ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಜುಲೈ 15ರಂದು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಸಾವರಗಾಂವ, ಹುಲ್ಯಾಳ, ಏಕಂಬಾ, ಸುಂದಾಳ, ನಾಗಮಾರಪಳ್ಳಿ, ಚಿಂತಾಕಿ, ವಡಗಾಂವ್, ಸಂತಪೂರ, ನಾಗೂರ(ಬಿ) ಸೇರಿದಂತೆ ಸುಮಾರು 30 ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಅತಿವೃಷ್ಟಿಯಿಂದ ಸಂಭವಿಸಿರುವ ಬೆಳೆ ಮತ್ತು ಮನೆ ಹಾನಿಯ ಪರಿಶೀಲನೆ ನಡೆಸಿದರು.
ಸಾವರಗಾಂವ್, ಹುಲ್ಯಾಳ, ಸುಂದಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾದ ಮನೆಗಳನ್ನು ವೀಕ್ಷಿಸಿದರು. ಅಲ್ಲದೇ ವಿವಿಧ ಗ್ರಾಮಗಳ 50 ಫಲಾನುಭವಿಗಳಿಗೆ ಪರಿಹಾರಧನ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಸಚಿವರು, ಬೀದರ ಜಿಲ್ಲೆಯಲ್ಲಿಯೇ ಔರಾದ ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಅಂದಾಜು 120ಕ್ಕಿಂತ ಹೆಚ್ಚು ಮನೆಗಳು ಹಾನಿಯಾಗಿರುವ ಬಗ್ಗೆ ವರದಿಯಿದ್ದು, ಮಳೆಯಿಂದ ಹಾನಿಯಾದ ಎಲ್ಲ ಮನೆಗಳನ್ನು ತುರ್ತಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಎಲ್ಲ ಸಂತ್ರಸ್ಥರಿಗೆ ಸರ್ಕಾರದ ಪರಿಹಾರಧನ ಸಿಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ತಹಸೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಂದಾಯ ಇಲಾಖೆಯ ಅಧಿಕಾರಿಗಳ ವರದಿಯ ಅನುಸಾರ ಸಂತ್ರಸ್ಥರಿಗೆ ಹೊಸ ಮನೆ ನಿರ್ಮಿಸಿಕೊಡಲು ಸರ್ಕಾರದಿಂದ ಅಗತ್ಯ ಪರಿಹಾರಧನ ಬಿಡುಗಡೆ ಮಾಡಲಾಗುತ್ತದೆ. ಸರ್ಕಾರ ನಿಮ್ಮೊಂದಿಗಿದ್ದು, ನಾನು ನಿಮ್ಮ ಜೊತೆಗಿದ್ದೇನೆ. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಧೈರ್ಯದಿಂದಿರಿ. ಏನೇ ಸಮಸ್ಯೆ ಎದುರಾದರೂ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದು ಸಂತ್ರಸ್ಥರಿಗೆ ಧೈರ್ಯ ಹೇಳಿದರು.
ಗುಡಪಳ್ಳಿ, ಠಾಣಾಕುಶನೂರ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮಳೆ ಸಂಭವಿಸಿ ಸಾಕಷ್ಟು ಬೆಳೆ ಹಾನಿಯಾಗಿದೆ. ಕೃಷಿ ಅಧಿಕಾರಿಗಳು ಎಲ್ಲ ಗ್ರಾಮಗಳಲ್ಲಿನ ಕೃಷಿ ಭೂಮಿಗೆ ಭೇಟಿ ನೀಡಿ ಹಾನಿಯ ಬಗ್ಗೆ ನಿಖರವಾದ ವರದಿ ಸಲ್ಲಿಸಬೇಕು. ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರಿಗೆ ಭೇಟಿಯಾಗಿ ಕ್ಷೇತ್ರದಲ್ಲಾದ ಹಾನಿಯ ಬಗ್ಗೆ ಮಾಹಿತಿ ನೀಡಲಿದ್ದು, ಔರಾದ(ಬಿ) ವಿಧಾನಸಭಾ ಕ್ಷೇತ್ರವನ್ನು ಪ್ರವಾಹ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಮನವಿ ಮಾಡಲಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿನ ಅನೇಕ ರೈತರು ಈ ಹಿಂದೆ ಬೆಳೆ ಹಾನಿ ಸಂಭವಿಸಿ 2-3 ಸಲ ಮರು ಬಿತ್ತನೆ ಮಾಡಿದ್ದಾರೆ. ಇದೀಗ ವಿಪರೀತ ಮಳೆಯಿಂದಾಗಿ ಪುನಃ ಬೆಳೆ ನಷ್ಟವಾಗಿರುವುದಕ್ಕೆ ಸಾಕಷ್ಟು ಬೇಸರವಾಗುತ್ತಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳೆ ಹಾನಿಯಾದ ಎಲ್ಲ ರೈತರಿಗೂ ಬೆಳೆ ವಿಮೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದು, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವರು ಹೇಳಿದರು.
ಇದೇ ವೇಳೆ ಠಾಣಾಕುಶನೂರ, ನಿಡೋದಾ, ಹಾಲಹಳ್ಳಿ, ಸಂಗಮ, ಸಾವಳಿ, ಹೊಳಸಮುದ್ರ, ಡಿಗ್ಗಿ, ಕಮಲನಗರ, ಮುರ್ಕಿ, ಹಂದಿಕೇರಾ, ದಾಬಕಾ ಸೇರಿದಂತೆ ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕಿನ ನಾನಾ ಗ್ರಾಮಗಳಿಗೆ ಸಚಿವರು ಭೇಟಿ ನೀಡಿ ಬೆಳೆ, ಆಸ್ತಿಪಾಸ್ತಿ ಹಾನಿಯ ಪರಿಶೀಲನೆಯ ಜೊತೆಗೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ವರದಿ. ಲಕ್ಕಿ ರಾಠೋಡ ಸ್ಪೀಡ್ ನ್ಯೂಸ್ ಬೀದರ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: