ರಾಜ್ಯ ಸರ್ಕಾರ ರಾಜ್ಯದಲ್ಲಿ ಅಶಾಂತಿ ಉಂಟುಮಾಡುವ ಹಾಗೂ ಅವರ ವೈಫಲ್ಯಗಳು ಮತ್ತು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಹುನ್ನಾರದೊಂದಿಗೆ ಅಲ್ಪಸಂಖ್ಯಾತರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಜಾರಿಗೊಳಿಸಲು ಮುಂದಾಗಿದೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಕಾಯ್ದೆ ವಾಪಾಸ್ ಪಡೆಯುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮತಾಂತರ ಕಾಯ್ದೆ ಉತ್ತರ ಪ್ರದೇಶ,ಗುಜರಾತ್, ಮಧ್ಯಪ್ರದೇಶದಲ್ಲಿ ಅಸ್ತಿತ್ವದಲ್ಲಿದೆ. ಗುಜರಾತ್ನಲ್ಲಿ ಇದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಯಾವದೇ ವ್ಯಕ್ತಿ ತನ್ನ ಇಚ್ಛೆಗೆ ಅನುಗುಣವಾಗಿ ಧರ್ಮ ಅನುಸರಿಸುವ ಅವಕಾಶ ನೀಡಿದೆ. ಇದರಿಂದ ಮತ್ತೊಂದು ಕಾಯ್ದೆ ಅವಶ್ಯಕತೆ ಇಲ್ಲ ಎಂದರು.
ಸಂವಿಧಾನದ ಪರಿಚ್ಛೇಧ 25ರ ಪ್ರಕಾರ ಇದಕ್ಕೆ ಗುಜರಾತ್ನಲ್ಲಿ ತಡೆಯಾಜ್ಞೆ ನೀಡಲಾಗಿದೆ. ಈ ಕಾಯ್ದೆಗೆ ಕಾಂಗ್ರೆಸ್ ವಿರೋಧವಿದ್ದು, ಈ ದೇಶ ಯಾವುದೇ ಒಂದು ಧರ್ಮ ಆಚರಣೆಗೆ ಸೀಮಿತವಾದ ರಾಷ್ಟ್ರವಲ್ಲ. ಜನಸಾಮಾನ್ಯರಿಗೆ ಕಿರುಕುಳ ನೀಡುವ ಹಾಗೂ ಅಲ್ಪಸಂಖ್ಯಾತರು, ಕ್ರಿಶ್ಚಿಯನ್ನರನ್ನು ಗುರಿಯಾಗಿರಿಸಿಕೊಂಡು ಬಿಜೆಪಿ ಈ ಕಾಯ್ದೆ ಜಾರಿಗೆ ತರಲು ಹೊರಟಿದೆ ಎಂದು ಆರೋಪಿಸಿದರು.ಕಾಯ್ದೆ ಜಾರಿಯ ಹಿಂದೆ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿ, ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳುವ ಜೊತೆಗೆ ಸರ್ಕಾರದ ಭ್ರಷ್ಟಾಚಾರ ಎಲ್ಲವನ್ನು ಮುಚ್ಚಿಕೊಳ್ಳುವ ಹುನ್ನಾರ ಅಡಗಿದೆ. ಉತ್ತರ ಪ್ರದೇಶ, ಗುಜರಾತ್ ರಾಜ್ಯದಲ್ಲಿರುವ ಕಾಯ್ದೆಗೂ ನಮ್ಮ ರಾಜ್ಯದಲ್ಲಿ ತರಲುದ್ದೇಶಿಸಿರುವ ಕಾಯ್ದೆಗೆ ಬಹಳ ವ್ಯತ್ಯಾಸ ಇದೆ. ಮತಾಂತರ ಗೊಳ್ಳುವವರು ಅವರ ಸಂಬಂಧಿಕರ ಅನುಮತಿ ಪಡೆಯಬೇಕು. ಯಾರು ಬೇಕಾದರೂ ಪ್ರಶ್ನೆ ಮಾಡಬಹುದು ಎಂಬ ಅಂಶ ಇದರಲ್ಲಿದೆ. ಇದು ಬಹಳ ಆತಂಕ ಸೃಷ್ಟಿ ಮಾಡುವಂತದ್ದಾಗಿದ್ದು” ಎಂದು ಹೇಳಿದರು.
ಗೂಳಿಹಟ್ಟಿ ಶೇಖರ್ 15 ಸಾವಿರ ಜನರು ಮತಾಂತರ ಆಗಿದ್ದಾರೆ ಎಂದು ಸದನದಲ್ಲಿ ಹೇಳುತ್ತಾರೆ. ಆದರೆ ಚಿತ್ರದುರ್ಗದಲ್ಲಿ ಸ್ವಯಂ ಪ್ರೇರಿತವಾಗಿ 45 ಕುಟುಂಬಗಳು ಕಾನೂನಿನ ಪ್ರಕಾರ ಮಾತ್ರವೇ ಮತಾಂತರ ಆಗಿದ್ದಾರೆ. ಆದರೆ ಗೂಳಿಹಟ್ಟಿ ಶೇಖರ್ 15 ಸಾವಿರ ಜನ ಅಂತ ಹೇಳಿದ್ದಾರೆ. ಇದಕ್ಕೆಲ್ಲ ಅವಕಾಶ ಕೊಟ್ಟವರು ಯಾರು?. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕಾಯ್ದೆ ಇದಾಗಿದ್ದು, ಕಾಂಗ್ರೆಸ್ ಇದನ್ನು ಒಪ್ಪುವುದಿಲ್ಲ” ಎಂದು ಕಾಯ್ದೆಯ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಸಿ. ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ ಲಕ್ಷ್ಮಣ್, ನಿಮ್ಮ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಪಟ್ಟಿ ಮಾಡಿ ಹೇಳಿ, ನಿಮಗೆ ಮಾನ ಮರ್ಯಾದೆ ಇದ್ದರೆ ಪಟ್ಟಿ ಕೊಡಿ. ಚಿಕ್ಕಮಗಳೂರಿನಲ್ಲಿ ಎರಡು ಕೆರೆ ಅಭಿವೃದ್ಧಿಗೆ ನಿರಂತರವಾಗಿ ಅನುದಾನ ಪಡೆಯುತ್ತಿರುವ ತಾವು ಕಳೆದ ವರ್ಷ 40 ಕೋಟಿ ಅನುದಾನ ಪಡೆದಿದ್ದೀರಿ. ಆದರೆ ಈವರೆಗೂ ಏನು ಅಭಿವೃದ್ಧಿ ಮಾಡಿದ್ದೀರಿ? ತಿಳಿಸಿ ಎಂದು ಸವಾಲು ಹಾಕಿದರು.ಈಗಾಗಲೇ ಸುಪ್ರಿಂಕೋರ್ಟ್ ನೀರು ಹಂಚಿಕೆ ಮಾಡಿದೆ. ತಮಿಳುನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಮೇಕೆದಾಟು ಯೋಜನೆ ಬಲಿ ಕೊಡುತ್ತಿದ್ದೀರಿ. ಬೆಂಗಳೂರು ಸೇರಿದಂತೆ ಹಲವು ಪಟ್ಟಣಗಳಿಗೆ ಇದರಿಂದ ಅನುಕೂಲ ಆಗಲಿದೆ. ಆದರೆ ಇದು ನಿಮಗೆ ಇಷ್ಟವಿಲ್ಲ, ನಿಮ್ಮ ರಾಜಕೀಯಕ್ಕಾಗಿ ಈ ಯೋಜನೆ ಬಗ್ಗೆ ಚಕಾರ ಎತ್ತುತ್ತಿಲ್ಲ. ನಿಮ್ಮ ಮೋದಿ ಕರ್ನಾಟಕ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
https://play.google.com/store/apps/details?id=com.speed.newskannada