ಶ್ರೀದೇವಿ ಪುತ್ರಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅದರಲ್ಲೂ ಜಾಹ್ನವಿ ಕಪೂರ್ ಮುಂದಿನ ಸಿನಿಮಾ ಯಾವುದು, ಬಾಲಿವುಡ್ನಲ್ಲಿ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಜಾಹ್ನವಿ ಕಪೂರ್, ಸೌತ್ಗೆ ಎಂಟ್ರಿ ಯಾವಾಗ, ಜಾಹ್ನವಿ ಕಪೂರ್ ಸೌತ್ನ ಯಾವ ಹೀರೋ ಜೊತೆ ಮೊದಲ ಸಿನಿಮಾ ಮಾಡುತ್ತಿದ್ದಾರೆ ಎಂಬೆಲ್ಲಾ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಲೇ ಇರುತ್ತೆ.
ಸದ್ಯ ಇದೆಲ್ಲದರ ಹೊರತಾಗಿ ಜಾಹ್ನವಿ ಕಪೂರ್ ಅವರ ಸೌತ್ ಸಿನಿಮಾ ಎಂಟ್ರಿ ಬಗ್ಗೆ ಇದೀಗ ಒಂದು ಸುದ್ದಿ ಹೆಚ್ಚು ಸೌಂಡ್ ಮಾಡುತ್ತಿದೆ. ಈ ಬಾರಿ ಈ ಸುದ್ದಿ ಸುಳ್ಳಾಗದು ಎನ್ನುತ್ತಿವೆ ಮೂಲಗಳು.
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ನಟ ಜೂ.ಎನ್ಟಿಆರ್ ಆರ್ಆರ್ಆರ್ ಸಿನಿಮಾದ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ರಿಲೀಸ್ಗಾಗಿ ಕಾಯುತ್ತಿರುವ ಜೂ. ಎನ್ಟಿಆರ್ ಅವರ ಮುಂದಿನ ಸಿನಿಮಾ ಬಗ್ಗೆ ಮಾತುಗಳು ಆರಂಭವಾಗಿದ್ದು ತಮ್ಮ ಮುಂದಿನ ಚಿತ್ರ ಕ್ಕಾಗಿ ‘ಉಪ್ಪೇನಾ’ ನಿರ್ದೇಶಕ ಬುಜ್ಜಿ ಬಾಬು ಅವರೊಟ್ಟಿಗೆ ಜೂ.ಎನ್ಟಿಆರ್ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುವ ಸುದ್ದಿ ಹರಿದಾಡಿದೆ.
ಈ ಚಿತ್ರದ ಬಗ್ಗೆ ಇನ್ನು ಅಧಿಕೃತ ಮಾಹಿತಿ ಬಂದಿಲ್ಲವಾದರೂ ಜೂ. ಎನ್ಟಿಆರ್ ಅವರು ಬುಚ್ಚಿ ಬಾಬು ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ತೆಲುಗು ಮ್ಯಾಗಝಿನ್ಗಳಲ್ಲಿ ವರದಿ ಪ್ರಸಾರವಾಗಿದೆ. ಈಗ ಈ ಸಿನಿಮಾದ ನಾಯಕಿ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ ಜೂ. ಎನ್ಟಿಆರ್ ಅವರ ಮುಂದಿನ ಸಿನಿಮಾಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.
ಈ ಬಗ್ಗೆ ಬಾಲಿವುಡ್ ಮ್ಯಾಗಝಿನ್ ಒಂದು ವರದಿ ಮಾಡಿದ್ದು, ಒಂದು ವೇಳೆ ಜಾಹ್ನವಿ ಕಪೂರ್ ಜೂ.ಎನ್ಟಿಆರ್ ಸಿನಿಮಾದಲ್ಲಿ ನಟಿಸಿದ್ದೇ ಆದರೇ ಇದು ಅವರ ಸೌತ್ನ ಮೊದಲ ಸಿನಿಮಾ ಆಗಿರಲಿದೆ. ಈಗಾಗಲೇ ಚಿತ್ರತಂಡ ಜಾಹ್ನವಿ ಕಪೂರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ, ಕಥೆ ಮೆಚ್ಚಿಕೊಂಡಿರುವ ಜಾಹ್ನವಿ ಕಪೂರ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿ ಯಾಗಿದೆ. ಈ ಬಗ್ಗೆ ಚಿತ್ರತಂಡ , ಜಾಹ್ನವಿ ಕಪೂರ್ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ವರದಿಗಳ ಪ್ರಕಾರ, ಜೂ.ಎನ್ಟಿಆರ್ ಮತ್ತು ಬುಚ್ಚಿ ಬಾಬು ಅವರ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡಲಿದೆ. ಅವರು ಜಾಹ್ನವಿ ಕಪೂರ್ ರನ್ನು ಚಿತ್ರಕ್ಕೆ ಕರೆತರಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರಂತೆ. ಜಾಹ್ನವಿ ಕಪೂರ್ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಾರೆ ಎಂದು ನಿರ್ದೇಶಕರು ಚಿಂತಿಸಿ ಜಾಹ್ನವಿ ಕಪೂರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ನಿರ್ಮಾಪಕರು ಕೂಡ ಜಾಹ್ನವಿ ಕಪೂರ್ ಅವರನ್ನು ಈ ಚಿತ್ರದಲ್ಲಿ ನಾಯಕಿಯನ್ನಾಗಿ ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜಾಹ್ನವಿ ಕಪೂರ್ ಸಿನಿಮಾದ ಭಾಗವಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಜಾಹ್ನವಿ ಕಪೂರ್ ಅವರ ಸೌತ್ ಎಂಟ್ರಿ ಬಗ್ಗೆ ಈ ಹಿಂದೆ ಕೂಡ ಸಾಕಷ್ಟು ಗಾಸಿಪ್ಗಳು ಹುಟ್ಟಿಕೊಂಡಿದ್ದವು. ಈ ಹಿಂದೆ ಜಾಹ್ನವಿ ಕಪೂರ್ ತ್ರಿವಿಕ್ರಮ್ ಶ್ರೀನಿವಾಸ್ ಅವರ ಚಿತ್ರ ‘ಎನ್ಟಿಆರ್30’ ಮತ್ತು ಪೂರಿ ಜಗನ್ನಾಥ್ ಅವರ ಚಿತ್ರ ‘ಜನ ಗಣ ಮನ’ ಚಿತ್ರದಲ್ಲಿ ಜೂ.ಎನ್ಟಿಆರ್ ಎದುರು ಟಾಲಿವುಡ್ಗೆ ಪಾದಾರ್ಪಣೆ ಮಾಡುತ್ತಾರೆ ಎಂಬ ಬಗ್ಗೆಯೂ ವರದಿಗಳ ಬಂದಿದ್ದವು. ಆದರೆ ಅದೆಲ್ಲವೂ ಗಾಸಿಪ್ ಆಗಿಯೇ ಉಳಿದು ಬಿಟ್ಟಿದೆ.
ಈ ಹಿಂದೆ ಸಂದರ್ಶನ ಒಂದರಲ್ಲಿ ಸೌತ್ ಸಿನಿಮಾಗಳ ಪ್ರವೇಶಕ್ಕಾಗಿ ಆಫರ್ ಗಳು ಬರುತ್ತಿವೆಯೇ ಎಂಬ ಪ್ರಶ್ನೆಗೆ ಜಾಹ್ನವಿ ಕಪೂರ್ ” ಸಾಕಷ್ಟು ಬರುತ್ತಿದೆ. ನಾನು ಒಂದೆರೆಡು ನಿರ್ಮಾಪಕರೊಂದಿಗು ಮಾತುಕತೆ ನಡೆಸುತ್ತಿದ್ದೇನೆ. ಆದಷ್ಟು ಬೇಗ ಮಾಡುತ್ತೇನೆ” ಎಂದಿದ್ದರು. ಹೀಗಾಗಿ ಜಾನ್ವಿ ಕಪೂರ್ ಅವರ ಸೌತ್ ಎಂಟ್ರಿ ಬಗ್ಗೆ ಸಾಕಷ್ಟು ಕುತೂಹಲಗಳು ಮನೆ ಮಾಡಿದ್ದು, ಚಿತ್ರ ನಿರ್ಮಾಪಕರು ಮಾತ್ರವಲ್ಲದೆ ಪ್ರೇಕ್ಷಕರು ಕೂಡ ಅವರನ್ನು ತೆಲುಗು ಅಥವಾ ತಮಿಳು ಚಿತ್ರದಲ್ಲಿ ವೀಕ್ಷಿಸಲು ಇಚ್ಚಿಸುತ್ತಿರೋದು ಸುಳ್ಳಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada