ಕರ್ನಾಟಕ ನಾಡಿನ ಜನರ ಚಡ್ಡಿ ಬಿಚ್ಚಿಸುವ ಕೆಲಸ ನಿಮ್ಮಿಂದ ಆಗಬಾರದು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಬಾಗಲಕೋಟೆಯ ನವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ ರಾಜ್ಯದಲ್ಲಿ ಚಡ್ಡಿ ಸುಡುವ ಮತ್ತು ಬಿಚ್ಚುವ ಕೆಲಸ ನಡೆಯುತ್ತಿದ್ದು ಇವೆಲ್ಲವನ್ನು ಬಿಟ್ಟು ನಿಮ್ಮ ನಿಮ್ಮ ಹೃದಯದಲ್ಲಿರುವ ಸಂಘರ್ಷದ ಕಿಚ್ಚು ಸಮಾಜದಲ್ಲಿ ಸಾರ್ವಜನಿಕರ ಜೀವನದಲ್ಲಿ ಸಾಮರಸ್ಯವನ್ನು ಹಾಳು ಮಾಡುವ ನಿಮ್ಮ ನಡವಳಿಕೆಗಳಿಗೆ ಬೆಂಕಿ ಹಚ್ಚಿರಿ ಎಂದು ಹೇಳಿದರು.
ನವನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ವಿಧಾನಪರಿಷತ್ ಚುನಾವಣೆ ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಚಂದ್ರಶೇಖರ ಲೋನಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ವೇದಿಕೆಯಲ್ಲಿ ಬುದ್ಧ-ಬಸವ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಿಕ್ಷಕರ ಸಮಸ್ಯೆಗಳ ಬಗ್ಗೆ ಶಿಕ್ಷಕರ ಜೊತೆ ಕುಮಾರಸ್ವಾಮಿಯವರು ಸಂವಾದ ನಡೆಸಿದರು.
ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದರು.
ಮತ್ತೊಮ್ಮೆ ರಾಜ್ಯದಲ್ಲಿ ಜೆಡಿಎಸ್ ಗೆ ಅಧಿಕಾರ ನೀಡಿ ತಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವೆ ಎಂದು ಎಚ್ಡಿಕೆ ಭರವಸೆ ನೀಡಿದರು.
ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ಮಾಜಿ ಸಿಎಂ ಮನವಿ ಮಾಡಿದರು.
ಅಕಾಲಿಕ ಮಳೆಯಿಂದ ತೊಂದರೆ ಅನುಭವಿಸಿದ ರೈತರ ಬಗ್ಗೆ ಸರ್ಕಾರ ಗಮನ ಹರಿಸುವುದನ್ನು ಬಿಟ್ಟು ಕೇವಲ ವಿಧಾನ ಪರಿಷತ್ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದಾರೆ.
ಹೀಗಾದರೆ ರಾಜ್ಯದ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಅವರು ಯಾರು ಎಂದು ಪ್ರಶ್ನೆ ಮಾಡಿದರು.
ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಏಕೈಕ ಸರ್ಕಾರವೆಂದರೆ ಅದು ಬಿಜೆಪಿ ಸರ್ಕಾರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada