ನಾನು ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಸ್ವತಃ ಭವಾನಿ ರೇವಣ್ಣ ಘೋಷಿಸಿದಾಗ ಕುಟುಂಬ ಇಕ್ಕಟ್ಟಿಗೆ ಸಿಲುಕಿತ್ತು. ಇದು ವಿರೋಧ ಪಕ್ಷಗಳ ಚರ್ಚೆಗೆ ಆಹಾರವಾಗಿತ್ತು. ಇದರಿಂದ ದಳಪತಿಗಳ ಮನೆಯಲ್ಲಿ ಹೊತ್ತಿದ್ದ ರಾಜಕೀಯ ಬೆಂಕಿ ತಣ್ಣಗಾಗಿಸಲು ರೇವಣ್ಣ ಬಲವಂತವಾಗಿ ಮಧ್ಯ ಪ್ರವೇಶಿಸಿದ್ದರು. ಹಾಸನ ಜೆಡಿಎಸ್ ಅಭ್ಯರ್ಥಿ ಸಂಬಂಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಎಚ್ .ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ರೇವಣ್ಣ ಹೇಳಿದ್ದರು.
ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಸ್ವರೂಪ್ ಪ್ರಕಾಶ್ ಸಮರ್ಥ ಅಭ್ಯರ್ಥಿಯಲ್ಲ ಎಂದು ತಿಳಿದಿರುವ ಕೆಲವು ಜೆಡಿಎಸ್ ನಾಯಕರು ಪ್ರೀತಂ ವಿರುದ್ಧ ಹಾಸನದಿಂದ ರೇವಣ್ಣ ಅವರನ್ನೇ ಕಣಕ್ಕಿಳಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಹಾಸನ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಭವಾನಿ, ಚನ್ನರಾಯಪಟ್ಟಣ ಕ್ಷೇತ್ರಕ್ಕೆ ಸಮೀಪವಾಗಿರುವ ಕೆ.ಆರ್ ಪೇಟೆಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಜೆಡಿಎಸ್ ಸರ್ಕಲ್ ನಲ್ಲಿ ಮಾತುಗಳು ಕೇಳಿ ಬರುತ್ತಿವೆ. ಕೆ.ಆರ್ ಪೇಟೆಯಿಂದ ದೇವೇಗೌಡರ ಪುತ್ರಿ ಅನುಸೂಯ ಅಥವಾ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವಂತೆ ಗೌಡರ ಕುಟುಂಬದ ಕೆಲ ನಿಷ್ಠಾವಂತ ನಾಯಕರು ಒತ್ತಾಯ ಮಾಡುತ್ತಿದ್ದಾರೆ, ಇದರಿಂದ ಸಚಿವ ಕೆ.ಸಿ ನಾರಾಯಣಗೌಡ ಅವರನ್ನು ಸೋಲಿಸಬಹುದು ಎಂಬ ಲೆಕ್ಕಾಚಾರವಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಕೆಆರ್ ಪೇಟೆ ಕ್ಷೇತ್ರದಲ್ಲಿ ಮಂಜು ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದರೂ, ಪರಾಜಿತ ಅಭ್ಯರ್ಥಿ ದೇವರಾಜ್, ಜೆಡಿಎಸ್ ಮುಖಂಡರಾದ ಕೃಷ್ಣೇಗೌಡ ಮತ್ತು ಶ್ರೀನಿವಾಸ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ತಮ್ಮ ಬೆಂಬಲಿಗರ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ.
ಚಂದನ್ ಗೌಡ ಸೇರಿ ಕೆಲ ನಾಯಕರು ಪಕ್ಷೇತರರಾಗಿ ಕಣಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಜಾಡು ಹಿಡಿದು ಭಿನ್ನಮತದ ಆತಂಕದಲ್ಲಿರುವ ಜೆಡಿಎಸ್ ನಾಯಕರು ಮಂಡ್ಯದಲ್ಲಿ ಯಾವುದೇ ಸ್ಥಾನ ಕಳೆದುಕೊಳ್ಳುವ ರಿಸ್ಕ್ ತೆಗೆದುಕೊಳ್ಳಲು ಬಯಸುತ್ತಿಲ್ಲ. ಹೀಗಾಗಿ ಭವಾನಿ ಸ್ಪರ್ಧೆ ಸಂಬಂಧ ಹೆಚ್ ಡಿ ದೇವೇಗೌಡರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. 2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ರುಚಿ ಕಂಡ ನಂತರ ಗೌಡರ ಕುಟುಂಬ ಸದಸ್ಯರು ಕೂಡ ಜಾಗರೂಕರಾಗಿದ್ದಾರೆ. ಅಂತಿಮ ಘೋಷಣೆಗೆ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಯಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada