ನಟ ದರ್ಶನ್ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳ ಕ್ಷಮಾಪಣೆ ಕೇಳಿದ್ದಾರೆ. ದರ್ಶನ್ ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಕ್ಷಮೆ ಕೇಳಿರುವುದಕ್ಕೆ ಕಾರಣವೂ ಇದೆ.ಎರಡು ದಿನದ ಹಿಂದೆ (ಫೆಬ್ರವರಿ 16) ನಟ ದರ್ಶನ್ ಹುಟ್ಟುಹಬ್ಬವಿತ್ತು. ಆದರೆ ಈ ಬಾರಿ ಅಪ್ಪು ನಿಧನ ಹಾಗೂ ಇತರೆ ಕಾರಣಗಳಿಂದಾಗಿ ದರ್ಶನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ ಹಾಗೂ ಮನೆಯ ಬಳಿ ಯಾರೂ ಬರಬಾರದೆಂದು ಅಭಿಮಾನಿಗಳಲ್ಲಿ ಮನವಿ ಸಹ ಮಾಡಿದ್ದರು.ಅಂತೆಯೇ ಹಲವು ಅಭಿಮಾನಿಗಳು ದರ್ಶನ್ ಮಾತಿನಂತೆ ದೂರದಿಂದಲೇ ಸಾಮಾಜಿಕ ಜಾಲತಾಣದ ಮೂಲಕ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಆದರೆ ಹಲವು ಅಭಿಮಾನಿಗಳು ದರ್ಶನ್ ನಿವಾಸದ ಬಳಿ ಬಂದಿದ್ದರು. ಅಲ್ಲಿ ಘೋಷಣೆಗಳನ್ನು ಸಹ ಕೂಗಿದರು. ಆದರೆ ದರ್ಶನ್ ಮನೆಯಲ್ಲಿರಲಿಲ್ಲವಾದ್ದರಿಂದ ಅವರನ್ನು ಭೇಟಿಯಾಗಲಿಲ್ಲ.ಇದೀಗ ನಟ ದರ್ಶನ್ ತಾವು ತಮ್ಮ ಹುಟ್ಟುಹಬ್ಬದ ದಿನ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಭೇಟಿಯಾಗದೆ ಅವರಿಗೆ ನಿರಾಸೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಕ್ಷಮಾಪಣೆ ಕೋರಿದ್ದಾರೆ.”ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ವರ್ಷ ನಿಮ್ಮನ್ನು ಈ ಸಮಯದಲ್ಲಿ ಭೇಟಿಯಾಗದ ಕಾರಣ ನನ್ನ ಕ್ಷಮೆಯಿರಲಿ. ಅದಕ್ಕೆ ಕಾರಣವನ್ನು ಸಹ ತಿಳಿಸಿದ್ದೇನೆ. ಮುಂದಿನ ಬಾರಿ ಖಂಡಿತವಾಗಿಯೂ ನಿಮ್ಮೆಲ್ಲರನ್ನು ಕಾಣುತ್ತೇನೆ. ನಿಮ್ಮ ಪ್ರೀತಿ- ಪ್ರೋತ್ಸಾಹಕ್ಕೆ ಸದಾ ಚಿರಋಣಿ” ಎಂದಿದ್ದಾರೆ ದರ್ಶನ್. ಅಂದಹಾಗೆ ದರ್ಶನ್ ತಮ್ಮ ಅಭಿಮಾನಿಗಳನ್ನು ಗೌರವದಿಂದ ಸೆಲೆಬ್ರಿಟಿಗಳೆಂದು ಕರೆಯುತ್ತಾರೆ.ದರ್ಶನ್ ಕಳೆದ ವರ್ಷವೂ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹಾಗಾಗಿ ಸಹಜವಾಗಿಯೇ ಈ ಬಾರಿ ದರ್ಶನ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದರು. ಆದರೆ ನಟ ದರ್ಶನ್ ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಬಿಡುಗಡೆ ಮಾಡಿ ತಮ್ಮ ಹುಟ್ಟುಹಬ್ಬ ಆಚರಿಸದಂತೆ ಮನವಿ ಮಾಡಿದರು. ಹಾಗಾಗಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಲಿಲ್ಲ.ದರ್ಶನ್ ಪ್ರತಿವರ್ಷ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗಾಗಿ ಮೀಸಲಿಡುತ್ತಾರೆ. ಅಂದು ಬೆಳಗ್ಗೆಯಿಂದ ಮನೆಯ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಕೇಕ್ ಕತ್ತರಿಸಿ, ಅವರ ಶುಭಾಶಯಗಳನ್ನು ಸ್ವೀಕರಿಸುತ್ತಾರೆ. ಆದರೆ ಕೊರೊನಾ ಹಾಗೂ ಇತರೆ ಕಾರಣಗಳಿಂದ ಕಳೆದ ಎರಡು ವರ್ಷದಿಂದ ದರ್ಶನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada