ಬೆಂಗಳೂರು,ಅ.13- ರಾಜಧಾನಿ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಭಾರೀ ಹಾನಿ ಉಂಟಾಗಿದ್ದರೆ, ಮತ್ತೊಂದು ಕಡೆ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಮಳೆಯಿಂದಾಗಿ ತರಕಾರಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಕಲಬುರಗಿ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಟೊಮೆಟೋ ಬೆಲೆ 60ರ ಗಡಿ ದಾಟಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗ ರೈತರಿಗೂ ನಷ್ಟವಾಗುತ್ತಿದೆ. ಮಳೆ ನೀರು ಹೊಲಗಳಿಗೆ ನುಗ್ಗಿ ವಿವಿಧ ಬೆಳೆಗಳು ಜಲಾವೃತಗೊಂಡು ನಷ್ಟ ಉಂಟಾಗಿದೆ. ಮಳೆಯಿಂದಾಗಿ ತರಕಾರಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಭಾರೀ ಮಳೆಯ ಕಾರಣ ನಮಗೆ ತರಕಾರಿ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಬೆಲೆಗಳು ಏರಿಕೆಯಾಗಿವೆ. ರೈತರು ಸಹ ಇಂತಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ತರಕಾರಿ ಬೆಲೆಗಳು ಗಗನಕ್ಕೆ ಏರಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಕೆಲವೇ ದಿನಗಳ ಹಿಂದೆ ಕೆ.ಜಿ.ಗೆ 20 ರಿಂದ 30 ರೂ. ಇದ್ದ ಉಳ್ಳಿಕಾಯಿ 100-130 ರೂ.ಗೆ ಏರಿಕೆಯಾಗಿದೆ. ಕೆಜಿಗೆ 15 ರಿಂದ 20 ರೂ. ಇದ್ದ ಕ್ಯಾರೆಟ್ ಈಗ ಕೆಜಿಗೆ 80 ರೂ. ಆಗಿದೆ. ಕೆಜಿಗೆ 10 ರೂ.ಇದ್ದ ಈರುಳ್ಳಿ ಈಗ 40-50 ರೂ. ಆಗಿದೆ. ಕೆಜಿಗೆ 8 ರೂ. ಇದ್ದ ಟೊಮೆಟೊ ಈಗ 20ಕ್ಕೂ ಅಕ ಬೆಲೆಗೆ ಮಾರಾಟವಾಗುತ್ತಿದೆ. ಆಲೂಗೆಡ್ಡೆ ಬೆಲೆ 25ರಿಂದ 30 ರೂ.ಗೆ ಏರಿಕೆಯಾಗಿದೆ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಹಾಗೆಯೇ ಬೆಂಡೆಕಾಯಿ, ಹಿರೇಕಾಯಿ, ಕುಂಬಳಕಾಯಿ, ಕೋಸು, ಗೆಡ್ಡೆಕೋಸು, ಸೊಪ್ಪುಗಳು ಎಲ್ಲವುದರ ಬೆಲೆಯೂ ಏರಿದೆ. 2-5ರೂ.ಗೆ ಸಿಗುತ್ತಿದ್ದ ಒಂದು ಕಟ್ಟು ಕೊತ್ತೂಂಬರಿ ಸೊಪ್ಪು ಈಗ 10 ರೂ. ಕೊಟ್ಟರೂ ಸಿಗುತ್ತಿಲ್ಲ. ತರಕಾರಿ ಜತೆಗೆ ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿದೆ.
ಟೊಮೆಟೋ 60 ರೂ. ಕೆಜಿಯಾಗಿದೆ. ಈರುಳ್ಳಿ ಬೆಲೆ 50 ರೂ. ಆಗಿದೆ. ನಾವು 10 ತರಕಾರಿ ತೆಗೆದುಕೊಳ್ಳುವವರು ಈಗ 2.5 ಕೆಜಿ ಖರೀದಿ ಮಾಡುತ್ತಿದ್ದೇವೆ ಎಂದು ಗ್ರಾಹಕರು ತಿಳಿಸಿದ್ದಾರೆ. ದುಪ್ಪಟ್ಟು ದರ ಕೊಟ್ಟರೂ ತಾಜÁ ತರಕಾರಿ ಸಿಗುತ್ತಿಲ್ಲ. ತರಕಾರಿ ಮಾರಲು ರೈತರು ಮಾರುಕಟ್ಟೆಗೆ ಬರಲು ಆಗುತ್ತಿಲ್ಲ. ಕಷ್ಟಪಟ್ಟು ಬಂದರೂ ಸಮಯದ ಅಭಾವದಿಂದ ತಮಗೆ ಸಿಕ್ಕ ಬೆಲೆಗೆ ಮಾರಿಬಿಡುತ್ತಾರೆ.
ಆದರೆ ಮಧ್ಯವರ್ತಿಗಳು, ವ್ಯಾಪಾರಿಗಳು ಲಾಕ್ಡೌನ್ ಸಂದರ್ಭದಲ್ಲಿ ದರ ಏರಿಸಿ ಲಾಭ ಮಾಡುತ್ತಿದ್ದಾರೆ. ತರಕಾರಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಇರುವುದರಿದ ಬೆಲೆ ದುಪ್ಪಟ್ಟಾಗಿದೆ. ಹೀಗಾಗಿ ಹೋಲ್ಸೇಲ್ ದರದಲ್ಲಿ ಟೊಮೇಟೊ ಕೆಜಿಗೆ 5 ರೂ.ನಂತೆ ಸಿಕ್ಕರೆ ಗ್ರಾಹಕರಿಗೆ 40ಕ್ಕೂ ಅಕ ಬೆಲೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ದಸರಾ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಹೆಚ್ಚು ದರ ನೀಡಿ ಖರೀದಿ ಮಾಡುವುದು ಅನಿವಾರ್ಯವಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿರುವ ಜನರಿಗೆ ತರಕಾರಿ ಬೆಲೆ ಏರಿಕೆ ಹೊಸ ಸಂಕಷ್ಟ ತಂದಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ನವದೆಹಲಿಯಲ್ಲೂ ತರಕಾರಿ ದರ ಏರಿಕೆಯಾಗಿದೆ. ಓಕ್ಲಾ ಮಾರುಕಟ್ಟೆಯಲ್ಲಿ ಟೊಮೆಟೋ ದರ 10 ರಿಂದ 20 ಇದ್ದದ್ದು ಈಗ 30 ರಿಂದ 40 ರೂ.ಗೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿಯೂ ಬೆಳೆಗಳಿಗೆ ಹಾನಿಯಾಗಿದೆ.
ಮಳೆ ಮುಂದುವರಿಕೆ: ಅರಬ್ಬಿ ಸಮುದ್ರದ ಪೂರ್ವ ಮಧ್ಯಭಾಗ ಮತ್ತು ಉತ್ತರ ಅಂಡಮಾನ್ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳು ಸೇರಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 16ರ ತನಕ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಿದೆ.
ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 14.66 ಮಿ. ಮೀ. ಮಳೆಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ 25.78 ಮಿ. ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 11.18 ಮಿ. ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ 7.03 ಮಿ. ಮೀ ಮಳೆಯಾಗಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2858.7 ಅಡಿಗಳು. ಒಳಹರಿವು 1478 ಕ್ಯುಸೆಕ್ ಆಗಿದೆ.