ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಚಿತ್ರೀಕರಣ ಆರಂಭವಾಗಿ ಬಹು ಸಮಯವಾಗಿದೆ.
ಆರ್.ಚಂದ್ರು ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಸಹ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಆದರೆ ಈ ವರೆಗೆ ಸಿನಿಮಾದ ನಾಯಕಿ ಯಾರೆಂಬುದು ಮಾತ್ರ ಖಾತ್ರಿಯಾಗಿಲ್ಲ.
ಮೂಲಗಳ ಪ್ರಕಾರ ಸಿನಿಮಾಕ್ಕೆ ಪರಭಾಷೆಯ ಟಾಪ್ ನಾಯಕಿಯನ್ನೇ ಕರೆತರುವ ಉಮೇದು ಚಿತ್ರತಂಡಕ್ಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ಇಬ್ಬರು ನಟಿಯರು ಕಾರಣಾಂತರಗಳಿಂದ ಈ ಪ್ಯಾನ್ ಇಂಡಿಯಾ ಸಿನಿಮಾ ಕೈಬಿಟ್ಟಿದ್ದಾರೆ.
‘ಕಬ್ಜ’ ಸಿನಿಮಾಕ್ಕೆ ನಟಿ ಕಾಜಲ್ ಅಗರ್ವಾಲ್ ಅನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲು ಮಾತುಕತೆ ನಡೆದಿತ್ತು. ಆದರೆ ಕೋವಿಡ್ ಕಾರಣದಿಂದ ಚಿತ್ರೀಕರಣ ವಿಳಂಬವಾಯಿತು. ಬಳಿಕ ಕಾಜಲ್ ಸಹ ಮದುವೆ, ತಾಯ್ತನ ಇತರೆ ಸಂಭ್ರಮಗಳಲ್ಲಿ ಬ್ಯುಸಿಯಾಗಿಬಿಟ್ಟರು.
ನಯನತಾರಾ ಅನ್ನು ಕೇಳಿದ್ದ ಚಿತ್ರತಂಡ!
ಇನ್ನು ಈಗಾಗಲೇ ಉಪೇಂದ್ರ ಜೊತೆ ನಟಿಸಿರುವ ನಯನತಾರಾ ಅನ್ನು ಸಹ ನಿರ್ದೇಶಕ ಆರ್.ಚಂದ್ರು ಸಂಪರ್ಕ ಮಾಡಿದ್ದರು. ಆದರೆ ನಯನತಾರಾ ಈಗ ಹೆಚ್ಚು ಬ್ಯುಸಿ ಹಾಗಾಗಿ ಡೇಟ್ ಹೊಂದಾಣಿಕೆ ಆಗದ ಕಾರಣ ಸಿನಿಮಾದಿಂದ ಅನಿವಾರ್ಯವಾಗಿ ದೂರ ಉಳಿದರು ನಯನತಾರಾ. ಈ ಹಿಂದೆ 2010ರಲ್ಲಿ ಬಿಡುಗಡೆ ಆಗಿದ್ದ ಉಪೇಂದ್ರ ನಟಿಸಿ ನಿರ್ದೇಶನ ಸಹ ಮಾಡಿದ್ದ ‘ಸೂಪರ್’ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.
‘ಜಾಗ್ವಾರ್’ ಸಿನಿಮಾದಲ್ಲಿ ಕುಣಿದಿದ್ದ ತಮನ್ನಾ
ಇದೀಗ ‘ಕಬ್ಜ’ಗೆ ನಟಿ ತಮನ್ನ ಅವರನ್ನು ಒಪ್ಪಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಿಲ್ಕಿ ಬ್ಯೂಟಿ ತಮನ್ನಾಗೆ ‘ಕಬ್ಜ’ ಮೊದಲ ಕನ್ನಡ ಸಿನಿಮಾ ಏನಲ್ಲ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ನಟಿಸಿದ್ದ ಮೊದಲ ಸಿನಿಮಾ ‘ಜಾಗ್ವಾರ್’ನಲ್ಲಿ ಒಂದು ಐಟಂ ಹಾಡಿಗೆ ಸೊಂಟ ಬಳುಕಿಸಿದ್ದರು. ಬಳಿಕ ‘ಕೆಜಿಎಫ್’ ಸಿನಿಮಾದಲ್ಲಿಯೂ ವಿಶೇಷ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಆದರೆ ‘ಕಬ್ಜ’ ತಮನ್ನಾ ನಟಿಸುತ್ತಿರುವ ಮೊದಲ ಸಿನಿಮಾ ಆಗುವ ಸಾಧ್ಯತೆ ಇದೆ.
ಅತಿಥಿ ಪಾತ್ರದಲ್ಲಿ ನಟ ಸುದೀಪ್
‘ಕಬ್ಜ’ ಸಿನಿಮಾವು 1970-80ರಲ್ಲಿ ನಡೆವ ಕತೆ ಹೊಂದಿದ್ದು ಉಪೇಂದ್ರ ಮಾಫಿಯಾ ಡಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದು ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಆರ್.ಚಂದ್ರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ‘ಕಬ್ಜ’ ಸಿನಿಮಾವು ಆರ್.ಚಂದ್ರು-ಉಪೇಂದ್ರ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಆಗಿರಲಿದೆ.
ಹಲವು ಸಿನಿಮಾಗಳಲ್ಲಿ ಉಪೇಂದ್ರ ಬ್ಯುಸಿ
‘ಕಬ್ಜ’ ಸಿನಿಮಾದ ಹೊರತಾಗಿ ಉಪೇಂದ್ರ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಹೋಮ್ ಮಿನಿಸ್ಟರ್’, ‘ತ್ರಿಶೂಲಂ’ ಹಾಗೂ ‘ಬುದ್ಧಿವಂತ 2’ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ಇದರ ಜೊತೆಗೆ ‘ಲಗಾಮ್’ ಸಿನಿಮಾ ಸಹ ಚಿತ್ರೀಕರಣವಾಗುತ್ತಿದೆ. ತೆಲುಗಿನಲ್ಲಿ ‘ಗನಿ’ ಹೆಸರಿನ ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದು ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಗನಿ’ ಸಿನಿಮಾದಲ್ಲಿ ಚಿರಂಜೀವಿ ಕುಟುಂಬದ ಕುಡಿ ವರುಣ್ ತೇಜ್ ನಾಯಕನಾಗಿ ನಟಿಸಿದ್ದಾರೆ. ಇವೆಲ್ಲದರ ಜೊತೆಗೆ ಉಪೇಂದ್ರ ಮತ್ತೆ ನಿರ್ದೇಶನದ ಟೋಪಿ ತೊಟ್ಟಿದ್ದು, ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada