ಚಾಮರಾಜನಗರ: ಎಸ್ಸಿ ಹಾಗೂ ಎಸ್ಟಿ ಸಮುದಾಯಗಳ ಮೀಸಲಾತಿ ಹೆಚ್ಚಿಸುತ್ತೇವೆ, ಸಿಹಿ ಸುದ್ದಿ ಕೊಟ್ಟೇ ಕೊಡುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಮ್ಮ ಸರ್ಕಾರ ಬದ್ಧತೆ ಪ್ರದರ್ಶಿಸುತ್ತದೆ, ಈಗ ಹೋರಾಟ ಮಾಡುವವರು ಕುಣಿದಾಡುವಂತೆ ಬೊಮ್ಮಾಯಿ ಸರ್ಕಾರ ಮಾಡಲಿದೆ, ಪರಿಶಿಷ್ಟ ಜಾತಿಗೆ ಶೇ. 17 ರಷ್ಟು ಪರಿಶಿಷ್ಟ ವರ್ಗಕ್ಕೆ ಶೆ.7.5 ರಷ್ಟು ಮೀಸಲಾತಿ ಕೊಡುವ ಕೆಲಸ ಆದಷ್ಟು ಶೀಘ್ರ ಆಗಲಿದೆ ಎಂದರು.
ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿ ಎಸ್ಸಿ-ಎಸ್ಟಿ ಸಮುದಾಯದವರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಈಗ ನಮ್ಮ ಸರ್ಕಾರ ಇದೆ ಎಂದು ಹರಿಹಾಯುತ್ತಿದ್ದಾರೆ, ಕಾಂಗ್ರೆಸ್ ನವರು ವಾಲ್ಮೀಕಿ ಪ್ರತಿಮೆ ಸ್ಥಾಪಿಸಿದ್ದು ಬಿಟ್ಟರೇ ಇನ್ಯಾವ ಕೆಲಸವೂ ಅವರು ಮಾಡಿಲ್ಲ, ಮೀಸಲಾತಿ ನೀಡಲು ನಮ್ಮ ಪಾಳಿ ಬಂದಿದೆ, ನಾವು ಕೊಡುತ್ತೇವೆ. ಈ ಹಿಂದೆ, ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಜಯಂತಿ ಮಾಡಲಾಯಿತು, ತಳವಾರ-ಪರಿವಾರವನ್ನು ಎಸ್ಟಿಗೆ ಸೇರಿಸಲಾಯಿತು, ವಾಲ್ಮೀಕಿ ಭವನ ನಿರ್ಮಾಣ ನಮ್ಮ ಕಾಲದಲಿ ಆಯಿತು ಇದನ್ನು ಯಾರೂ ಮರೆಯಬಾರದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇಂದು ಶ್ರೀರಾಮುಲು ಜಿಲ್ಲಾ ಪ್ರವಾಸದಲ್ಲಿದ್ದು ವಿವಿಧ ಶಾಲೆಗಳ ನೂತನ ಕಟ್ಟಡ ಉದ್ಘಾಟನೆ, ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: