ಬೆಂಗಳೂರು, ಮೇ 31- ಎಂಟು ವಾರದೊಳಗೆ ಚುನಾವಣೆ ನಡೆಸಬೇಕೆಂದು ಸುಪ್ರೀಂಕೊರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವ ಸಂಬಂಧ ಭರದ ಸಿದ್ಧತೆ ನಡೆದಿದ್ದು, ವಾರ್ಡ್ ಮರುವಿಂಗಡಣೆ ವರದಿ ರಾಜ್ಯ ಸರ್ಕಾರಕ್ಕೆ ಇಂದು ಸಲ್ಲಿಕೆಯಾಗಲಿದೆ.
ಬಿಬಿಎಂಪಿ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆಗೆ ವಾರ್ಡ್ಗಳ ಮರುವಿಂಗಡಣೆ ವರದಿಯನ್ನು ಸಲ್ಲಿಸಲಿದ್ದಾರೆ. ನಗರಾಭಿವೃದ್ಧಿ ಇಲಾಖೆ ಮೂಲಕ ಸಿಎಂಗೆ ವಾರ್ಡ್ ಮರುವಿಂಗಡಣೆಯ ಕರಡು ರವಾನೆಯಾಗಲಿದೆ. ಮರುವಿಂಗಡಣೆಯನ್ನು ಸರ್ಕಾರ ಅನುಮೋದಿಸಿದರೆ ಎರಡು ವಾರಗಳ ಕಾಲ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗುವುದು. ಇದಾದ ಬಳಿಕ ಮೀಸಲಾತಿ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಲಿದ್ದು, ನಂತರ ಚುನಾವಣೆಗೆ ಅಸೂಚನೆ ಪ್ರಕಟಗೊಳ್ಳಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಅವರು ತಿಳಿಸಿದರು.
ಚುನಾವಣೆ ಸಿದ್ಧತೆ ಕುರಿತು ಅನೌಪಚಾರಿಕ ಚರ್ಚೆಗಳು ನಡೆದಿದ್ದು, 198 ವಾರ್ಡ್ಗಳನ್ನು 243ಕ್ಕೆ ಹೆಚ್ಚಳ ಮಾಡಿ ಚುನಾವಣೆ ನಡೆಸಲು ಸಿದ್ಧತೆಗಳು ಆರಂಭವಾಗಿವೆ. ಶೇ.50ಕ್ಕೆ ಮೀರದಂತೆ ಮೀಸಲಾತಿ ನಿಗದಿ ಮಾಡಲು ಬಿಬಿಎಂಪಿ ಕಾಯ್ದೆ-2022 ತಿದ್ದುಪಡಿ ಪ್ರಸ್ತಾವನೆಗೆ ಸಚಿವ ಸಂಪುಟ ಸಮ್ಮತಿ ನೀಡಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಈಗಾಗಲೇ ವಾರ್ಡ್ ಪುನರ್ವಿಂಗಡಣೆ ಸಂಬಂಧ ಗಡಿ ಗುರುತಿಸುವಿಕೆ, ಜನಸಂಖ್ಯೆ ಆಧಾರದ ಮೇಲೆ ವಾರ್ಡ್ ವಿಂಗಡಣೆ ಸೇರಿದಂತೆ ಬಹುತೇಕ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಮೀಸಲಾತಿ ಗೊಂದಲ ಬಗೆಹರಿದರೆ ಚುನಾವಣಾ ಪ್ರಕ್ರಿಯೆ ಚುರುಕುಗೊಳ್ಳಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada