ಇಂದು ನಡೆದ ಇಂದಿರಾಗಾಂಧಿಯವರ 103ನೇ ಜನ್ಮ ಜಯಂತಿ ಪ್ರಯುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ದೆಹಲಿಗೆ ಹೋಗಿ ಬರಿಗೈಯಲ್ಲಿ ವಾಪಸ್ ಬಂದಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ, ಇದು ಯಡಿಯೂರಪ್ಪನವರ ಬದಲಾವಣೆಯ ಸೂಚನೆಯನ್ನು ನೀಡುತ್ತದೆ, ಅವರನ್ನೇ ಮುಂದುವರೆಸುವುದಾದರೆ ಒಂದು ಪಟ್ಟಿಯನ್ನು ಅಪ್ರುವಲ್ ಮಾಡಿಕೊಂಡು ಬರಬೇಕಿತ್ತು, ಆದರೆ ಅದು ಆಗಿಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದ ಅವರು ಕನಿಷ್ಠಪಕ್ಷ ಒಂದು ರಾಜ್ಯದ ಮುಖ್ಯಮಂತ್ರಿಗಳು ಎನ್ನುವುದನ್ನು ನೋಡದೆ ಅವರನ್ನು ಭೇಟಿ ಮಾಡುವುದಕ್ಕೆ ಸಮಯವನ್ನು ನೀಡಿಲ್ಲ, ಇದು ನಿಜಕ್ಕೂ ಖಂಡನೀಯ, ಯಡಿಯೂರಪ್ಪ ಬಿಜೆಪಿ ಮುಖಂಡ ಎನ್ನುವುದಕ್ಕಿಂತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು, ಇದು ಅವರಿಗೆ ಆದ ಅವಮಾನ ಅಲ್ಲ ಇಡೀ ನಾಡಿನ ಜನರಿಗೆ ಆಗಿರುವ ಅವಮಾನ ಎಂದು ಗುಡುಗಿದ್ದಾರೆ.
ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರ ಬಗ್ಗೆ ಮಾತನಾಡಿದ ಅವರು ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ ಪಕ್ಷವು ಸುಳ್ಳು ಭರವಸೆಯನ್ನು ನೀಡಿ ಜನರನ್ನು ಮರಳು ಮಾಡಿ ಗೆಲುವನ್ನು ಸಾಧಿಸಿದೆ ಎಂದು ಹೇಳಿದರು.
ಕಾಡುಗೊಲ್ಲರ ನಿಗಮ ಮಾಡುತ್ತೇನೆ, ಎಸ್ಟಿಗೆ ಸೇರುತ್ತೇವೆ, ಎಡಗೈ ಸಮುದಾಯದವರಿಗೆ ಸದಾಶಿವ ಆಯೋಗ ಜಾರಿ ಮಾಡುವ ಭರವಸೆ, ಮದಲೂರು ಕೆರೆಗೆ ಆರು ತಿಂಗಳಲ್ಲಿ ನೀರು ಬಿಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಇದೆಲ್ಲವನ್ನು ನಂಬಿ ಮುಗ್ಧ ಜನರು ಆಡಳಿತ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದಾರೆ. ಮತದಾರರಿಗೆ ನೀಡಿರುವ ಭರವಸೆಯನ್ನು ಆಡಳಿತಪಕ್ಷ ಈಡೇರಿಸದಿದ್ದರೆ ಉಗ್ರವಾದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ. ಎನ್. ರಾಜಣ್ಣ ಹೇಳಿದ್ದಾರೆ.
Watch Next :ತಂತ್ರಜ್ಞಾನವೇ ಭವಿಷ್ಯದ ಶಕ್ತಿ- ಪ್ರಧಾನಿ ನರೇಂದ್ರ ಮೋದಿ ಹೇಳಿಕೆ