2021ರಲ್ಲಿ ಅತಿ ದೊಡ್ಡ ಮಟ್ಟದ ಬದಲಾವಣೆಗಳಿಗೆ ಸಾಕ್ಷಿಯಾದ ಕ್ರಿಕೆಟ್ ತಂಡವೆಂದರೆ ಅದು ಟೀಮ್ ಇಂಡಿಯಾ ಎನ್ನಬಹುದು. ಹೌದು, ಈ ವರ್ಷ ಆರಂಭದಲ್ಲಿದ್ದ ಟೀಮ್ ಇಂಡಿಯಾಗೂ ಅಂತ್ಯದಲ್ಲಿರುವ ಟೀಮ್ ಇಂಡಿಯಾಗೂ ಅಜಗಜಾಂತರ ವ್ಯತ್ಯಾಸವಿದೆ. ಆರಂಭದಲ್ಲಿ ಎಲ್ಲ ಕ್ರಿಕೆಟ್ ಮಾದರಿಗಳಿಗೂ ವಿರಾಟ್ ಕೊಹ್ಲಿ ನಾಯಕನಾಗಿದ್ದರೆ, ರವಿಶಾಸ್ತ್ರಿ ಭಾರತ ತಂಡದ ಹೆಡ್ ಕೋಚ್ ಆಗಿದ್ದರು.
ಆದರೆ ವರ್ಷದ ಅಂತ್ಯಕ್ಕೆ ಎಲ್ಲವೂ ಬದಲಾಗಿದೆ. ವಿರಾಟ್ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರ ಉಳಿದುಕೊಂಡಿದ್ದರೆ, ರವಿಶಾಸ್ತ್ರಿ ಭಾರತದ ಹೆಡ್ ಕೋಚ್ ಆಗಿ ತಮ್ಮ ಅವಧಿ ಮುಕ್ತಾಯವಾದ ನಂತರ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹೌದು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ರವಿಶಾಸ್ತ್ರಿ ಭಾರತ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದು ನೂತನ ಹೆಡ್ ಕೋಚ್ ಆಗಿ ಭಾರತದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಧಿಕಾರ ಸ್ವೀಕರಿಸಿದ್ದಾರೆ.
ಹೀಗೆ ಭಾರತದ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದ ರವಿಶಾಸ್ತ್ರಿ ನಂತರದ ಕೆಲವು ದಿನಗಳ ಕಾಲ ಹೊರಗೆಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಕೋಚ್ ಆಗಿ ಅಂತಿಮ ಪಂದ್ಯವನ್ನು ಆಡಿದ ನಂತರ ರವಿಶಾಸ್ತ್ರಿ ಮಾಧ್ಯಮದವರ ಮುಂದೆ ಬಂದು ಎಲ್ಲಿಯೂ ಸಹ ಮನಬಿಚ್ಚಿ ಮಾತನಾಡಲಿಲ್ಲ. ಆದರೆ ಇದೀಗ ಮಾಧ್ಯಮದ ಮುಂದೆ ಹಾಜರಾಗುತ್ತಿರುವ ರವಿಶಾಸ್ತ್ರಿ ಕೆಲವೊಂದಿಷ್ಟು ಖಾಸಗಿ ವಾಹಿನಿಗಳ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಹೀಗೆ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ರವಿಶಾಸ್ತ್ರಿ ತಾವು ಕೋಚ್ ಆಗಿದ್ದಾಗ ನಡೆದ ಕೆಲ ಪ್ರಮುಖ ಘಟನೆಗಳ ಕುರಿತು ಮಾತನಾಡಿದ್ದಾರೆ.
ಹಾಗೂ ತಾವು ಕೋಚ್ ಆಗಿ ಆಯ್ಕೆಯಾಗುವ ಮುನ್ನ ಟೀಮ್ ಡೈರೆಕ್ಟರ್ ಆಗಿ ರವಿಶಾಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿಯೂ ಕೂಡ ಜರುಗಿದ ಕೆಲ ಪ್ರಮುಖ ಘಟನೆಗಳ ಕುರಿತು ರವಿ ಶಾಸ್ತ್ರಿ ಸಂದರ್ಶನದಲ್ಲಿ ಹಂಚಿಕೊಂಡಿದ್ದು, ಭಾರತದ ಮಾಜಿ ಕ್ರಿಕೆಟಿಗ ಎಂ ಎಸ್ ಧೋನಿ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿದಾಗ ಟೀಮ್ ಇಂಡಿಯಾದಲ್ಲಿ ಯಾವ ರೀತಿಯ ವಾತಾವರಣವಿತ್ತು ಮತ್ತು ಎಂಎಸ್ ಧೋನಿ ಯಾವ ರೀತಿಯಲ್ಲಿ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಲು ತೀರ್ಮಾನ ತೆಗೆದುಕೊಂಡಿದ್ದೇನೆ ಎಂಬ ವಿಚಾರವನ್ನು ತಿಳಿಸಿದರು ಎಂಬುದನ್ನು ರವಿಶಾಸ್ತ್ರಿ ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ ಮುಗಿದ ನಂತರ ಆಟಗಾರರ ಜತೆ ಮಾತನಾಡಬೇಕು ಎಂದಿದ್ದ ಧೋನಿಎಂ ಎಸ್ ಧೋನಿ ಡಿಸೆಂಬರ್ 26, 2014ರಲ್ಲಿ ನಡೆದಿದ್ದ ಮೆಲ್ಬೋರ್ನ್ ಟೆಸ್ಟ್ ಮುಕ್ತಾಯದ ನಂತರ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿ ಇಡೀ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದ್ದರು. ಹೀಗೆ ಈ ದೊಡ್ಡ ಘಟನೆ ನಡೆಯುವ ಮುನ್ನ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಘಟನೆಯನ್ನು ರವಿಶಾಸ್ತ್ರಿ ಬಿಚ್ಚಿಟ್ಟಿದ್ದಾರೆ. ಆ ಸಂದರ್ಭದಲ್ಲಿ ಟೀಮ್ ಇಂಡಿಯಾ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರವಿಶಾಸ್ತ್ರಿ ಬಳಿ ಬಂದ ಎಂ ಎಸ್ ಧೋನಿ ತಾನು ತಂಡದ ಆಟಗಾರರ ಜೊತೆ ಮಾತನಾಡಬೇಕು ಎಂದು ರವಿಶಾಸ್ತ್ರಿಗೆ ತಿಳಿಸಿದ್ದರಂತೆ. ಆ ಸಂದರ್ಭದಲ್ಲಿ ಧೋನಿ ಪಂದ್ಯದ ಕುರಿತು ಸಾಮಾನ್ಯವಾಗಿ ಮಾತನಾಡುವುದಕ್ಕೆ ಕರೆದಿರಬಹುದು ಎಂದು ಊಹಿಸಿದ್ದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಸಭೆ ಕರೆದು ಇದ್ದಕ್ಕಿದ್ದಂತೆ ಟೆಸ್ಟ್ ಕ್ರಿಕೆಟ್ ನಿವೃತ್ತಿ ವಿಷಯ ತಿಳಿಸಿದ್ದ ಎಂಎಸ್ ಧೋನಿ
ಹೀಗೆ ರವಿಶಾಸ್ತ್ರಿ ಬಳಿ ಆಟಗಾರರ ಜತೆ ಚರ್ಚಿಸಬೇಕು ಎಂದಿದ್ದ ಎಂಎಸ್ ಧೋನಿ ಏಕಾಏಕಿ ಮಾತು ಶುರು ಮಾಡುತ್ತಲೇ ತಾನು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿಕೆ ನೀಡಿದ್ದರಂತೆ. ಹೀಗೆ ಎಂಎಸ್ ಧೋನಿ ದಿಢೀರ್ ಹೇಳಿಕೆಯನ್ನು ನೀಡಿದ್ದನ್ನು ಕಂಡ ಆಟಗಾರರ ಮುಖದಲ್ಲಿ ದೊಡ್ಡಮಟ್ಟದ ಆಶ್ಚರ್ಯ ಮತ್ತು ಬೇಸರ ಮೂಡಿತ್ತು ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.
ಕೊಹ್ಲಿ ನಾಯಕತ್ವ ಸ್ವೀಕರಿಸಲು ತಯಾರಿದ್ದ ವಿಷಯ ಎಂಎಸ್ ಧೋನಿಗೆ ಚೆನ್ನಾಗಿ ತಿಳಿದಿತ್ತು
ಇನ್ನು ಎಂಎಸ್ ಧೋನಿ ಏಕಾಏಕಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರ ಹಿಂದೆ ಆಲೋಚನೆಗಳು ಕೂಡ ಇದ್ದವು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ತಾನು ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ ನಂತರ ಟೀಮ್ ಇಂಡಿಯಾವನ್ನು ಮುನ್ನಡೆಸಲು ಸರಿಯಾದ ಆಟಗಾರ ಇರುವ ವಿಷಯವನ್ನು ಎಂಎಸ್ ಧೋನಿ ಚೆನ್ನಾಗಿ ಅರಿತ ನಂತರವಷ್ಟೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ರವಿಶಾಸ್ತ್ರಿ ಮಾತಿನ ಪ್ರಕಾರ ವಿರಾಟ್ ಕೊಹ್ಲಿ ನಾಯಕತ್ವವನ್ನು ನಿರ್ವಹಿಸುವಷ್ಟು ಜವಾಬ್ದಾರಿ ಹೊಂದಿದ್ದಾರೆ ಎಂಬ ವಿಷಯವನ್ನು ಚೆನ್ನಾಗಿ ಅರಿತ ನಂತರವಷ್ಟೇ ಎಂ ಎಸ್ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದರು. 3 ಆವೃತ್ತಿಗಳಲ್ಲಿಯೂ ಭಾರತ ತಂಡವನ್ನು ಮುನ್ನಡೆಸಿ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದ ಎಂಎಸ್ ಧೋನಿ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವ ಆಟಗಾರನಿಗೋಸ್ಕರ ಕಾಯುತ್ತಿದ್ದರು ಎಂದು ರವಿ ಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: