ಶ್ರೀನಗರ, ಜು.9- ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಪವಿತ್ರ ಗುಹೆಯ ಬಳಿ ಸಿಲುಕಿಕೊಂಡಿದ್ದ 15,000 ಯಾತ್ರಾರ್ಥಿಗಳನ್ನು ಕೆಳ ನೆಲೆ ಪಂಜತರ್ನಿಯಕ್ಕೆ ಸ್ಥಳಾಂತರಿಸಲಾಗಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ.
ಸುಮಾರು 40 ಮಂದಿ ನಾಪತ್ತೆಯಾಗಿದ್ದು ಅವರ ಪತ್ತೆ ಕಾರ್ಯ ಚುರುಕು ಗೊಳಿಸಲಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.
ಈವರೆಗೆ ಪತ್ತೆಯಾಗಿರುವ 16 ಮೃತದೇಹಗಳನ್ನು ಬಾಲ್ಟಾಲ್ಗೆ ಸ್ಥಳಾಂತರಿಸಲಾಗಿದೆ ಎಂದು ದೆಹಲಿಯಲ್ಲಿ ಗಡಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಪೊಲೀಸರು (ಐಟಿಬಿಪಿ) ಪವಿತ್ರ ಗುಹೆಯ ಕೆಳಗಿನ ಭಾಗದಿಂದ ಪಂಜತರ್ನಿಯವರೆಗೆ ಮಾರ್ಗವನ್ನು ತರೆದಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜೂನ್ 30ರಿಂದ ಆರಂಭವಾಗಿದ್ದ ಯಾತ್ರೆಯನ್ನು ಪ್ರವಾಹ ಪರಿಸ್ಥಿತಿಯಿಂದಾಗಿ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಡಳಿತ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಪವಿತ್ರ ಗುಹಾ ದೇಗುಲದ ಪ್ರದೇಶದ ಬಳಿ ಸಿಲುಕಿಕೊಂಡಿದ್ದ ಯಾತ್ರಾರ್ಥಿಗಳನ್ನು ರಾತ್ರಿ 3.38ರವರೆಗೂ ಪಂಜತರ್ನಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ಯಾತ್ರಿಕರು ಯಾತ್ರೆಯ ಹಾದಿಯಲ್ಲಿ ಉಳಿದಿಲ್ಲ. ಈವರೆಗೆ ಸುಮಾರು 15,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವಕ್ತಾರರು ತಿಳಿಸಿದ್ದಾರೆ.
ಪ್ರವಾಹದಲ್ಲಿ ತೀವ್ರವಾಗಿ ಗಾಯಗೊಂಡ ಒಂಬತ್ತು ರೋಗಿಗಳಿಗೆ ಐಟಿಬಿಪಿ ಪಡೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಅವರನ್ನು ಕಡಿಮೆ ಎತ್ತರದ ನೀಲ್ಗ್ರಾತ್ ಬೇಸ್ ಕ್ಯಾಂಪ್ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಗುಹಾ ದೇಗುಲದಿಂದ ಬರುವ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ನೀಲ್ಗ್ರಾಥ್ ಹೆಲಿಪ್ಯಾಡ್ನಲ್ಲಿ ಬಿಎಸ್ಎಫ್ ಉಪ ತಂಡವನ್ನೂ ನಿಯೋಜಿಸಲಾಗಿದೆ. ಶುಕ್ರವಾರ ರಾತ್ರಿ ಸುಮಾರು 150 ಯಾತ್ರಾರ್ಥಿಗಳು ಪಂಜತರ್ನಿಯಲ್ಲಿ ಸ್ಥಾಪಿಸಲಾದ ಬಿಎಸ್ಎಫ್ ಶಿಬಿರದಲ್ಲಿ ತಂಗಿದ್ದರು ಮತ್ತು ಶನಿವಾರ ಬೆಳಿಗ್ಗೆ 15 ರೋಗಿಗಳನ್ನು ಬಾಲ್ಟಾಲ್ಗೆ ವಿಮಾನದ ಮೂಲಕ ಕಳುಹಿಸಲಾಗಿದೆ. ಸೇನೆಯ ಸ್ವತ್ತುಗಳ ಹೊರತಾಗಿ ಬಿಎಸ್ಎಫ್ನ ಏರ್ ವಿಂಗ್ನ ಎಂಐ-17 ಚಾಪರ್ ಅನ್ನು ಸ್ಥಳಾಂತರ ಕಾರ್ಯಕ್ಕೆ ಬಳಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann