ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಲೆ ಪಾವತಿಗೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ನೀಡಿದ್ದ ಗಡುವಿನಲ್ಲಿ 5 ಕಾರ್ಖಾನೆಗಳು ಒಟ್ಟು 13.65 ಕೋಟಿ ರೂ ಬಾಕಿ ಪಾವತಿಸಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಂಕರ ಪಾಟೀಲ್ ಮುನೇನಕೊಪ್ಪ ,ಗಡುವು ಮುಗಿದರೂ 15.91 ಕೋಟಿ ರೂ ಬಾಕಿ ಉಳಿಸಿಕೊಂಡಿರುವ ಎರಡು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಈಗಾಗಲೇ ನೋಟಿಸ್ ಜಾರಿಗೊಳಿಸಿದ್ದು ರೈತರಿಗೆ ಬಾಕಿ ಪಾವತಿಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 87 ನೊಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು ಇವುಗಳ ಪೈಕಿ 64 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿವೆ ಕಳೆದ 2020 – 21ನೇ ಹಂಗಾಮಿನಲ್ಲಿ ಕಾರ್ಖಾನೆಗಳು ರೈತರಿಗೆ ಕಬ್ಬು ಬಿಲ್ ಪಾವತಿಸಿರುವ ಪ್ರಮಾಣ ಶೇಕಡ 99.97 ರಷ್ಟಿದೆ. ಮೂರು ದಿನಗಳ ಹಿಂದೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದ ಮೊತ್ತ 42.17 ಕೋಟಿ ರೂ ಗಳಾಗಿದ್ದು, ಎರಡು ದಿನಗಳ ಬಳಿಕ ಬಾಕಿ ಮೊತ್ತ 15.91 ಕೋಟಿ ರೂ ಗೆ ಇಳಿಕೆಯಾಗಿದೆ, ಎಂದು ತಿಳಿಸಿದರು.
ಕೇಂದ್ರ ಸರ್ಕಾರವು 2021- 22ನೇ ಹಂಗಾಮಿಗೆ ಸಂಬಂಧಪಟ್ಟಂತೆ ನ್ಯಾಯ ಮತ್ತು ಲಾಭದಾಯಕ ಬೆಲೆ ಶೇಕಡ 10ರ ಇಳುವರಿಗೆ ಪ್ರತಿ ಟನ್ ಕಬ್ಬಿಗೆ 2900 ರೂ ನಿಗದಿಪಡಿಸಿ ಆದೇಶ ಹೊರಡಿಸಿರುತ್ತದೆ ಎಂದು ಹೇಳಿದರು.