ಕರ್ನಾಟಕದ ಗಡಿಯಲ್ಲಿ ಮರಾಠಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ತಮ್ಮ ಸರಕಾರ ಬೆಂಬಲ ನೀಡುತ್ತದೆ

 

ಬೆಂಗಳೂರು, ಮೇ 2: ಕರ್ನಾಟಕದ ಗಡಿಯಲ್ಲಿ ಮರಾಠಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ತಮ್ಮ ಸರಕಾರ ಬೆಂಬಲ ನೀಡುತ್ತದೆ ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಪುಣೆಯಲ್ಲಿಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಜಿತ್‌ ಪವಾರ್‌ ಈ ಅಸಂಬದ್ಧ ಹೇಳಿಕೆ ನೀಡಿದ್ದು, ಆ ಬಗ್ಗೆ ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  “ಅಜಿತ್‌ ಪವಾರ್‌ ಅವರು ಚೀನಾ ಮನಃಸ್ಥಿತಿಯ ಆಕ್ರಮಣಶೀಲತೆ ಹೊಂದಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅವರಿನ್ನೂ ಗಡಿಗಳ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದರೆ, ಅವರ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬಹುದು” ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್‌ ಕೊಟ್ಟಿದ್ದಾರೆ.

 

ಈ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆ ಹೇಳಿಕೆಯ ಪೂರ್ಣಪಾಠ ಇಲ್ಲಿದೆ;

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಹಿಂದೆ; ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದ ಅವರು, ಪುನಾ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಖಂಡನೀಯ.

ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ನಮ್ಮ ಸರಕಾರದ ಬೆಂಬಲವಿದೆ ಎಂದು ಪುಣೆಯಲ್ಲಿ ಅವರಿಂದು ʼಅಪರಿಪಕ್ವʼ ಹೇಳಿಕೆ ನೀಡಿದ್ದಾರೆ. ಹಾಗೆ ನೋಡಿದರೆ, ಕನ್ನಡಿಗರೇ ಹೆಚ್ಚಿರುವ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೂ ಸೇರ್ಪಡೆಯಾಗಿವೆ ಎಂಬುದನ್ನು ಪವಾರ್ ಮರೆಯಬಾರದು.

1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. 1950ರಲ್ಲಿ ಭಾರತ ಗಣರಾಜ್ಯವಾಗಿ ಅವತರಿಸಿತು. ಅದಾದ ಮೇಲೆ ಭಾಷಾವಾರು ಪ್ರಾಂತ್ಯಗಳು ರಾಜ್ಯಗಳಾದವು. ಸ್ವಾತಂತ್ರ್ಯದ ʼಅಮೃತ ಮಹೋತ್ಸವʼ ಈ ಕಾಲದಲ್ಲೂ ಅಜಿತ್ ಪವಾರ್ ಇನ್ನೂ ಗಡಿ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದರೆ, ಅವರ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬೇಕಷ್ಟೇ.

ಚೀನಾದಂತಹ ಮನೋಭಾವದಿಂದ ಹೊರಬರಲಿ

ತಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಗಡಿ ಜನರ ಬಗ್ಗೆ ಕಳಕಳಿಯೂ ಇಲ್ಲ. ಎಂದೋ ಮುಗಿದ ವಿಷಯ ಇಟ್ಟುಕೊಂಡು ʼರಾಜಕೀಯ ಪ್ರಹಸನʼ ನಡೆಸುತ್ತಿದ್ದಾರಷ್ಟೇ. ʼಚೀನಾ ಮನಃಸ್ಥಿತಿಯ ಆಕ್ರಮಣಶೀಲʼ ಮನೋಭಾವದಿಂದ ಅಜಿತ್ ಪವಾರ್ ಹೊರಬರುವುದು ಒಳ್ಳೆಯದು.

ಸಹೋದರತ್ವ ಭಾವದಿಂದ ಬದುಕಬೇಕಾದ ಎರಡೂ ಭಾಷೆಗಳ ಜನರನ್ನು ದಿಕ್ಕು ತಪ್ಪಿಸಲು ಮತ್ತೆಮತ್ತೆ ಗಡಿ ವಿಷಯ ಕೆದಕುತ್ತಾ, ಆ ಗಡಿ ಪ್ರದೇಶಗಳು ಅಭಿವೃದ್ಧಿಯನ್ನೇ ಕಾಣದಂತೆ ನೋಡಿಕೊಳ್ಳುವ ರಾಜಕೀಯ ಹುನ್ನಾರವಷ್ಟೇ ಇದು. ಇಂಥ ಪ್ರವೃತ್ತಿ ಭಾರತದ ಐಕ್ಯತೆ ಮತ್ತು ಒಕ್ಕೂಟ ವ್ಯವಸ್ಥೆಗೇ ಗಂಡಾಂತರಕಾರಿ.

ಬೆಳಗಾವಿಯಲ್ಲಿ ಸುವರ್ಣಸೌಧ

2006ರಲ್ಲಿ ಕೇಂದ್ರದ ಯುಪಿಎ ಸರಕಾರದಲ್ಲಿ ಗೃಹ ಸಚಿವರಾಗಿದ್ದ ತಮ್ಮದೇ ರಾಜ್ಯದ ನಾಯಕರನ್ನು ʼಕೀಲಿಕೈʼ ಮಾಡಿಕೊಂಡು ಇದೇ ಅಜಿತ್ ಪವಾರ್ʼರಂಥ ನಾಯಕರು ನಡೆಸಿದ ಕಿತಾಪತಿ ಕಾರಣಕ್ಕೆ, ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾನು, ಅವರೆಲ್ಲರಿಗೂ ಸಡ್ಡು ಹೊಡೆದು ಬೆಳಗಾವಿಯಲ್ಲಿ ʼಸುವರ್ಣ ವಿಧಾನಸೌಧʼ ನಿರ್ಮಿಸುವ ಐತಿಹಾಸಿಕ ನಿರ್ಧಾರ ಕೈಗೊಂಡೆ.

ಬೆಳಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ ʼಒಡಕು ಪ್ರವೃತ್ತಿʼಯನ್ನು ಮರಾಠಿ ನಾಯಕರು ಬಿಡಬೇಕು. ಇಲ್ಲವಾದರೆ, ದೇಶದ ಉದ್ದಗಲಕ್ಕೂ ಈಗಲೂ ಬೂದಿಮುಚ್ಚಿದ ಕೆಂಡದಂತಿರುವ ಇಂಥ ಸೂಕ್ಷ್ಮ ವಿಷಯಗಳು ಮುಂಚೂಣಿಗೆ ಬಂದು ದೇಶವೇ ಛಿದ್ರವಾಗುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಂಡು, ಕೇಂದ್ರವು ಇಂಥ ʼಆಕ್ರಮಣಶೀಲʼ ಮನಃಸ್ಥಿತಿಯುಳ್ಳವರ ಕಿವಿ ಹಿಂಡಬೇಕು.

ಎಲ್ಲ ಭಾಷಿಕರು ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರಿದ್ದಾರೆ. ಅವರ ಒಳಿತಿನ ಬಗ್ಗೆ ಅಜಿತ್ ಪವಾರ್ ಮಾತನಾಡಲಿ. ನಮ್ಮ ರಾಜ್ಯ ಸರಕಾರದ ಜತೆಯೂ ಚರ್ಚಿಸಲಿ. ಈ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡಿಗರೇ ಎನ್ನುವ ವಿಶಾಲ ಭಾವ ನಮ್ಮದು. ಇದನ್ನು ಪವಾರ್ ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಅವರಿಂದ "ರೈತ" ಚಿತ್ರದ ಪೋಸ್ಟರ್ ಬಿಡುಗಡೆ...!

Mon May 2 , 2022
ನಾವೆಲ್ಲಾ ಇಂದು ನೆಮ್ಮದಿಯ ಜೀವನ ನಡೆಸಿತ್ತಿರಲು ಮುಖ್ಯ ಕಾರಣ ರೈತ. ಆತ ಬೆಳೆದ ಆಹಾರ ತಿಂದು ನಾವು ಸುಖವಾಗಿದ್ದೇವೆ. ಅಂತಹ “ರೈತ” ನ ಕುರಿತು ಬರುತ್ತಿರುವ ಚಿತ್ರ “ರೈತ”. ಇತ್ತೀಚೆಗೆ ಈ ಚಿತ್ರದ ಪೋಸ್ಟರನ್ನು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಬಿಡುಗಡೆ ಮಾಡಿ ಶುಭ ಕೋರಿದರು. ಕುಮುದ ಆರ್ಟ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಅಮರನಾಥ ರೆಡ್ಡಿ ವಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರೈತ ಬೇರೆ ಯಾರಿಂದಲೂ ಬಡ್ಡಿಗಾಗಿ ಹಣ ಪಡೆದು ಕಷ್ಟ ಪಡಬಾರದು. […]

Advertisement

Wordpress Social Share Plugin powered by Ultimatelysocial