ಬೆಂಗಳೂರು: ಯುವ ಸಮುದಾಯದ ಅಭ್ಯುದಯಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಿಂದಲೇ ಯಶಸ್ವಿಗೊಳಿಸಲು ಸರ್ಕಾರ ಮುಂದಾಗಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಯರ್åಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಮೂಲಕ ಅನುಷ್ಠಾನ ಮಾಡಲು ಯೋಜನೆ ರೂಪಿಸಿದೆ.ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿಯನ್ನು 2019ರಲ್ಲಿ ರಚಿಸಲಾಗಿದೆ. ಆದರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿ, ಗ್ರಾಪಂ ಕೆಡಿಪಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಯುವ ಸಬಲೀಕರಣ ಇಲಾಖೆ ಮೂಲಕ ಸ್ಥಳೀಯ ಯುವಕ, ಯುವತಿ, ಸಂಘ, ಸಂಸ್ಥೆಗಳ, ಅಧ್ಯಕ್ಷರು, ಕಾರ್ಯದರ್ಶಿಗಳನ್ನ ಆಹ್ವಾನಿತ ಸದಸ್ಯರನ್ನಾಗಿ ನಿಯೋಜಿಸಲು ಆದೇಶ ಹೊರಡಿಸಲಾಗಿದೆ. ಎಲ್ಲ ಹಳ್ಳಿಗಳಲ್ಲಿ, ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಗ್ರಾಮೀಣ ಕ್ರೀಡೋತ್ಸವವನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ‘ನಮ್ಮೂರ ಶಾಲೆಗೆ ನಮ್ಮ ಯುವಜನರು’ ಕಾರ್ಯಕ್ರಮವನ್ನು ಶಾಲೆಗಾಗಿ ಕೊಡುಗೆ ನೀಡುವ ಯುವಸಂಘಗಳನ್ನು ತಾಲೂಕಿಗೆ ಒಂದರಂತೆ ಗುರುತಿಸಿ ಪುರಸ್ಕಾರ ನೀಡಲಾಗುತ್ತಿದೆ. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಯನ್ನು ಎನ್ಎಸ್ಎಸ್ ಸ್ವಯಂ ಸೇವಕರ ಮೂಲಕ ಗ್ರಾಮೀಣಾ ಭಿವೃದ್ಧಿ ಯೋಜನೆಗಳಿಗೆ ಸಹಾಯ ನೀಡಲಾಗುತ್ತದೆ.ಸಿಬ್ಬಂದಿ ಕೊರತೆಯಿಂದ ಪಂಚಾಯತಿಗಳ ಮಟ್ಟದಲ್ಲಿ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆಗುತ್ತಿದ್ದ ತೊಂದರೆ ತಪ್ಪಿಸಲು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಪಂಚಾಯಿತಿಗಳಿಗೆ ಆಹ್ವಾನಿತರಾಗಿ ಕಳುಹಿಸಲು ನಿರ್ಧರಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada