ಬೇಸಿಗೆ ಆರಂಭದಲ್ಲಿಯೇ ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಶುರುವಾಗಿದೆ. ನಗರಕ್ಕೆ ನೀರು ಪೂರೈಸುವ ಜಲಾಶಯಗಳು ಸಮೃದ್ಧವಾಗಿದ್ದರೂ ಅಸಮರ್ಪಕ ನಿರ್ವಹಣೆಯೇ ನೀರಿನ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ.ಕಳೆದ 3-4 ವರ್ಷಗಳಿಂದ ಹೆಚ್ಚು ಮಳೆಯಾಗುತ್ತಿದ್ದು, ಬೆಳಗಾವಿ ನಗರಕ್ಕೆ ನೀರು ಪೂರೈಸುವ ಹಿಡಕಲ್ ಮತ್ತು ರಾಕಸಕೊಪ್ಪ ಜಲಾಶಯಗಳು ಭರ್ತಿಯಾಗಿವೆ. ಹಿತ ಮಿತವಾಗಿ ಬಳಸಿದರೆ ಸದ್ಯ ಬೇಸಿಗೆಯ ಅಂತ್ಯದವರೆಗೂ ನಗರಕ್ಕೆ ನೀರು ಸಾಕು ಎಂದು ಅಧಿಕಾರಿಗಳೇ ಹೇಳುತ್ತಾರೆ. ಆದರೂ ನಗರದಲ್ಲಿ ಪ್ರತಿ ದಿನ ಒಂದಲ್ಲಒಂದು ಬಡಾವಣೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಸಾರ್ವಜನಿಕರು ಕೊಡ ಹಿಡಿದು ನೀರಿಗಾಗಿ ಅಲೆದಾಡುವ ದೃಶ್ಯ ಸಾಮಾನ್ಯ ಎಂಬಂತಾಗಿದೆ. ನೀರಿನ ಮೂಲಗಳ ಕೊರತೆ ಇಲ್ಲದಿದ್ದರೂ ಪೂರೈಕೆ ವ್ಯವಸ್ಥೆಯಲ್ಲಿ ಪದೇ ಪದೆ ತಾಂತ್ರಿಕ ದೋಷಗಳು ಉಂಟಾಗುತ್ತಿರುವುದೇ ಇದಕ್ಕೆ ಕಾರಣವಾಗುತ್ತಿದೆ.ಜಲಾಶಯಗಳಿಂದ ನೀರು ಪಂಪ್ ಮಾಡಿ ಪೈಪ್ಲೈನ್ ಮೂಲಕ ಲಕ್ಷ್ಮೀ ಟೇಕಡಿಯಲ್ಲಿರುವ ಶುದ್ಧೀಕರಣ ಘಟಕಕ್ಕೆ ತರಲಾಗುತ್ತದೆ. ಅಲ್ಲಿಂದ ಪೈಪ್ಲೈನ್ ಮೂಲಕ ನಗರದ ಅಂಬೇಡ್ಕರ್ ಗಾರ್ಡನ್, ಅಲಾರವಾಡ, ಸಿವಿಲ್ ಆಸ್ಪತ್ರೆ ಆವರಣ, ಹಿಂದವಾಡಿ ಮೊದಲಾದೆಡೆ ಇರುವ ಪಂಪ್ ಹೌಸ್ಗಳಿಗೆ ಪೂರೈಕೆಯಾಗುತ್ತದೆ. ಪಂಪ್ ಹೌಸ್ಗಳಿಂದ ಮುಂದೆ ಆಯಾ ಪ್ರದೇಶಗಳಲ್ಲಿರುವ ಟ್ಯಾಂಕ್ಗಳ ಮೂಲಕ ಮನೆಗಳಿಗೆ ನೀರು ಪೂರೈಕೆಯಾಗುತ್ತದೆ.ಪಂಪ್ ಮಾಡುವುದರ ಮೂಲಕ ಪೈಪ್ಲೈನ್ನಲ್ಲಿ ನಿರಂತರವಾಗಿ ನೀರು ಹರಿಯುತ್ತಿರುತ್ತದೆ. ವಿದ್ಯುತ್ ಪೂರೈಕೆ ಏಕಾಏಕಿ ನಿಂತು ಹೋದಾಗ ಪೈಪ್ನಲ್ಲಿರುವ ನೀರು ರಭಸವಾಗಿ ಹಿಮ್ಮುಖ ಚಲಿಸುತ್ತದೆ. ಇದರಿಂದ ಪೈಪ್ಗಳು ಒಡೆಯುತ್ತವೆ ಎಂದು ನೀರು ಪೂರೈಕೆ ವಿಭಾಗದ ತಾಂತ್ರಿಕ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. ಸೂಕ್ತವಾದ ತಂತ್ರಜ್ಞಾನ ಅಳವಡಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಮೂಲಕ ನಗರದ ನೀರಿನ ಸಮಸ್ಯೆ ಬಗೆಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಮೊದಲು ನಗರದ ನೀರು ಪೂರೈಕೆ ಮಹಾನಗರ ಪಾಲಿಕೆ ವತಿಯಿಂದಲೇ ಆಗುತ್ತಿತ್ತು. ಬಳಿಕ ನೀರು ಪೂರೈಕೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸುವ ಸಲುವಾಗಿ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ನಗರದಲ್ಲಿ24*7 ನೀರು ಪೂರೈಸುವ ಗುರಿ ಹೊಂದಲಾಗಿದ್ದು, ಕೆಲ ಬಡಾವಣೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ, ಪ್ರಸ್ತುತ ಖಾಸಗಿ ಕಂಪನಿಯ ನೀರು ಪೂರೈಕೆ ವ್ಯವಸ್ಥೆಗಿಂತ, ಮೊದಲಿದ್ದ ಮಹಾನಗರ ಪಾಲಿಕೆಯ ನೀರು ಪೂರೈಕೆಯೇ ಹೆಚ್ಚು ಉತ್ತಮವಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.ಹಿಡಕಲ್ ಜಲಾಶಯದಿಂದ ನೀರು ಪೂರೈಸುವ ಪೈಪ್ಗಳು ಕುಂದರಗಿ ಭಾಗದಲ್ಲಿ ಮೂರು ಕಡೆ ಒಡೆದು ನೀರು ಸೋರಿಕೆಯಾದ ಕಾರಣ ರಿಪೇರಿ ಕೆಲಸದ ನಿಮಿತ್ತ ಕಣಬರ್ಗಿ, ಹಿಂಡಾಲ್ಕೋ, ಸೈನಿಕ್ ನಗರ, ಬಿಮ್ಸ್, ಕೆಎಲ್ಇ, ಮಜಗಾಂವ, ನಾನಾವಾಡಿ ಸೇರಿದಂತೆ ನಗರದ ಬಹುತೇಕ ಬಡಾವಣೆಗಳಲ್ಲಿ ಶಿವರಾತ್ರಿ ದಿನದಂದೇ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada