ಹನೂರು : ರಾಜ್ಯದ ಧಾರ್ಮಿಕ ಪವಿತ್ರ ಯಾತ್ರಾಸ್ಥಳವಾದ ಮಲೆ ಮಾದೇಶ್ವರ ಬೆಟ್ಟದ ಮಹದೇಶ್ವರನ ಸನ್ನಿಧಿಯಲ್ಲಿ ಮಂಗಳವಾರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ 8.20ರಿಂದ 9:10 ವರೆಗಿನ ಶುಭ ಲಗ್ನದಲ್ಲಿ ವಿಧಿ ವಿಧಾನಗಳೊಂದಿಗೆ ಸಂಪ್ರದಾಯದಂತೆ ಮಹಾರಥೋತ್ಸವ ಜರುಗಿತು.
ಬೆಳಗಿನ ಜಾವ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಸಾಲೂರು ಬೃಹನ್ ಮಠ ಅಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಬೇಡಗಂಪಣ ಅರ್ಚಕ ವೃಂದದವರು ಪೂಜೆ ನೆರವೇರಿಸಿ ಪ್ರದಕ್ಷಿಣೆ ಹಾಕಿದರು.
ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಯವರ ಸಮ್ಮುಖದಲ್ಲಿ ಬಿಲ್ವಾರ್ಚನೆ ಧೂಪ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ಬೆಳಗಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಉಘೇ ಮಾದಪ್ಪ ಉಘೇ: ಸೂಕ್ತ ಪೊಲೀಸ್ ಬಂದೋ ಬಸ್ತ್ ನೊಂದಿಗೆ ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ, ಸುರಪಾನಿ, ಛತ್ರಿ, ಚಾಮರ ನಂದಿ ದ್ವಜ ಕಂಬ ಹಾಗೂ ಮಂಗಳವಾದ್ಯದೊಂದಿಗೆ ದೇಗುಲದ ಸುತ್ತ ಪ್ರದಕ್ಷಣೆ ಹಾಕಲಾಯಿತು. ಈ ವೇಳೆ ಬೆಲ್ಲದ ಆರತಿ ಬೆಳಗಿದ ಹೆಣ್ಣು ಮಕ್ಕಳು ಅರ್ಚಕರು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸಾರ್ವಜನಿಕರು ಭಕ್ತಿ ಭಾವದಿಂದ ತೇರನ್ನು ಎಳೆದು ಹಣ್ಣುಜಾವನ ಧಾನ್ಯ ಎಸೆದು “ಉಘೇ ಮಾದಪ್ಪ ಉಘೇ” “ಉಘೇ ಮೈಕಾರ” ಎಂಬ ಜಯ ಘೋಷಗಳನ್ನು ಮುಳುಗಿಸಿದರು.
ರಥೋತ್ಸವಕ್ಕೆ 88 ವರ್ಷ : ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1935 ಏಪ್ರಿಲ್ ನಾಲ್ಕರಂದು ಯುಗಾದಿ ಹಬ್ಬದ ಮೊದಲ ದೊಡ್ಡ ಜಾತ್ರೆಗೆ ರಥವನ್ನು ಕೊಡುಗೆ ನೀಡಿದ್ದರು. ಇದೀಗ ರಥಕ್ಕೆ ಬರೋಬರಿ 88 ವರ್ಷವಾಗಿದೆ. ಅಂದಿನ ಕಾಲದ ದೇವಸ್ಥಾನದ ಕಮಿಟಿ ಸದಸ್ಯರಾದ ಸಾಲೂರು ಮಠದ ವೇದಮೂರ್ತಿ ಶಾಂತಲಿಂಗ ಸ್ವಾಮಿಗಳು,ರಾವ್ ಸಾಹೇಬ್, ಕೊಳ್ಳೇಗಾಲದ ಜಿಪಿ ಮಲ್ಲಪ್ಪ ಪುಟ್ಟ ಮಾದ ತಂಬಡಯ್ಯ ಒಮಾದ ತಂಬಡಯ್ಯ ಎಂಬ ಹೆಸರುಗಳು ರಥದ ಹಿಂಬದಿಯಲ್ಲಿ ಬರೆಯಲಾಗಿದೆ. ಮೈಸೂರು ಅರಮನೆಯ ಕಂಟ್ರಾಕ್ಟರ್ ಮೇಸ್ತ್ರಿ ತಿಮ್ಮಯ್ಯಚಾರ್ಯರ ಮಗ ಅಪ್ಪಾಜಾಚಾರ್ಯರಿಂದ ಘತ ತಯಾರಿಸಲ್ಪಟ್ಟಿದೆ ಎಂಬುದು ನಮುದಾಗಿದೆ.
ಹರಸಾಹಸ ಪಟ್ಟ ಪೊಲೀಸರು: ಮಹಾರಥೋತ್ಸವದ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟದ ದೇಗುಲದ ಆವರಣದಲ್ಲಿ ಲಕ್ಷಾಂತರ ಜನರು ಕಿಕ್ಕಿರಿದು ತುಂಬಿದ್ದರು. ತೇರಿನ ಪೂಜೆಯ ವೇಳೆ ಜನಜಂಗುಳಿ ಉಂಟಾಗಿ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಹಾಸ ಪಟ್ಟರು.
ಜಿಲ್ಲಾಧಿಕಾರಿ ಡಿಎಸ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿ ಸಾಹೊ,ಶ್ರೀ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಉಪ ಕಾರ್ಯದರ್ಶಿ ಬಸವರಾಜು, ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹದೇವಸ್ವಾಮಿ, ಆಗಮಿಕ ಕರವೀರ ಸ್ವಾಮಿ, ಬೇಡ ಗಂಪಣ ಸಮುದಾಯದ ಹಿರಿಯ ಮುಖಂಡ ಕೆವಿ ಮಾದೇಶ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada