹೆಕ್ಟೇರ್ ಹಾಗೂ 1 ಎಕರೆ ಸೇರಿ ಒಟ್ಟು 2-76 ಹೆಕ್ಟೇರ್ ಜಮೀನಿನ ಹದ್ದುಬಸ್ತು ಅಳತೆ ಮತ್ತು ನಕಾಶೆಯನ್ನು ತಯಾರಿಸಿ ಕೊಡುವಂತೆ ಕೋರಿ ಕಂಪ್ಲಿಯ ಸರ್ವೇ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಎರಡು ಅರ್ಜಿಗಳಿಗೆ ಶುಲ್ಕ ಸೇರಿ 4,200 ರೂಪಾಯಿ ಪಾವತಿಸಿದ್ದರು.
5 ಸಾವಿರ ರೂ. ಲಂಚಕ್ಕೆ ಬೇಡಿಕೆ
ಸರ್ವೇ ಕಚೇರಿಯಿಂದ ವ್ಯಕ್ತಿಯ ಜಮೀನುಗಳ ಸರ್ವೇಗೆ ಆಗಮಿಸಿದ್ದ ಅಧಿಕಾರಿಗಳಾದ ಕರಿಬಸಪ್ಪ ಮತ್ತು ವೀರೇಶ್ ಎನ್ನುವವರು, ಜಮೀನಿನ ಸರ್ವೇ ಮಾಡಿ ನಕಾಶೆಯನ್ನು ತಯಾರಿಸಿಕೊಡಲು 5 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ವ್ಯಕ್ತಿ ಮತ್ತು ಅಧಿಕಾರಿಗಳ ನಡುವೆ ಮಾತುಕತೆ ನಡೆದಿದ್ದು, 3 ಸಾವಿರ ಲಂಚ ಕೊಡುವಂತೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಈ ಕುರಿತು ಅರ್ಜಿ ಸಲ್ಲಿಸಿದ ವ್ಯಕ್ತಿ ಲೋಕಾಯುಕ್ತ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕರಿಬಸಪ್ಪ ಮತ್ತು ವೀರೇಶ್ ವಿರುದ್ಧ ದೂರು ನೀಡಿದ್ದರು. ಸರ್ವೇ ಅಧಿಕಾರಿ ಕರಿಬಸಪ್ಪ ಅವರ ವಿನಾಯಕ ನಗರದಲ್ಲಿನ ನಿವಾಸದಲ್ಲಿ 3 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಲಂಚದ ಹಣದ ಸಮೇತ ಸರ್ವೇ ಅಧಿಕಾರಿ ಕರಿಬಸಪ್ಪ ಮತ್ತು ವೀರೇಶ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada