ರಾಜಧಾನಿಯ ವಾಯುವ್ಯ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಯಶವಂತಪುರದ ತುಮಕೂರು ರಸ್ತೆಯ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಯಶವಂತಪುರ ಎಪಿಎಂಸಿ ಮಾರುಕಟ್ಟೆಯನ್ನು ನೆಲಮಂಗಲ ಸಮೀಪದ ದಾಸನಪುರಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲು ಆದೇಶಿಸಿದೆ.ಈ ಆದೇಶದಿಂದಾಗಿ 500 ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ತೊಂದರೆಯಾಗಿದೆ.
ಸರ್ಕಾರ ನೀಡುತ್ತಿರುವ ಹೊಸ ಸ್ಥಳದಲ್ಲಿ ಹೊರಗಿನವರಿಗೆ ಜಾಗವನ್ನು ಹಂಚಿಕೆ ಮಾಡಲಾಗಿದೆ. ಇಲ್ಲಿ ಕಳಪೆ ಮೂಲಸೌಕರ್ಯವಿದೆ ಎಂಬುದನ್ನು ಉಲ್ಲೇಖಿಸಿ ವರ್ತಕರ ಸಂಘವು ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ. ಇನ್ನು, ಸಾರ್ವಜನಿಕ ಸಮಾಲೋಚನೆಯ ಆಧಾರದ ಮೇಲೆ ಮಾರುಕಟ್ಟೆಯನ್ನು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಗಳು ತಿಳಿಸಿವೆ.ಹೊಸ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಇಷ್ಟವಿಲ್ಲದ ಕಾರಣ, ಬ್ಲಾಕ್ಗಳೊಳಗೆ ಸೀಮಿತ ಚಲನವಲನ, ಪಾದಚಾರಿ ಕ್ರಾಸಿಂಗ್ಗಳ ಕೊರತೆ, ರಸ್ತೆ ದಟ್ಟಣೆ ಮತ್ತು ಹೊಸ ಮಾರುಕಟ್ಟೆಯಲ್ಲಿ ರೈತರಿಗೆ ಮೂಲ ಸೌಲಭ್ಯಗಳ ಕೊರತೆಯನ್ನು ಉಲ್ಲೇಖಿಸಿ ವರ್ತಕ ಸಮುದಾಯದಿಂದ 300 ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಇದರ ಹೊರತಾಗಿಯೂ ಕಳೆದ ಶುಕ್ರವಾರ ಮಾರುಕಟ್ಟೆಯನ್ನು ಸ್ಥಳಾಂತರಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ.
“ನಾವು 2023ರ ಜನವರಿಯಲ್ಲಿ ವರ್ತಕರು ಮತ್ತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕರೆದಿದ್ದೇವು. ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಿದ್ದೇವೆ. ಒಂದು ತಿಂಗಳ ಅವಧಿಯಲ್ಲಿ ನಮಗೆ ಸುಮಾರು 300 ಆಕ್ಷೇಪಣೆಗಳು ಬಂದಿವೆ. ಆದರೆ, ರಾಜ್ಯ ಸರ್ಕಾರವು ಯಶವಂತಪುರದ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ನಗರದೊಳಗೆ ಭಾರಿ ವಾಹನಗಳ ಪ್ರವೇಶವನ್ನು ತಡೆಯುವ ಏಕೈಕ ಉದ್ದೇಶದಿಂದ ಎಪಿಎಂಸಿ ಮಾರುಕಟ್ಟೆಯನ್ನು ಶಾಶ್ವತವಾಗಿ ಸ್ಥಳಾಂತರಿಸಲು ನಿರ್ಧರಿಸಿದೆ” ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಅಧಿಸೂಚನೆಯ ಪ್ರತಿಯ ಪ್ರಕಾರ ಆರಂಭದಲ್ಲಿ, ಸರ್ಕಾರವು ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಶುಂಠಿ ವ್ಯಾಪಾರಿಗಳಿಗೆ ಯಶವಂತಪುರ ಮಾರುಕಟ್ಟೆಯಿಂದ ಕಾರ್ಯನಿರ್ವಹಿಸಲು ಅನುಮತಿ ನೀಡಿತ್ತು. ಆದರೆ, ಇತ್ತೀಚಿನ ಅಧಿಸೂಚನೆಯ ಪ್ರಕಾರ “ಎಲ್ಲಾ 89 ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ವ್ಯಾಪಾರಿಗಳನ್ನು 360 ಕೋಟಿ ರೂಪಾಯಿ ವೆಚ್ಚದಲ್ಲಿ 67 ಎಕರೆ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿರುವ ದಾಸನಾಪುರ ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು” ಎಂದಿದೆ.
ಮಾರುಕಟ್ಟೆಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಯೋಗೇಶ್ “ಎಲ್ಲಾ ಆಕ್ಷೇಪಣೆಗಳು ದಾಸನಪುರ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆಯೇ ಹೆಚ್ಚಾಗಿವೆ. ಆದರೆ, ಆಕ್ಷೇಪಣೆಗಳಲ್ಲಿ ಯಾವುದೇ ಅರ್ಹತೆಯಿಲ್ಲ” ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಆಗಮಿಸುವ ಸಾವಿರಾರು ಲಾರಿಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಈ ಹಿಂದೆಯೇ ಮಾರುಕಟ್ಟೆಯನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಬೆಂಗಳೂರು ನಗರದ ಬೆಳವಣಿಗೆಯನ್ನು ಗಮನಿಸಿದ ಸರ್ಕಾರ 2006 ರಲ್ಲಿ ದಾಸನಪುರ ಬಳಿ 64 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ವಿಶಾಲವಾದ ಮಾರುಕಟ್ಟೆಯನ್ನು ನಿರ್ಮಾಣ ಮಾಡಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada