ಬಿರ್ಜು ಮಹಾರಾಜ್

ಬಿರ್ಜು ಮಹಾರಾಜ್
ಬ್ರಿಜ್ಮೋ ಮಿಶ್ರಾ ಅವರು ಪಂಡಿತ್ ಬಿರ್ಜು ಮಹಾರಾಜ್ ಎಂಬ ಹೆಸರಿನಿಂದ ಕಥಕ್ ನೃತ್ಯದಲ್ಲಿ ವಿಶ್ವಪ್ರಖ್ಯಾತರು.
ಬಿರ್ಜು ಮಹಾರಾಜರು 1938ರ ಫೆಬ್ರುವರಿ 4ರಂದು ರಾಯಘರದಲ್ಲಿ ಜನಿಸಿದರು. ಕಥಕ್ ನೃತ್ಯದ ‘ಕಲ್ಕಾ ಬಿಂದಾದಿನ್ ಘರಾನಾ’ವನ್ನು ಅತ್ಯಂತ ಪ್ರಸಿದ್ಧಿಪಡಿಸಿದ ಖ್ಯಾತಿ ಬಿರ್ಜು ಮಹಾರಾಜ್ ಅವರದ್ದು. ಕಥಕ್ ನೃತ್ಯ ಅವರ ಕುಟುಂಬದಲ್ಲಿ ವಂಶಪಾರಂಪರ್ಯವಾಗಿ ಬಂದದ್ದು. ಅವರ ಕುಟುಂಬದವರೆಲ್ಲ ರಾಜಮನೆತನದ ಆಸ್ಥಾನ ವಿದ್ವಾಂಸರೆಂದು ಪ್ರಖ್ಯಾತರು. ಅಚ್ಚನ್ ಮಹಾರಾಜ್ ಎಂದು ಪ್ರಖ್ಯಾತರಾದ ಅವರ ತಂದೆ ಜಗನ್ನಾಥ್ ಮಹಾರಾಜ್ ಹಾಗೂ ಚಿಕ್ಕಪ್ಪಂದಿರಾದ ಶಂಭು ಮಹಾರಾಜ್, ಲಚ್ಚು ಮಹಾರಾಜ್ ಇವರಲ್ಲಿ ಪ್ರತಿಯೋರ್ವರೂ ಮಹಾನ್ ನೃತ್ಯ ಕಲಾವಿದರೇ. ಬಿರ್ಜು ಮಹಾರಾಜ್ ಅವರಿಗೆ ಅವರ ತಂದೆಯೇ ಗುರು.
ಬಿರ್ಜು ಮಹಾರಾಜ್ ತಮ್ಮ ಏಳನೆಯ ಕಿರುವಯಸ್ಸಿನಲ್ಲೇ ಮೊದಲ ನೃತ್ಯ ಪ್ರದರ್ಶನ ನೀಡಿದರು. ಅವರು ಒಂಭತ್ತು ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ಹೀಗಾಗಿ ಅವರ ಕುಟುಂಬ ದೆಹಲಿಗೆ ವಲಸೆ ಬಂತು. ಬಿರ್ಜು ಮಹಾರಾಜ್ ಅವರಿಗೆ ನೃತ್ಯವೇ ಪ್ರಥಮ ಆಸಕ್ತಿಯಾದರೂ, ಅವರಿಗೆ ಹಿಂದೂಸ್ಥಾನಿ ಸಂಗೀತ ಗಾಯನದಲ್ಲೂ ಅದ್ಭುತವಾದ ಪಾಂಡಿತ್ಯವಿತ್ತು. ಅನೇಕ ವಾದ್ಯಗಳ ವಾದನದಲ್ಲೂ ಅವರಿಗೆ ಅಪ್ರತಿಮವೆನಿಸುವಂತಹ ಪಾಂಡಿತ್ಯವಿತ್ತು. ಕಥಕ್ ನೃತ್ಯದ ಮೂಲಕ ಅನೇಕ ನೃತ್ಯ ರೂಪಕಗಳನ್ನು ಮತ್ತು ನೃತ್ಯ ನಾಟಕಗಳನ್ನು ಸೃಷ್ಟಿಸುವುದರ ಮೂಲಕ ಬಿರ್ಜು ಮಹಾರಾಜ್ ಕಥಕ್ ನೃತ್ಯಕ್ಕೆ ವ್ಯಾಪಕ ವಿಸ್ತಾರವನ್ನು ತಂದುಕೊಟ್ಟರು.
‘ಕಲಾಶ್ರಮ’ ನೃತ್ಯ ಶಿಕ್ಷಣಕ್ಕೆ ಬಿರ್ಜು ಮಹಾರಾಜ್ ಅವರ ಕೊಡುಗೆ ಮಹತ್ವಪೂರ್ಣವಾದುದು. ಬಿರ್ಜು ಮಹಾರಾಜ್ ಅವರು ವಿಶ್ವದಾದ್ಯಂತ ಸಂಚರಿಸಿ ಸಹಸ್ರಾರು ನೃತ್ಯ ಪ್ರದರ್ಶನಗಳನ್ನು ನೀಡುವುದರ ಜೊತೆಗೆ ಕಥಕ್ ವಿದ್ಯಾರ್ಥಿಗಳಿಗಾಗಿ ಅಸಂಖ್ಯಾತ ಶಿಕ್ಷಣ ಶಿಬಿರಗಳನ್ನೂ ನಡೆಸಿದ್ದರು. ಬಿರ್ಜು ಮಹಾರಾಜ್ ತಮ್ಮ ಹದಿಮೂರನೆಯ ಎಳೆಯ ವಯಸ್ಸಿನಲ್ಲೇ ದೆಹಲಿಯ ಸಂಗೀತ ಭಾರತಿಯಲ್ಲಿ ನೃತ್ಯ ಶಿಕ್ಷಣ ನೀಡಲು ಪ್ರಾರಂಭಿಸಿದರು. ತಮ್ಮ ಚಿಕ್ಕಪ್ಪನವರಾದ ಶಂಭು ಮಹಾರಾಜ್ ಅವರೊಂದಿಗೆ ಭಾರತೀಯ ಕಲಾಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಬಿರ್ಜು ಮಹಾರಾಜ್, ಮುಂದೆ ನವದೆಹಲಿಯ ಕಥಕ್ ಶಿಕ್ಷಣ ಕೇಂದ್ರದ ಶಿಕ್ಷಕರಾಗಿ ಮತ್ತು ಕ್ರಮೇಣವಾಗಿ ಅದರ ಪ್ರಧಾನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ 1998ರ ವರ್ಷದಲ್ಲಿ ನಿವೃತ್ತಿಯ ನಂತರದಲ್ಲಿ ತಮ್ಮದೇ ಆದ ‘ಕಲಾಶ್ರಮ’ ನೃತ್ಯ ಕಲಾಶಾಲೆಯನ್ನು ಹುಟ್ಟುಹಾಕಿದರು.
ಬಿರ್ಜು ಮಹಾರಾಜ್ ಅವರು ಸತ್ಯಜಿತ್ ರೇ ಅವರ ಶತರಂಜ್ ಖಿಲಾರಿ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡುವುದರ ಜೊತೆಗೆ ಗಾಯನವನ್ನೂ ನೀಡಿದರು. ದೇವದಾಸ್ ಚಿತ್ರದ ಪ್ರಸಿದ್ಧ ಗೀತೆಯಾದ ‘ಕಾಹೆ ಛೇದ್ ಮೋಹೆ’ ಗೀತೆಯ ನೃತ್ಯವನ್ನು ಸಹಾ ಬಿರ್ಜು ಮಹಾರಾಜ್ ನಿರ್ದೇಶಿಸಿದರು. ದಿಲ್ ತೋ ಪಾಗಲ್ ಹೈ, ಗದರ್ – ಏಕ್ ಪ್ರೇಮ್ ಕಥಾ, ವಿಶ್ವರೂಪಂ ಮುಂತಾದ ಅನೇಕ ಚಲನಚಿತ್ರಗಳಿಗೆ ಶಾಸ್ತ್ರೀಯ ನೃತ್ಯಗಳನ್ನು ಬಿರ್ಜು ಮಹಾರಾಜರು ಸಂಯೋಜಿಸಿದ್ದರು.
ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ್ ಸಂಮಾನ್, ಗಾಂಧೀ ಶಾಂತಿ ಪುರಸ್ಕಾರ, ಸೋವಿಯತ್ ಲ್ಯಾಂಡ್ ಪ್ರಶಸ್ತಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಖೈರಾಗರ್ ವಿಶ್ವವಿದ್ಯಾಲಯಗಳ ಡಾಕ್ಟರೇಟ್, ಲತಾ ಮಂಗೇಶ್ಕರ್ ಪುರಸ್ಕಾರ ಮುಂತಾದ ಅನೇಕ ಮಹತ್ವದ ಗೌರವಗಳು ಬಿರ್ಜು ಮಹಾರಾಜ್ ಅವರಿಗೆ ಸಂದಿದ್ದವು.
ಬಿರ್ಜು ಮಹಾರಾಜ್ 2022ರ ಜನವರಿ 16ರಂದು ರಾತ್ರಿ ಈ ಲೋಕವನ್ನಗಲಿದರು.
ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”
ಬಿರ್ಜು ಮಹಾರಾಜ್ ಅವರು ಕಲಾಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಮರ ಮಹಾರಾಜರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ ಪರಮಾಣು ಸೈಟ್ಗೆ 'ತುರ್ತು ಪ್ರತಿಕ್ರಿಯೆ ನೀಡುವವರಿಗೆ' ಪ್ರವೇಶವನ್ನು ಅನುಮತಿಸಿ: ಜೋ ಬಿಡೆನ್

Fri Mar 4 , 2022
ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಗುಂಡಿನ ದಾಳಿಯನ್ನು ನಿಲ್ಲಿಸುವಂತೆ ಮತ್ತು ತುರ್ತು ಸೇವೆಗಳಿಗೆ ಅವಕಾಶ ನೀಡುವಂತೆ ರಷ್ಯಾವನ್ನು ಒತ್ತಾಯಿಸಿದ್ದಾರೆ, ಹಿರಿಯ ಯುಎಸ್ ಅಧಿಕಾರಿಯೊಬ್ಬರು “ಎತ್ತರದ ವಿಕಿರಣದ” ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ. “ಈ ಪ್ರದೇಶದಲ್ಲಿ ತನ್ನ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ಅಗ್ನಿಶಾಮಕ ಮತ್ತು ತುರ್ತು ಪ್ರತಿಸ್ಪಂದಕರಿಗೆ ಸೈಟ್ ಅನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲು ರಷ್ಯಾವನ್ನು ಒತ್ತಾಯಿಸುವಲ್ಲಿ ಅಧ್ಯಕ್ಷ ಬಿಡೆನ್ […]

Advertisement

Wordpress Social Share Plugin powered by Ultimatelysocial