ಡಾ. ಕೃಷ್ಣ ವಾಗೀಶ್ ಪ್ರಸಿದ್ಧ ಸಂಗೀತಕಾರರು ಹಾಗೂ ಪ್ರಸಾರ ಭಾರತಿಯ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಜನರಲ್.ಮೈಸೂರಿನವರಾದ ಕೆ. ವಾಗೀಶ್ 1954ರ ಫೆಬ್ರುವರಿ 7ರಂದು ಜನಿಸಿದರು.ಹೆಸರಾಂತ ಟೈಗರ್ ವರದಾಚಾರ್ಯರ ಸಂಗೀತ ಕಲಾಪದ್ಧತಿಗೆ ಸೇರಿದ ಕೆ ವಾಗೀಶ್ ಅವರು ಸಂಗೀತ, ಸಂಸ್ಕೃತ ಮತ್ತು ಸಾಂಪ್ರದಾಯಿಕ ಮೌಲ್ಯಗಳಿಂದ ಸಮೃದ್ಧವಾದ ನೈಸರ್ಗಿಕ ಪರಿಸರದಲ್ಲಿ ಬೆಳೆದರು. ಇದು ಅವರ (ತಾಯಿಯ ಸಹೋದರಿ) ಚಿಕ್ಕಮ್ಮ, ಸಂಗೀತವಿದುಷಿ ಖ್ಯಾತ ಕರ್ನಾಟಕ ಗಾಯಕಿ ಎಚ್. ಎಸ್. ಮಹಾಲಕ್ಷ್ಮೀ ಅವರಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದಲ್ಲಿ ದೀಕ್ಷೆ ಪಡೆಯಲು ಬಲವಾದ ನೆಲೆಯನ್ನು ಒದಗಿಸಿತು. ಮಹಾಲಕ್ಷ್ಮಿ ಅವರು ವಾಗೀಶರಿಗೆ ಅತ್ಯಂತ ವ್ಯವಸ್ಥಿತವಾದ ತರಬೇತಿ ನೀಡಿ ಬೆಳೆಸಿದರು.ಸಂಗೀತದ ಜೊತೆಗೆ ವಾಗೀಶ್ ತಮ್ಮ ಶೈಕ್ಷಣಿಕ ಅಧ್ಯಯನವನ್ನೂ ಮುಂದುವರೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದರು. ಜೊತೆಗೆ ಯೂನಿವರ್ಸಿಟಿ ಆಫ್ ಫೈನ್ ಆರ್ಟ್ಸ್ ಮೈಸೂರಿನಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡಿ ಚಿನ್ನದ ಪದಕದೊಂದಿಗೆ ಪ್ರಪ್ರಥಮ ಸ್ಥಾನದ ಸಾಧನೆ ಮಾಡಿದರು. ದೆಹಲಿ ವಿಶ್ವವಿದ್ಯಾಲಯಕ್ಕೆ ಮಹಾನ್ ಸಂಗೀತಕಾರ ಟಿ. ಎನ್. ಕೃಷ್ಣನ್ ಅವರ ಮಾರ್ಗದರ್ಶನದಲ್ಲಿ “Aspects of Mantra, Tantra, yantra and Agama in the compositions of Muthuswamy Deekshitar” ಎಂಬ ಮಹಾಪ್ರಬಂಧ ಮಂಡಿಸಿ ಡಾಕ್ಟೊರೇಟ್ ಗಳಿಸಿದರು. ಭಾರತೀಯ ವಿದ್ಯಾಭವನದಿಂದ ಸಾರ್ವಜನಿಕ ಸಂಪರ್ಕ ಮತ್ತು ಆಡಳಿತ ಶಾಸ್ತ್ರದಲ್ಲಿ ಉನ್ನತ ದರ್ಜೆಯಲ್ಲಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಪದವಿಯನ್ನೂ ತಮ್ಮದಾಗಿಸಿಕೊಂಡರು.ವಾಗೀಶ್ ಶಾಲಾ ಕಾಲೇಜುಗಳಲ್ಲಿ, ಅಂತರ ಕಾಲೇಜು – ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅನೇಕ ಸ್ಪರ್ಧಾ ಬಹುಮಾನಗಳನ್ನು ಗೆಲ್ಲುತ್ತ ಗಮನಾರ್ಹ ಪ್ರತಿಭೆಯಾಗಿ ಬೆಳೆದರು. ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್, ಚೆನ್ನೈ ಮ್ಯೂಸಿಕ್ ಅಕಾಡೆಮಿ ನಡೆಸಿದ ಸಂಗೀತ ಸ್ಪರ್ಧೆಗಳಲ್ಲಿ ಜಯಗಳಿಸಿ ಎಲ್ಲೆಡೆ ಹೆಸರಾದರು. ಅಖಿಲ ಭಾರತ ಆಕಾಶವಾಣಿ ಸ್ಪರ್ಧೆಗಳಲ್ಲಿ ಜಯಗಳಿಸಿ ನೇರ ಆಕಾಶವಾಣಿ ಗ್ರೇಡೆಡ್ ಕಲಾವಿದರೆನಿಸಿ ಮುಂದೆ ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾಗಿಯೂ ಪರಿಗಣಿತರಾದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada