ಬೇಡವೆಂದರೂ ದಿನಗಳು ವರ್ಷಗಳು ಉರುಳುತ್ತವೆ. ವರ್ಷದ ಕೊನೆ ಬಂದು ಹೊಸ ವರ್ಷವೂ ಬರುತ್ತೆ. ಏನೋ ಹೊಸ ವರ್ಷ ಬಂದಿತು ಎಂಬ ಉತ್ಸಾಹವೂ ಇರುತ್ತೆ. ಹೀಗೆ ಒಂದು ವರುಷ ಮುಗಿಯಿತು ಮತ್ತೊಂದು ವರ್ಷ ಬಂದಿತು ಎಂದು ಸಂಭ್ರಮಿಸುವ ಹೊತ್ತಿನಲ್ಲಿ ಕೆಲವು ವರ್ಷ ಹಿಂದೆ, ನಮಗೆಲ್ಲ ಪ್ರಿಯರಾಗಿದ್ದ ನಟ ವಿಷ್ಣುವರ್ಧನ್ ಮತ್ತು ಮಹಾನ್ ಸಂಗೀತಗಾರ ಸಿ ಅಶ್ವಥ್ ಹೋಗಿಬಿಟ್ಟದ್ದು, ಡಿಸೆಂಬರ್ ತಿಂಗಳ ಮಂಜು ಕವಿದ ವಾತಾವರಣದ ಮಬ್ಬು ನಮ್ಮ ಹೃದಯಾಂತರಾರಾಳಕ್ಕೂ ಹರಡಿದ ಅನುಭಾವ ಮೂಡಿಸುತ್ತದೆ. ಇತ್ತೀಚೆಗೆ ಅಂದೆ ಆಗಲೇ 13 ವರ್ಷ ಕಳೆದು ಹೋಯಿತು. ಆತ್ಮೀಯ ಭಾವಗಳಲ್ಲಿ ಕಾಲಚಕ್ರ ಉರುಳಿದ್ದೇ ಅರಿವಾಗುವುದಿಲ್ಲ.
ಡಿಸೆಂಬರ್ 30, 2009, ಕನ್ನಡಿಗರು ಸುಂದರ, ಸಹೃದಯಿ, ಮೇರು ಅಭಿನೇತರಾದ ವಿಷ್ಣುವರ್ಧನರನ್ನು ಕಳೆದುಕೊಂಡ ದಿನ.
ನಾವು ಬೆಳೆಯುವ ದಿನಗಳಲ್ಲಿ ‘ನಾಗರಹಾವು’ ಚಿತ್ರ ಎಲ್ಲರ ಬಾಯಲ್ಲೂ ತೇಲುವ ಒಂದು ಅಲೆಯಾಗಿ ಮಾರ್ದನಿಸತೊಡಗಿತ್ತು. ವಂಶವೃಕ್ಷದಲ್ಲಿ ಸಣ್ಣ ಪಾತ್ರದಲ್ಲಿ ಮೂಡಿದ ನಂತರದಲ್ಲಿ, ನಾಯಕನಟನಾದ ಪ್ರಥಮ ಚಿತ್ರದಲ್ಲೇ ವಿಷ್ಣುವರ್ಧನರು ಕನ್ನಡದ ಚಿತ್ರಾಭಿಮಾನಿಗಳ ಹೃದಯದಲ್ಲಿ ಇನ್ನಿಲ್ಲದಂತೆ ಕುಳಿತರು. ಆ ನಂತರದಲ್ಲಿ ಸುಮಾರು ನಾಲ್ಕು ದಶಕಗಳ ಕಾಲದಲ್ಲಿ ಭೂತಯ್ಯನ ಮಗ ಅಯ್ಯು, ಜಿಮ್ಮಿ ಗಲ್ಲು, ದೇವರ ಗುಡಿ, ಗಲಾಟೆ ಸಂಸಾರ, ಭಾಗ್ಯಜ್ಯೋತಿ, ಕಳ್ಳ ಕುಳ್ಳ, ಸಿಂಗಾಪುರದಲ್ಲಿ ರಾಜಾ ಕುಳ್ಳ, ಸಹೋದರರ ಸವಾಲ್, ಸೊಸೆ ತಂದ ಸೌಭಾಗ್ಯ, ಹೊಂಬಿಸಿಲು, ಸಾಹಸ ಸಿಂಹ, ಬಂಧನ, ಬಂಗಾರದ ಜಿಂಕೆ, ಗುರು ಶಿಷ್ಯರು, ಇಂದಿನ ರಾಮಾಯಣ, ಮಕ್ಕಳ ಸೈನ್ಯ, ಅವಳ ಹೆಜ್ಜೆ, ನೀ ಬರೆದ ಕಾದಂಬರಿ, ಕರ್ಣ, ಸುಪ್ರಭಾತ, ಲಾಲಿ, ಹಾಲುಂಡ ತವರು, ಹಬ್ಬ, ಸೂರ್ಯವಂಶ, ಯಜಮಾನ, ಸಾಮ್ರಾಟ್, ಆಪ್ತ ಮಿತ್ರ, ಆಪ್ತರಕ್ಷಕ ಹೀಗೆ ವಿಭಿನ್ನ ಪಾತ್ರಗಳಲ್ಲಿ ವಿಜ್ರಂಭಿಸಿದ ಅವರ ಚಿತ್ರಗಳ ಸಂಖ್ಯೆ ಕನ್ನಡದಲ್ಲೇ ಇನ್ನೂರು. ಅವರು ಹಿಂದಿ, ತಮಿಳು, ತೆಲುಗು, ಮಲಯಾಳಂನ ಹಲವು ಚಿತ್ರಗಳಲ್ಲೂ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ದೂರದರ್ಶನದ ಕಥಾನಕದಲ್ಲೂ ಅಭಿನಯಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: