ಮೈಸೂರು, ಜೂನ್ 28 : ಆಷಾಢದ ಶುಕ್ರವಾರ ಚಾಮುಂಡಿಬೆಟ್ಟದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವುದು ಪರಮ ಪುಣ್ಯವೆಂದು ಮತ್ತು ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಆದ್ದರಿಂದಲೇ ಪ್ರತಿ ವರ್ಷವೂ ಆಷಾಢದಲ್ಲಿ ಅದರಲ್ಲೂ ಶುಕ್ರವಾರ ತಾಯಿಯ ದರ್ಶನ ಪಡೆಯುಲು ಹಾತೊರೆಯುತ್ತಾರೆ.
ಆದರೆ ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ತಾಯಿಯ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಈ ಬಾರಿ ಒಂದಷ್ಟು ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಅವಕಾಶ ಮಾಡಿಕೊಡುತ್ತಿರುವುದು ಭಕ್ತರಲ್ಲಿ ಖುಷಿ ತಂದಿದೆ.
ಈ ಬಾರಿ ಜಿಲ್ಲಾಡಳಿತ ಸ್ವಚ್ಛತೆ ಮತ್ತು ಸುರಕ್ಷತೆಯ ಪಾಲನೆಯೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆಯಲು ಅವಕಾಶ ನೀಡಿದ್ದು, ಆದರೆ ಎರಡು ಬಾರಿ ಲಸಿಕೆ ಅಥವಾ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಈ ಬಾರಿ ಜು.1, ಜು.8, ಜು. 15ಜು. 22ರಂದು ರಂದು ಆಷಾಢ ಶುಕ್ರವಾರ ಬರಲಿದ್ದು , ಜು.20ರಂದು ಚಾಮುಂಡೇಶ್ವರಿ ವರ್ಧಂತ್ಯುತ್ಸವ ನಡೆಯಲಿದೆ.
ಒಂದು ಲಕ್ಷಕ್ಕೂ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, 2019ರ ಅಷಾಢ ಶುಕ್ರವಾರಗಳ ನಿಯಮಗಳಂತೆಯೇ ಆಷಾಢ ಶುಕ್ರವಾರಕ್ಕೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇನ್ನು ಈ ಹಿಂದೆ ಆಷಾಢ ಶುಕ್ರವಾರಗಳಲ್ಲಿ ಇದ್ದಂತೆಯೇ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರನ್ನು ಕೆಎಸ್ಆರ್ಟಿಸಿ ಬಸ್ ಮೂಲಕ ಉಚಿತವಾಗಿ ಕರೆದೊಯ್ಯಲಾಗುವುದು.
ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ
ಹಿಂದೆ ಲಲಿತ ಮಹಲ್ ಹೆಲಿಪ್ಯಾಡ್ ಆವರಣದಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತಾದರೂ ಈ ಬಾರಿ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಸೇರಿದ 18 ಎಕರೆ ಜಾಗದಲ್ಲಿ ವಾಹನ ನಿಲುಗಡೆ ಮತ್ತು ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ಬಸ್ ನಲ್ಲಿಯೇ ತೆರಳುವುದು ಅಗತ್ಯವಾಗಿದೆ. ಚಾಮುಂಡಿಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಅವಕಾಶವಿರುವುದಿಲ್ಲ. ಚಾಮುಂಡಿಬೆಟ್ಟಕ್ಕೆ ತೆರಳಲು 50 ಬಸ್ ನೀಡುವಂತೆ ಕೆಎಸ್ಆರ್ಟಿಸಿ ಡಿಸಿಗೆ ಸೂಚಿಸಲಾಗಿದೆ. ಭಕ್ತರಿಗೆ ಉಚಿತ ಪ್ರಯಾಣ ಇರುತ್ತದೆ. ಈ ಹಣವನ್ನು ದೇವಸ್ಥಾನದ ಆಡಳಿತ ಮಂಡಳಿ ಭರಿಸಲು ಸೂಚಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada