ಬೆಳಗಾವಿ (ಸುವರ್ಣ ವಿಧಾನಸೌಧ): ಮತಾಂತರ ನಿಷೇಧ ಕಾಯ್ದೆ ವಿರುದ್ಧ ಸಮರ ಸಾರಲು ಹುರುಪಿನೊಂದಿಗೆ ವಿಧಾನಸಭೆ ಕಲಾಪಕ್ಕೆ ದಾಂಗುಡಿಯಿಟ್ಟ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಸರ್ಕಾರ ಮುಂದಿಟ್ಟ ಕಡತ, ಗುರುವಾರದ ಚರ್ಚೆಯ ದಿಕ್ಕನ್ನೇ ಬದಲಿಸಿಬಿಟ್ಟಿತು.
‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಮಸೂದೆಯ ಕರಡನ್ನು ಸಿದ್ಧಪಡಿಸಲಾಗಿತ್ತು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ದಾಖಲೆಗಳನ್ನು ಪ್ರದರ್ಶಿಸಿದ್ದರಿಂದ ಸಿದ್ದರಾಮಯ್ಯ ಗಲಿಬಿಲಿಗೆ ಒಳಗಾದರು. ಅದಕ್ಕೆ ಪೂರಕವೆಂಬಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಟಿಪ್ಪಣಿ ಬರೆದು ಸಹಿ ಹಾಕಿದ್ದ ದಾಖಲೆಯನ್ನೂ ತೋರಿಸಿದರು. ಇದರಿಂದಾಗಿ ಒಂದುಹಂತದಲ್ಲಿ ಸಿದ್ದರಾಮಯ್ಯ ಕಂಗೆಟ್ಟರು.
ಭೋಜನದ ವಿರಾಮದ ಬಳಿಕ ಹಳೆಯ ಕಡತಗಳ ಜತೆ ಸದನಕ್ಕೆ ಬಂದ ಸಿದ್ದರಾಮಯ್ಯ, ಅದರ ಮೂಲಕವೇ ಸಚಿವರು, ಬಿಜೆಪಿ ಸದಸ್ಯರನ್ನು ಹಿಮ್ಮೆಟ್ಟಿಸಿ, ತಮ್ಮ ಪಕ್ಷ ಮತಾಂತರ ನಿಷೇಧದ ಪರ ಇಲ್ಲ ಎಂದು ಪ್ರತಿಪಾದಿಸಿದರು.
2009ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರೆಸ್ಸೆಸ್ ಹಿನ್ನೆಲೆಯವರಾದ ಎಂ.ಚಿದಾನಂದಮೂರ್ತಿ, ಕೃ.ನರಹರಿ, ಮೈ.ಚ.ಜಯದೇವ, ಎಸ್.ಆರ್.ಲೀಲಾ, ಮತ್ತೂರು ಕೃಷ್ಣಮೂರ್ತಿ ಸೇರಿದಂತೆ ಹಲವರು ಮತಾಂತರ ನಿಷೇಧ ಕಾಯ್ದೆ ತರುವಂತೆ ಮನವಿ ಸಲ್ಲಿಸಿದ್ದರು. ಅಲ್ಲಿನ ಕಾಯ್ದೆಯಲ್ಲಿದ್ದ ಮಧ್ಯಪ್ರದೇಶದ ಹೆಸರನ್ನು ತೆಗೆದು ಕರ್ನಾಟಕದ ಹೆಸರು ಹಾಕಿದರೆ ಸಾಕು ಎಂದೂ ಸಲಹೆ ನೀಡಿದ್ದರು. ನ್ಯಾಯಮೂರ್ತಿ ರಾಮಾ ಜೋಯಿಸ್ ಅವರಿಂದ ಪಡೆಯಬಹುದು ಎಂಬುದಾಗಿಯೂ ಸಲಹೆ ನೀಡಿದ್ದರು’ ಎಂದು ತಿರುಗೇಟು ನೀಡಿದರು.
ಮಸೂದೆ ಸಿದ್ಧಪಡಿಸುವಂತೆ ಕಾನೂನು ಆಯೋಗಕ್ಕೆ ಯಡಿಯೂರಪ್ಪ ಶಿಫಾರಸು ಮಾಡಿದ್ದರು. 2014ರಲ್ಲಿ ಆಯೋಗವು ಮಸೂದೆ ಸಿದ್ಧಪಡಿಸಿಕೊಟ್ಟಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆ ಮಸೂದೆ ವಿವಿಧ ಇಲಾಖೆ ಮೂಲಕ ನನ್ನ ಮುಂದೆ ಬಂದಿತ್ತು. ಸಚಿವ ಸಂಪುಟ ಸಭೆ ಮುಂದೆ ಕಡತ ಮಂಡಿಸಿ ಎಂದು ಟಿಪ್ಪಣಿ ಬರೆದೆ. ನಂತರ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿದ್ದೆ. ಮತಾಂತರ ನಿಷೇಧಕ್ಕೆ ನಾವು ವಿರೋಧ ಇದ್ದುದರಿಂದ ಅದನ್ನು ಸಚಿವ ಸಂಪುಟದ ಮುಂದೆ ತರಲಿಲ್ಲ’ ಎಂದು ಹೇಳಿದರು.
‘ನನ್ನ ಕಾಲದಲ್ಲಿ ಮನವಿ ಸ್ವೀಕರಿಸಿದ್ದು ನಿಜ. ಇದರಲ್ಲಿ ಮುಚ್ಚುಮರೆ ಇಲ್ಲ. ಆ ಬಳಿಕ ಹಲವು ಪ್ರಕ್ರಿಯೆಗಳು ನಡೆದಿವೆ. ನಿಮ್ಮ ಕಾಲದಲ್ಲಿ ಮಸೂದೆ ಸಿದ್ಧಪಡಿಸಿದ್ದು ನಿಜವಲ್ಲವೇ’ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada