ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಉಪೇಂದ್ರ ಚಿತ್ರರಂಗಕ್ಕೆ ಪರಿಚಯವಾಗಿ ಇಂದಿಗೆ ಬರೋಬ್ಬರಿ 33 ವರ್ಷಗಳಾಗಿವೆ.
ಉಪೇಂದ್ರ ಮೊದಲ ಬಾರಿಗೆ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ ‘ಅನಂತನ ಅವಾಂತರ’ ಸಿನಿಮಾ ಬಿಡುಗಡೆ ಆಗಿ (1989) ಇಂದಿಗೆ ಹದಿಮೂರು ವರ್ಷಗಳಾಗಿವೆ.
ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ಹಾಡೊಂದರಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು.
‘ಕಮಾನ್ ಕಮಾನ್ ಕಾಮಣ್ಣ’ ಎಂಬ ಹಾಡಿನಲ್ಲಿ ಉಪೇಂದ್ರ ಕಾಮರಾಜನ ಪಾತ್ರದಲ್ಲಿ ನಟಿಸಿದ್ದರು. ತಮಾಷೆಯಾಗಿದ್ದ ಈ ಹಾಡಿನಲ್ಲಿ ಉಪೇಂದ್ರದ ಅಭಿನಯವೂ ಚೇತೋಹಾರಿಯಾಗಿತ್ತು. ಕಾಲೇಜಿನಲ್ಲಿ ಕವನ ಬರೆಯುತ್ತಾ, ಗೆಳೆಯರೊಟ್ಟಿಗೆ ನಾಟವಾಡುತ್ತಾ ಇದ್ದ ಹುಡುಗ ಉಪೇಂದ್ರ ನಿರ್ದೇಶಕನಾಗಿ, ನಟನಾಗಿ, ಸೂಪರ್ ಸ್ಟಾರ್ ಆಗಿ ಬೆಳೆದ ಪರಿ ಸಾಮಾನ್ಯದ್ದಲ್ಲ.
ಕಾಶಿನಾಥ್ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದ ಉಪೇಂದ್ರ ಆ ನಂತರ ಅವರ ಸಿನಿಮಾದಲ್ಲಿಯೇ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ ‘ಅಜಗಜಾಂತರ’ ಹೆಸರಿನ ಸಿನಿಮಾದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸಿದರು. ಉಬ್ಬಲ್ಲು ಬಿಟ್ಟು, ಕಪ್ಪು ಮುಖದ ವರನ ಪಾತ್ರದಲ್ಲಿ ಉಪೇಂದ್ರ ನಟಿಸಿದ್ದರು. 1991ರ ಬಳಿಕ ಎರಡು ವರ್ಷ ತೆರೆಯ ಮೇಲೆ ಕಾಣಿಸಿಕೊಳ್ಳದ ಉಪೇಂದ್ರ ಆ ಬಳಿಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಅವರೇ ನಿರ್ದೇಶಿಸಿದ ‘ಶ್’ ಸಿನಿಮಾದ ದೃಶ್ಯವೊಂದರಲ್ಲಿ. ‘ಶ್’ ಸಿನಿಮಾದಲ್ಲಿನ ಉಪೇಂದ್ರದ ಪಾತ್ರವನ್ನು ಕನ್ನಡ ಸಿನಿಮಾ ಪ್ರೇಮಿಗಳು ಮರೆಯುವಂತಿಲ್ಲ.
ಹಿಟ್ ಆದ ‘ಶ್’ ಸಿನಿಮಾದ ಪಾತ್ರ
‘ಶ್’ ಸಿನಿಮಾದಲ್ಲಿ ತಮ್ಮ ಅತಿಥಿ ಪಾತ್ರ ಬಹಳ ಹಿಟ್ ಆದ ಬಳಿಕ ಮುಂದೆ ತಾವು ನಿರ್ದೇಶಿಸಿದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. ಉಪೇಂದ್ರ, ‘ಆಪರೇಷನ್ ಅಂತ’ ಸಿನಿಮಾದಲ್ಲಿ ಗೋಡೆ ಪಕ್ಕ ನಿಂತು ಮೂತ್ರ ಮಾಡುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದರು. ತೆಲುಗಿನ ‘ಓಂಕಾರಮ್’ ಸಿನಿಮಾದಲ್ಲಿಯೂ ಸಣ್ಣ ಪಾತ್ರ ಮಾಡಿದರು. ‘ಓಂಕಾರಮ್’ ಅನ್ನು ಉಪೇಂದ್ರ ಅವರೇ ನಿರ್ದೇಶಿಸಿದ್ದರು.
‘ಎ’ ಸಿನಿಮಾದ ಮೂಲಕ ನಾಯಕ
ಉಪೇಂದ್ರ ಹೀರೋ ಆಗಿ ಎಂಟ್ರಿ ಕೊಟ್ಟಿದ್ದ ‘ಎ’ ಸಿನಿಮಾದ ಮೂಲಕ. ಆ ಸಿನಿಮಾದಲ್ಲಿ ನಟಿಸಲು ಆಗಿನ ನಾಯಕ ನಟರು ನಿರಾಕರಿಸಿದ ಕಾರಣ ಕೊನೆಗೆ ತಾವೇ ನಟಿಸಲು ಮುಂದಾದರಂತೆ ನಟ ಉಪೇಂದ್ರ. ‘ಎ’ ಸಿನಿಮಾ ಬಿಡುಗಡೆ ಆದ ಬಳಿಕ ಉಪೇಂದ್ರ ಎಂಬ ಹೊಸ ಸ್ಟಾರ್ ನಟರ ಉದಯವೇ ಆಗಿಬಿಟ್ಟತು. ಅಲ್ಲಿ ವರೆಗೂ ಉಪೇಂದ್ರ ಅಷ್ಟೇ ಆಗಿದ್ದವರು ಆ ಸಿನಿಮಾದ ಬಳಿಕ ‘ರಿಯಲ್ ಸ್ಟಾರ್’ ಉಪೇಂದ್ರ ಆದರು. ‘ಎ’ ಸಿನಿಮಾದ ಜನಪ್ರಿಯತೆಯಿಂದಾಗಿ ತೆಲುಗಿನ ‘ಕನ್ಯಾದಾನಮ್’ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ತೆಲುಗಿನಲ್ಲಿಯೂ ಗುರುತು ಸಂಪಾದನೆ ಮಾಡಿದರು ಉಪೇಂದ್ರ.
‘ಉಪೇಂದ್ರ’ ಬಳಿಕ ಸಾಕಷ್ಟು ಅವಕಾಶ
ಬಳಿಕ 1999 ರಲ್ಲಿ ಬಿಡುಗಡೆ ಆದ ಅವರದ್ದೇ ನಿರ್ದೇಶನದ ‘ಉಪೇಂದ್ರ’ ಸಿನಿಮಾ, ಉಪೇಂದ್ರ ಅವರದ್ದು ಅದೃಷ್ಟದ ಗೆಲುವಲ್ಲ ಅವರೊಬ್ಬ ಪ್ರತಿಭಾವಂತ ನಟ ಎಂಬುದನ್ನು ಖಾತ್ರಿಗೊಳಿಸಿತು. ಆ ಬಳಿಕ ಉಪೇಂದ್ರ ಅವರಿಗಾಗಿಯೇ ಇತರೆ ನಿರ್ದೇಶಕರು ಕತೆಗಳನ್ನು ಬರೆಯಲು ಆರಂಭಿಸಿದರು. ‘ಉಪೇಂದ್ರ’ ಬಳಿಕ ಮೊದಲ ಬಾರಿಗೆ ಬೇರೆ ನಿರ್ದೇಶನದ ಸಿನಿಮಾದಲ್ಲಿ ನಾಯಕ ನಟನ ಪಾತ್ರ ಮಾಡಲು ಆರಂಭಿಸಿದರು ಉಪೇಂದ್ರ.
‘ಉಪೇಂದ್ರ’ ಸಿನಿಮಾದ ಬಳಿಕ ‘ಪ್ರೀತ್ಸೆ’, ತೆಲುಗಿನ ‘ಒಕೆ ಮಾಟ’, ‘ರಾ’, ಕನ್ನಡದ ಬಹುಕೋಟಿ ಬಜೆಟ್ ಸಿನಿಮಾ ‘ಎಚ್2ಓ’, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಸೂಪರ್ ಸ್ಟಾರ್’, ‘ನಾಗರಹಾವು’, ‘ನಾನು ನಾನೆ’, ‘ಹಾಲಿವುಡ್’ ಸಿನಿಮಾಗಳಲ್ಲಿ ನಟಿಸಿದರು. ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಉಪೇಂದ್ರರ ಸಿನಿಮಾಕ್ಕೆ ಫ್ಯಾಮಿಲಿ ಆಡಿಯನ್ಸ್ ಬರುವುದಿಲ್ಲ ಎಂಬ ತಕರಾರು ಗಾಂಧಿ ನಗರದಲ್ಲಿತ್ತು. ಅದನ್ನು ನಿವಾರಿಸಿದ್ದು 2003 ರಲ್ಲಿ ಬಿಡುಗಡೆ ಆದ ‘ಕುಟುಂಬ’ ಸಿನಿಮಾ. ಈ ಸಿನಿಮಾ ದೊಡ್ಡ ಹಿಟ್ ಆಗುವ ಜೊತೆಗೆ ಉಪೇಂದ್ರರ ಇಮೇಜನ್ನು ಸಂಪೂರ್ಣವಾಗಿ ಬದಲಾಯಿಸಿತು.
‘ಕುಟುಂಬ’ ಮೂಲಕ ಇಮೇಜ್ ಬದಲಾವಣೆ
ಅದೇ ವರ್ಷ ಬಿಡುಗಡೆ ಆದ ‘ರಕ್ತ ಕಣ್ಣೀರು’ ಸಿನಿಮಾ ಸಹ ಸೂಪರ್-ಡೂಪರ್ ಹಿಟ್ ಆಯಿತು. ‘ಕುಟುಂಬ’ ಸಿನಿಮಾದ ಬಳಿಕ ಉಪೇಂದ್ರರ ಕತೆಯ ಆಯ್ಕೆಯ ವಿಧಾನವೂ ಬದಲಾಗಿ, ಕೌಟುಂಬಿಕ, ಪ್ರೇಮಕತೆಯುಳ್ಳ ಸಿನಿಮಾಗಳ ಕಡೆಗೆ ವಾಲಿದರು. ಅದರ ಫಲಿತವಾಗಿ ‘ಗೋಕರ್ಣ’, ‘ಗೌರಮ್ಮ’, ‘ಆಟೋ ಶಂಕರ್’, ತಂದೆಗೆ ತಕ್ಕ ಮಗ’, ‘ಉಪ್ಪಿ ದಾದ ಎಂಬಿಬಿಎಸ್’ ಅಂಥಹಾ ಸಿನಿಮಾಗಳು ಬರಲು ಆರಂಭಿಸಿದವು.
ಹಲವು ಸಿನಿಮಾಗಳಲ್ಲಿ ಬ್ಯುಸಿ
ನಟನೆಯ ನಿರ್ದೇಶನವನ್ನೂ ಕೈ ಬಿಡದ ಉಪೇಂದ್ರ, 2009ರಲ್ಲಿ ಸೂಪರ್ ಸಿನಿಮಾವನ್ನು, 2015 ರಲ್ಲಿ ‘ಉಪ್ಪಿ 2’ ಸಿನಿಮಾ ನಿರ್ದೇಶನ ಮಾಡಿದರು. ಜೊತೆಗೆ ಈಗ ಹೊಸದೊಂದು ಸಿನಿಮಾ ನಿರ್ದೇಶನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ನಟನಾಗಿ ಬಹಳ ಬ್ಯುಸಿಯಾಗಿರುವ ಉಪೇಂದ್ರ ಪ್ರಸ್ತುತ ಆರು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada