ಬೆಂಗಳೂರು, ಮೇ 7: ಚಲನಚಿತ್ರ ನಿರ್ದೇಶಕ ಸ್ಟ್ಯಾನ್ಲಿ ಜೋಸೆಫ್ ವಿರುದ್ಧದ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮತ್ತು ಸಾಲ ಮರುಪಾವತಿಸಿಲ್ಲ ಎಂಬ ಆರೋಪ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
ಜೊತೆಗೆ ಈ ಪ್ರಕರಣದಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ ನಂತರ ನಿರಾಕರಿಸಿರುವುದು ಐಪಿಸಿ ಯಡಿ ವಂಚನೆಯಾಗುವುದಿಲ್ಲ ಎಂದು ಹೇಳಿದೆ.
ಆದರೆ ಆಕೆಯಿಂದ ಪಡೆದಿರುವ ಹಣ ಮರು ಪಾವತಿ ಮಾಡದಿದ್ದರೆ ಅದು ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ರಡಿ ವಂಚನೆಯಾಗುತ್ತದೆ ಎಂದು ಕೋರ್ಟ್ ಆದೇಶಿಸಿದೆ.
ಹೀಗಾಗಿ ಚಿತ್ರ ನಿರ್ದೇಶಕ ಸ್ಟ್ಯಾನ್ಲಿ ಜೋಸೆಫ್ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ವಿರುದ್ಧದ ಎಫ್ಐಆರ್ ರದ್ದು ಕೋರಿ ಸ್ಟ್ಯಾನ್ಲಿ ಜೋಸೆಫ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಕೋರ್ಟ್ ಆದೇಶವೇನು?
ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠ, “ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಸಹ ಎರಡನೇ ಮಾಹಿತಿ ಆಧರಿಸಿ ಪೊಲೀಸರು ಪ್ರಥಮ ವರ್ತಮಾನ ದಾಖಲಿಸಿದ್ದಾರೆಂಬುದಕ್ಕೆ ಅಧೀನ ನ್ಯಾಯಾಲಯದಲ್ಲಿ ಯಾವುದೇ ದಾಖಲೆ ತೋರಿಸಿಲ್ಲ” ಎಂದೂ ಹೇಳಿದೆ. “ಅರ್ಜಿದಾರರ ವಿರುದ್ಧ ಪ್ರತಿವಾದಿ ಶಾಜಿಯಾ ಅಸ್ರಾ ಹೂಡಿರುವ ದೂರಿನಲ್ಲಿ ಹಿಂದೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಎಂಎಲ್ ಸಿ (ವೈದ್ಯಕೀಯ ಲೀಗಲ್ ಕೇಸ್) ದಾಖಲಾಗಿತ್ತು ಎಂದು ಹೇಳಿದ ಮಾತ್ರಕ್ಕೆ ಮೊದಲೇ ತನ್ನ ವಿರುದ್ಧ ಕೇಸು ದಾಖಲಾಗಿತ್ತು ಎಂದು ಹೇಳಲಾಗದು. ಎಂಎಲ್ ಸಿ ಕೇಸು ದಾಖಲಾದ ಮಾತ್ರಕ್ಕೆ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಕೇಸು ರದ್ದುಗೊಳಿಸಬೇಕೆಂದು ಕೋರುವುದಕ್ಕೆ ಆಧಾರವಾಗುವುದಿಲ್ಲ ” ಎಂದು ನ್ಯಾಯಾಲಯ ಆದೇಶಿಸಿದೆ.
“ಮದುವೆಯಾಗುವುದಾಗಿ ನಂಬಿಸಿ ವಂಚಿಸಿದರೆ ಅದು ಐಪಿಸಿಯಡಿ ವಂಚನೆ ಆಗುವುದಿಲ್ಲ. ಆದರೆ ಸಾಲವನ್ನು ಪಡೆದು ಅದನ್ನು ಮತ್ತೆ ಮರುಪಾವತಿ ಮಾಡದಿದ್ದರೆ ಐಪಿಸಿ ಸೆಕ್ಷನ್ 150ರ ಪ್ರಕಾರ ಅಪರಾಧದ ಉದ್ದೇಶದ ವಂಚನೆಯಾಗಲಿದೆ. ಆದ್ದರಿಂದ ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು, ತನಿಖೆಯನ್ನು ಎದುರಿಸಲೇಬೇಕು” ಎಂದು ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ, ಕೋರ್ಟ್ ಕೇಸಿನ ಸಮಗ್ರ ವಿವರಗಳ ಬಗ್ಗೆ ತನಿಖೆ ನಡೆಸಲಾಗದು, ತನಿಖೆ ಮಾಡುವುದು ತನಿಖಾಧಿಕಾರಿಯ ಕೆಲಸವಾಗಿದೆ, ಅದನ್ನು ಅವರು ಮಾಡಬೇಕಿದೆ. ಹಾಗಾಗಿ ಅರ್ಜಿದಾರರ ವಿರುದ್ಧದ ಎಫ್ಐಆರ್ ಈ ಹಂತದಲ್ಲಿಯೇ ರದ್ದುಗೊಳಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:
ವೃತ್ತಿಪರ ಚಲನಚಿತ್ರ ನಿರ್ದೇಶಕರಾಗಿದ್ದ ಚಲನಚಿತ್ರ ನಿರ್ದೇಶನ ಸ್ಟ್ಯಾನ್ಲಿ ಜೋಸೆಫ್ ಮತ್ತು ಶಾಜಿಯಾ ಅಸ್ರಾ ಇಬ್ಬರೂ ಸ್ನೇಹಿತರಾಗಿದ್ದರು. ಅವರ ನಡುವೆ ಅನೂನ್ಯತೆ ಬೆಳೆದಿತ್ತು. ಅವರು 2015, 2016ರಲ್ಲಿ ಜೊತೆಯಲ್ಲೇ ವಾಸ ಮಾಡುತ್ತಿದ್ದರು. ನಂತರ ಅರ್ಜಿದಾರರು ಆಸ್ಟ್ರೇಲಿಯಾಕ್ಕೆ ತೆರಳಿದ್ದರು, ಬಳಿಕ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಆನಂತರ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸ್ಟ್ಯಾನ್ಲಿ ಜೋಸೆಫ್ ವಿರುದ್ಧ ಎಂಎಲ್ ಸಿ ಪ್ರಕರಣ ದಾಖಲಾಗಿತ್ತು. ಆನಂತರ ಆತ ನಾಪತ್ತೆಯಾಗಿದ್ದನು.
ಆನಂತರ ಯಶವಂಪುತಪುರ ಪೊಲೀಸರಿಗೆ 2017ರ ಡಿ.1ರಂದು ದೂರು ನೀಡಿ ಶಾಜಿಯಾ ಅಸ್ರಾ, ಸ್ಟ್ಯಾನ್ಲಿ ಜೋಸೆಫ್ ತಮ್ಮಿಂದ 9.50 ಲಕ್ಷ ರೂ. ಹಣ ಪಡೆದಿದ್ದರು, ಆದರೆ ಕೇವಲ 2 ಲಕ್ಷ ರೂ, ಹಿಂತಿರುಗಿಸಿದ್ದಾರೆ. ಜೊತೆಗೆ ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ವಂಚನೆ ಎಸಗಿದ್ದಾರೆ ಎಂದು ದೂರಿದ್ದರು. ಪ್ರಕರಣದಲ್ಲಿ ಆರೋಪಿ ಚಿತ್ರ ನಿರ್ದೇಶಕನನ್ನು ಬಂಧಿಸಿದ ಆತ ಜಾಮೀನಿನ ಮೇಲೆ ಹೊರೆಗೆ ಬಂದಿದ್ದರು.
ಅರ್ಜಿದಾರರ ಪರ ವಕೀಲರು, ದೂರುದಾರರು 2017ರರ ಡಿ.15ರಂದು ಪೊಲೀಸರ ಮುಂದೆ ನೀಡಿರುವುದು ಪ್ರಾಥಮಿಕ ಮಾಹಿತಿಯಲ್ಲ. ಆಕೆಯ ಹೇಳಿಕೆ ಪ್ರಕಾರವೇ 2017ರ ನ.18ರಂದೇ ಎಂಎಲ್ ಸಿ ದಾಖಲಿಸಲಾಗಿತ್ತು. ಜೊತೆಗೆ ಅವರು ಯಾವುದೇ ವಂಚನೆ ಎಸಗಿಲ್ಲ. ದೂರುದಾರ ಮಹಿಳೆಗೆ ಮೊದಲೇ ಮದುವೆಯಾಗಿದ್ದು, ಆಕೆಗೆ ಮಗುವೂ ಇದೆ. ಹಾಗಾಗಿ ಆಕೆಯನ್ನು ಮತ್ತೆ ಮದುವೆಯಾಗುವ ಪ್ರಶ್ನೆಯೇ ಇಲ್ಲ ಎಂದು ವಾದಿಸಿದ್ದರು.
ಆದರೆ, ಪ್ರಾಸಿಕ್ಯೂಷನ್ ಪರ ವಕೀಲರು, ಯಶವಂತಪುರ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ, ಅವರಿಬ್ಬರು ಜೊತೆಯಲ್ಲೇ ಹೊಟೇಲ್ ನಲ್ಲಿ ಉಳಿದಿಕೊಂಡಿದ್ದ ದಾಖಲೆ ದೊರೆತಿವೆ. ಇನ್ನೂ ಪ್ರಗತಿ ಪ್ರಗತಿಯಲ್ಲಿದೆ, ಈ ಹಂತದಲ್ಲಿ ಎಫ್ಐಆರ್ ರದ್ದುಗೊಳಿಸಬಾರದು ಎಂದು ವಾದ ಮಂಡಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada