ತೆರೆಯ ಮೇಲೆ ಬಣ್ಣ ಹಚ್ಚಿ ಮಿಂಚುವ ಸಿನಿಮಾ ತಾರೆಯರ ಬದುಕು ತೆರೆಯ ಹಿಂದೆ ಬೇರೆಯ ರೂಪದಲ್ಲಿ ಇರುತ್ತದೆ. ಎಲ್ಲರಿಗೂ ಸಿನಿಮಾ ಪಯಣ ಕೇಕ್ ವಾಕ್ ಆಗಿರುವುದಿಲ್ಲ. ಅಂದರೆ ಈ ಪಯಣ ಸುಲಭ ಆಗಿರುದಿಲ್ಲ. ಆದರೂ ಹಲವರು ಛಲ ಬಿಡದೆ, ಅಂದು ಕೊಂಡಿದ್ದನ್ನು ಸಾಧಿಸಿ ತೆರೆಯ ಮೇಲೆ ಮಿಂಚುತ್ತಾರೆ.
ಈ ಸಾಲಿಗೆ ಕನ್ನಡದ ನಟ ನೀನಾಸಂ ಸತೀಶ್ ಕೂಡ ಸೇರಿ ಕೊಳ್ಳುತ್ತಾರೆ. ಸತೀಶ್ ಇಂದು ಕನ್ನಡದ ಬೇಡಿಕೆ ನಟರಲ್ಲಿ ಒಬ್ಬರು. ಆದರೆ ಅವರ ತೆರೆ ಹಿಂದಿನ ಜರ್ನಿ ಅಷ್ಟಾಗಿ ಎಲ್ಲರಿಗೂ ಗೊತ್ತಿಲ್ಲ. ಸತೀಶ್ ಅವರಿಗೆ ಗಾಡ್ ಫಾದರ್ ಇರಲಿಲ್ಲ. ಆದರೆ ಅವರು ಹಲವು ವರ್ಷಗಳ ಒದ್ದಾಟದ ಬಳಿಕ ನಾಯಕ ನಟನಾಗಿ ಬೆಳೆದು ನಿಂತಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ನಟ ನೀನಾಸಂ ಸತೀಶ್, ತಮ್ಮ ಬದುಕಿನ ಹೀರೋ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಸತೀಶ್ ಅವರ ಬದುಕಿನ ಹೀರೋ ಮತ್ಯಾರು ಅಲ್ಲ ಅವರ ತಾಯಿ ಎನ್ನುವುದನ್ನು ಹೇಳಿ ಕೊಂಡಿದ್ದಾರೆ
ಬಿದ್ದವ ಮೇಲೆ ಏಳಲು ಅಮ್ಮನೇ ಸ್ಪೂರ್ತಿ: ನೀನಾಸಂ ಸತೀಶ್!
ನಟ ನೀನಾಸಂ ಸತೀಶ್ ಸಿನಿಮಾ ಹಾದಿ ಸುಲಭವಾಗಿ ಇರಲಿಲ್ಲ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದು, ಇಂದು ನಾಯಕ ನಟನಾಗಿ ಬೆಳೆದಿದ್ದಾರೆ. ಈ ಮಧ್ಯೆ ನಾಯಕ ಆದ ಮೇಲು ನೀನಾಂ ಒಮ್ಮೆ ನೆಲ ಕಚ್ಚಿದ್ದರು. ಟೈಗರ್ ಗಲ್ಲಿ ಇನಿಮಾ ಸೋತಾಗ, ಸಿನಿಮಾ ಬಿಟ್ಟು ಊರಿಗೆ ಹೋಗಿ ಬಿಡುವ ಯೋಚನೆ ಮಾಡಿದ್ದರಂತೆ ಸತೀಶ್. ಆದರೆ ಆಗ ಅವರಿಗೆ ಸ್ಪೂರ್ತಿ ಆಗಿದ್ದು ಅವರ ತಾಯಿ ಚಿಕ್ಕಾಯಾಮ್ಮ. ಅವರ ತಾಯಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ಬಳಿಕವೂ ಮತ್ತೆ ಎದ್ದು ನಿಲ್ಲುತ್ತಿದ್ದರು, ಅವರಿಗೆ ಅತೀವ ಅನಾರೋಗ್ಯ ಕಾಡಿದಾಗಲು ಕೂಡ ಅವರು ನಗು ನಗುತ್ತಾ ಇರುತ್ತಿದ್ದರು. ಅಮ್ಮನ ನಗುವೇ ಸತೀಶ್ ಅವರು ‘ಅಯೋಗ್ಯ’ ಚಿತ್ರ ಮಾಡಿ ಗೆಲ್ಲಲೂ ಕಾರಣ ಆಗಿದೆ. ಇಲ್ಲವಾದರೆ ಸತೀಶ್ ಸೋಲು ಒಪ್ಪಿಕೊಂಡು, ಗಂಟು ಮೂಟೆ ಕಟ್ಟಿ ಕೊಂಡು ಊರಿಗೆ ಹೋಗಿ ಬಿಡುತ್ತದ್ದರು.
ಸತೀಶ್ ಎಂದರೆ ಅಮ್ಮನಿಗೆ ಪ್ರಾಣ!
ನಟ ನೀನಾಸಂ ಸತೀಶ್ ಬೆಳೆದಿದ್ದು ಬಡತನದಲ್ಲಿ. ಅಪ್ಪನ ಆಸರೆ ಮನೆಗೆ ಸರಿಯಾಗಿ ಇಲ್ಲದಾಗ, ಅಮ್ಮನೇ ಎಲ್ಲಾ ಆಗಿದ್ದರು. ಊಟಕ್ಕೆ ಕಷ್ಟ ಆದಾಗಲೂ ಅಮ್ಮ ಕಷ್ಟಪಟ್ಟು ಮಕ್ಕಳಿಗೆ ಊಟ ಹಾಕುತ್ತಿದ್ದಳು. ಇನ್ನು ಸಂಸಾರದ ತಾಪತ್ರಯ ತಾಳಲಾರದೆ ಚಿಕ್ಕಾಯಮ್ಮ ಒಮ್ಮೆ ಆತ್ಮಹತ್ಯೆಗೆ ಮುಂದಾಗಿ ಬಾವಿಗೆ ಹಾರಿದ್ದರಂತೆ. ಆಗ ಅವರು ಬದುಕಿ ಬಂದರು. ಅಲ್ಲಿಂದ ಮುಂದೆ ಅವರು ಬದುಕಿದ್ದೇ ಮಕ್ಕಳಿಗಾಗಿ. ಮಕ್ಕಳಿಗೋಸ್ಕರ ಅಂತ ಹೇಳುತ್ತಾ ನಟ ಸತೀಶ್ ಅಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಅಮ್ಮನಿಗಾಗಿ ವಿಶೇಷ ಹಾಡು ಬರೆದ ಸತೀಶ್!
ಸತೀಶ್ ಅವರ ತಾಯಿ ಇತ್ತೀಚೆಗೆ ದಿವಂಗತರಾದರು. ಅಮ್ಮನನ್ನು ಪ್ರಾಣದಂತೆ ಕಾಣುತ್ತಿದ್ದ ಸತೀಶ್ ಅವರನ್ನು ಬಿಟ್ಟು ಹೋಗಿದ್ದಾರೆ ಚಿಕ್ಕಾಯಮ್ಮ. ಸತೀಶ್ ತಮ್ಮ ಅಮ್ಮನನ್ನು ವರ್ಣಿಸಿ ಹಾಡು, ಅಂದದ ಹಾಡು ಮಾಡಿ ವೇದಿಕೆ ಮೇಲೆ ಹಾಡಿದರು. “ಈ ಹಾಡು ನಿನಗಾಗಿ ಹಾಡುವೆನು, ತಿಲಿ ನೀಲಿ ಆಗಸದಿ ನೀ ಎಲ್ಲಿರುವೆ ಹೇಳೆ ಅವ್ವ” ಎನ್ನುವ ಸಾಲಿನಿಂದ ಹಾಡು ಶುರುವಾಗುತ್ತದೆ. ಸತೀಶ್ ಬರೆದ ಸಾಲುಗಳು ಅರ್ಥಪೂರ್ಣ ಮತ್ತು ಭಾವ ಪೂರ್ಣ ಆಗಿ ಮೂಡಿ ಬಂದಿವೆ.
ಸತೀಶ್ ಕೈಯಲ್ಲಿ ಈಗ 7 ಚಿತ್ರಗಳು!
ಸಿನಿಮಾ ಸಹವಾಸ ಸಾಕು ಎಂದು ಕೊಂಡಿದ್ದ ಸತೀಶ್ ಅವರ ಕೈಯಲ್ಲಿ ಈಗ 7 ಚಿತ್ರಗಳು ಇವೆ. ಅಮ್ಮನ ದಯೆಯಿಂದ ಸತೀಶ್ ಸಕ್ಸಸ್ ಕಾಣುವತ್ತ ಹೆಜ್ಜೆ ಇಟ್ಟಿದ್ದಾರೆ. ಜೊತೆಗೆ ತಮಿಳಿನ ‘ಪಗೈ ವನುಕ್ಕು ಅರುಲ್ವಾಯ್’ ಚಿತ್ರದಲ್ಲಿ ಸತೀಶ್ ವಿಶೇಷ ಪಾತ್ರವನ್ನು ಮಾಡುತ್ತಿದ್ದಾರೆ. ಇನ್ನು ಕನ್ನಡದ ‘ಪೆಟ್ರೊಮ್ಯಾಕ್ಸ್’, ‘ಗೋದ್ರಾ’, ‘ದಸರಾ’, ‘ಮಯ ನೇಮ್ ಈಸ್ ಸಿದ್ದೇಗೌ’, ‘ಪರಿಮಳಾ ಟಾಕೀಸ್’, ‘ಮ್ಯಾಟ್ನಿ’ ಚಿತ್ರಗಳು ಸತೀಶ್ ಕೈಯಲ್ಲಿ ಇವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada